ಬುಧವಾರ, ಡಿಸೆಂಬರ್ 17, 2008

ಓ ಮೌನವೇ ನೀ ಮಾತಾಡು│


ಓ ಮೌನವೇ ನೀ ಮಾತಾಡು│
ಓ ಮೌನವೇ ನೀ ಮಾತಾಡು│
ಹೊಳಪು ತುಂಬಿದ ಕಣ್ಣಲೇ
ನೀ ನನ್ನ ಕೊಲ್ಲುವುದ ಸಾಕು ಮಾಡು│
ಓ ಮೌನವೇ ನೀ ಮಾತಾಡು│

ತೆರೆದು ನಿನ್ನ ತುಟಿಯಂಚು│
ಮಾತಾಗಲಿ ನಿನ್ನ ಮೌನ│ಹಾಡಾಗಲಿ ನಿನ್ನ ಮಾತು│
ಆ ಹಾಡಲಿ ನನ್ನೆಡೆಗೆ ಒಲವಿನ ಭಾವ ಇರಲಿ│
ಪ್ರೀತಿ ಪ್ರಣಯದ ರಾಗವಿರಲಿ│
ಎಲ್ಲರೆದುರು ಆ ಹಾಡ ಗೆಳತಿ ಮನಬಿಚ್ಚಿ ನೀ ಹಾಡು│
ಕೇಳಿ ಆ ನಿನ್ನ ಹಾಡು ಮೆಚ್ಚಲಿ ನಾಡು│
ನನ್ನೆದೆಯ ಮರುಭೂಮಿಯಾಗಲಿ ಹಸಿರು ಕಾಡು│

ಓ ಗೆಳತಿ ಹೇಳು.. ಗುಟ್ಟಾಗಿ ನನಗೆ ಹೇಳು
ಎಂದು ತೊರೆಯುವೆ ಆ ನಿನ್ನ ಮೌನ?
ಎಂದು ಹಾಡಾಗುವುದು ಆ ನಿನ್ನ ಮಾತು?
ಇದನು ನೀ ಹೇಳುವವರೆಗೂ ನೆಮ್ಮದಿಯಾಗಿ
ನಿದ್ರಿಸೆನು ನಾನಂತು!
(ಚಿತ್ರಕೃಪೆ www.canvaspaintingindia.com)

ಬುಧವಾರ, ಡಿಸೆಂಬರ್ 10, 2008

ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ)


(ಮುಂಬಯಿ ನಗರಿಯಲ್ಲಿ ನವೆಂಬರ್ 26, 2008 ರಂದು ಉಗ್ರಗಾಮಿಗಳಿಂದ ನೆಡೆದ ದುಷ್ಕೃತ್ಯದಲ್ಲಿ ಅಸುನೀಗಿದ ನಮ್ಮ ವೀರಯೋಧರಿಗೆ, ಅಮಾಯಕ ನಾಗರೀಕರಿಗೆ ನಾ ಬರೆದ ಈ ಲೇಖನ ಹಾಗೂ ಕವನ ಹೃದಯಪೂರ್ವಕವಾಗಿ ಅರ್ಪಣೆ -ನಿಮ್ಮ ಸುನಿಲ್ ಮಲ್ಲೇನಹಳ್ಳಿ). ಒಮ್ಮೆ ಓದಲು ಮರೆಯದಿರಿ.
ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ)

ಓ ಭಯೋತ್ಪಾದಕನೇ..
ನಿಲ್ಲು ನಿಲ್ಲು ನನ್ನ ಕಂಡು
ಏಕೆ ನೀ ಕಂಗೆಟ್ಟು ಓಡುತ್ತಿರುವೇ? ನಿಲ್ಲು

ಓ ಭಯೋತ್ಪಾದಕ ನಾನಲ್ಲ ನಿನ್ನ ಪಾಲಿನ ಅಂತಕ
ನಾ ಭಾರತ ಮಾತೆಯ ಮಡಿಲ ಎಳೆಯ ಬಾಲಕ
ಅವಳ ಸೇವೆಯೇ ನನ್ನ ಪಾಲಿಗೆ ಒಲಿದಿರುವ ಕಾಯಕ

ನಾ ನಿನ್ನಲಿಗೆ ಬಂದಿರುವೆ ಕೇಳಲೆಂದು ನಿನಗೆ ಹಲವು ಪ್ರಶ್ನೆ
ಮಾಡದೆ ನನಗೆ ಹಿಂಸೆ ಬಗೆ ಹರಿಸುವೆಯಾ ನನ್ನಯ ಪ್ರಶ್ನೆ?

ಓ ಭಯೋತ್ಪಾದಕನೇ..
ಜಗದಲಿ ಅಮಾಯಕ ಜನರ ನೀ ಏಕೆ ಕೊಲ್ಲುವೇ?
ಇದಕ್ಕೆಲ್ಲ ನಿನಗೆ ಯಾರು ಅಂತಹ ಪ್ರೇರಣೆ?
ಪ್ರೇರಣೆ ಯಾರಾದರೇನು? ಜಗದಲಿ ನೆಡೆವ
ವಿದ್ವಂಸಕ ಕೃತ್ಯಗಳಿಗೆಲ್ಲ ನೀನ್ ತಾನೆ ನೇರ ಹೊಣೆ?


ಓ ಭಯೋತ್ಪಾದಕನೇ..
ಬುದ್ದಿ ಮಾತೊಂದು ನಾ ಹೇಳುವೆ ನೀ ಕೇಳು ಸುಮ್ಮನೆ
ಮನುಜನೇ ನೀ ಆದರೆ ಒಮ್ಮೆ ಮಾಡಿ ಸರಿ ಯೋಚನೆ
ಈ ಭಯೋತ್ಪಾದನೆಯ ಇಂದಿಗೆ ನೀ ಮಾಡು ಕೊನೆ
ಧರೆಯನು ಆಗಲು ಬಿಡು ಶಾಂತಿ ತುಂಬಿದ ಮನೆ

ಓ ಭಯೋತ್ಪಾದಕನೇ..
ನೀ ಕೇಳದೆ ಹೋದರೆ ನನ್ನ ಮಾತು..
ನಾ ಆದ ಮೇಲೆ ಯುವಕ ತೊಟ್ಟು ಶಾಂತಿ ದ್ಯೋತಕ
ಆಗಲಿರುವೆನು ಮಾನವೀಯತೆಯ ಪೊರೆವ ಸೇವಕ
ಕಣ್ಣಾರೆ ಕಂಡು ನೀ ಮಾಡುತ್ತಿರುವ ಹೀನ ಕಾಯಕ
ಆಗಲಿರುವೆನು ನಿನಗೆ ನೀತಿಪಾಠವ ಕಲಿಸುವ ಸೈನಿಕ
ಭೂವಿಯಲಿ ಎಲ್ಲೆಡೆ ಮಾಡಿ ಅಹಿಂಸೆಯ ಸಂಗ್ರಾಮ
ಭಯೋತ್ಪಾದನೆಗೆ ನಾ ಇರಿಸುವೆನು ಪೂರ್ಣವಿರಾಮ!

- ಸುನಿಲ್ ಮಲ್ಲೇನಹಳ್ಳಿ

ಅಬ್ಬಾ! ಭಾರತದಲ್ಲಿ ಜನ ಅದು ಹೇಗೆ ವಾಸ ಮಾಡುತ್ತಾರೆ?


ಅಬ್ಬಾ! ಭಾರತದಲ್ಲಿ ಜನ ಅದು ಹೇಗೆ ವಾಸ ಮಾಡುತ್ತಾರೆ?

(ಮುಂಬಯಿ ನಗರಿಯಲ್ಲಿ ನವೆಂಬರ್ 26, 2008 ರಂದು ಉಗ್ರಗಾಮಿಗಳಿಂದ ನೆಡೆದ ದುಷ್ಕೃತ್ಯದಲ್ಲಿ ಅಸುನೀಗಿದ ನಮ್ಮ ವೀರಯೋಧರಿಗೆ, ಅಮಾಯಕ ನಾಗರೀಕರಿಗೆ ನಾ ಬರೆದ ಈ ಲೇಖನ ಹಾಗೂ ಕವನ ಹೃದಯಪೂರ್ವಕವಾಗಿ ಅರ್ಪಣೆ -ನಿಮ್ಮ ಸುನಿಲ್ ಮಲ್ಲೇನಹಳ್ಳಿ). ಒಮ್ಮೆ ಓದಲು ಮರೆಯದಿರಿ.

ನಾನು ನಾಲ್ಕನೇ ತರಗತಿ ಓದುತ್ತಿರುವಾಗಿನಿಂದಲೇ ನಮ್ಮೂರಲ್ಲಿ ತರಿಸುತ್ತಿದ್ದ ಪ್ರಜಾವಾಣಿ ದಿನಪತ್ರಿಕೆಯನ್ನು ಪ್ರತಿನಿತ್ಯ ತಪ್ಪಿಸದೆ ಓದುತ್ತಿದೆ. ಆಗ ಪತ್ರಿಕೆಯ ಮುಖಪುಟದಲ್ಲಿ ಬರುತ್ತಿದ್ದ ಪ್ರಮುಖ ವಿಷಯಗಳಾದ, ಶ್ರೀಲಂಕಾದಲ್ಲಿ ಎಲ್.ಟಿ.ಟಿ.ಇ ಹಾಗೂ ಸೇನೆ ನಡುವೆ ಭೀಕರ ಕದನ ಇನ್ನೂರಕ್ಕು ಹೆಚ್ಚು ಸಾವು, ಪಾಕಿಸ್ತಾನದಲ್ಲಿ ಭೀಕರ ಬಾಂಬ್ ಸ್ಫೋಟ ನೂರ ಜನರ ಸಾವು ಈ ರೀತಿಯ ಇನ್ನೂ ಹತ್ತು ಹಲವಾರು ವಿಷಯಗಳನ್ನು ಓದಿದ ಆ ಕ್ಷಣದಲ್ಲಿ “ಅಬ್ಬಾ! ಆ ದೇಶಗಳಲ್ಲಿ ಜನ ಅದು ಹೇಗೆ ವಾಸ ಮಾಡುತ್ತಾರೆ?” ಎನ್ನುವ ಭಯ ಆವರಿಸಿದ ಚಿಂತನೆಯಲ್ಲಿ ನಾನು ಮುಳುಗಿಬಿಡುತ್ತಿದ್ದೆ.

ಆದರೆ ಮೊನ್ನೆ ಅಂದರೆ ನವೆಂಬರ್-26 ರಂದು ಮುಂಬಯಿ ಮಹಾನಗರಿಯಲ್ಲಿ ಉಗ್ರರಿಂದ ನೆಡೆಯಲ್ಪಟ್ಟ ರಕ್ತಸಿಕ್ತ ಕೃತ್ಯಕ್ಕೆ ಬರಿ ಭಾರತ ದೇಶವಲ್ಲದೆ ಇಡಿ ಮನುಕುಲ ಜಗತ್ತೆ ಮಮ್ಮಲು ಮರುಗಿತು. ಈವರೆಗೆ ವಿಶ್ವದಲ್ಲಿ ನೆಡೆದು ಹೋಗಿರುವ ಸಾವಿರಾರು ಮಾನವೀಯತೆಗೆ ಕಳಂಕ ತಂದಿರುವ ಘಟನೆಗಳ ಸಾಲಿಗೆ ನವೆಂಬರ್ 26ರ ಘಟನೆಯೂ ಸೇರಿ ಹೋಯಿತು.

ಈವೊಂದು ಸಂದರ್ಭದಲ್ಲಿ ವಿಶ್ವದ ಇನ್ನಿತರ ದೇಶಗಳ ಜನರುಗಳು, “ಅಬ್ಬಾ ಭಾರತದಲ್ಲಿ ಜನ ಅದು ಹೇಗೆ ವಾಸ ಮಾಡುತ್ತಾರೆ?” ಎಂದು ನಾನು ಚಿಕ್ಕಂದಿನಲ್ಲಿ ಶ್ರೀಲಂಕಾ, ಪಾಕಿಸ್ತಾನಗಳ ಜನರ ಬಗ್ಗೆ ಯೋಚಿಸಿದ ರೀತಿ ಈಗ ಅವರುಗಳು ನಮ್ಮ ಭಾರತದ ಜನರ ಕುರಿತು ಯೋಚಿಸುತ್ತಿರುತ್ತಾರೆ.

ನಮ್ಮ ದೇಶ 1947ರಲ್ಲಿ ಸ್ವಾತಂತ್ರಗಳಿಸಿಕೊಂಡ ನಂತರದಿಂದ ಕಾಶ್ಮೀರದಲ್ಲಿ ಆಗಾಗ ಉಗ್ರರಿಂದ ನೆಡೆಯುತ್ತಿರುವ ಮರಣಹೋಮದ ಘಟನೆಗಳನ್ನು ಬಿಟ್ಟು ಮಿಕ್ಕೆಲ್ಲ ರಾಜ್ಯಗಳಲ್ಲಿ ಉಗ್ರರಿಂದ ಅಂತಹ ಅಘಾತಕಾರಿ ಸನ್ನಿವೇಶಗಳು ನೆಡೆದದ್ದು ಬಲುವಿರಳ. ಆದರೆ 1993ರಲ್ಲಿ ಮುಂಬಯಿಯಲ್ಲಿ ಆದ ಸರಣಿ ಬಾಂಬ್ ಸ್ಫೋಟದ ನಂತರ ದಿನಗಳಲ್ಲಿ ಭಾರತದ ಬಹುತೇಕ ನಗರ ಪ್ರದೇಶಗಳು ಬದುಕಲು ಒಂದು ನೆಮ್ಮದಿಯ ತಾಣವಾಗಿ ಉಳಿದಿವೆಯೇ? ಎನ್ನುವ ಪ್ರಶ್ನೆಗೆ, ಇಲ್ಲ ಎನ್ನುವುದೊಂದೆ ಇರುವ ಪ್ರಮಾಣಿಕ ಉತ್ತರ. ಕನಿಷ್ಟ ಪಕ್ಷ ವರುಷಕ್ಕೆ ಮೂರು-ನಾಲ್ಕು ಹೃದಯ ವಿದ್ರಾವಕ ಘಟನೆಗಳು ಉಗ್ರರಿಂದ ಮುಂಬಯಿ, ದೆಹಲಿ, ಬೆಂಗಳೂರು ಅಹಮದಬಾದ್‌ಗಳಂತಹ ನಗರಗಳಲ್ಲಿ ನೆಡೆಯುತ್ತಲೇ ಇರುತ್ತವೆ.

ಇದಕ್ಕೆ ಪೂರಕವಾಗಿ 2007-2008ರಲ್ಲಿ ಭಾರತದಲ್ಲಿ ನೆಡೆದಿರುವ ಮಾರಕ ಘಟನೆಗಳು ಒಂದಾ-ಎರಡಾ? ದೆಹಲಿಯಲ್ಲಿ ಬಾಂಬ್ ಸ್ಪೋಟ ಐವತ್ತಕ್ಕೂ ಹೆಚ್ಚು ಸಾವು, ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಮೇಲೆ ದಾಳಿ, ಮತ್ತೆ ಅದೇ ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಪೋಟ, ಅಹಮದಬಾದ್‌ನಲ್ಲಿ ಬಾಂಬ್ ಸ್ಪೋಟ, ಮತಾಂತರದ ಗಲಭೆ, ನಕ್ಸಲರ ಗಲಭೆ, ಕಾಶ್ಮೀರದಲ್ಲಂತೂ ನಮಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ಅಮಾಯಕ ಜನರ ಮರಣಹೋಮ ನೆಡೆಯುತ್ತಲೇ ಇರುತ್ತದೆ.. ಈಗ ಮುಂಬಯಿಯಲ್ಲಿ 2೦೦ಕ್ಕೂ ಹೆಚ್ಚು ಅಮಾಯಕ ಜನರ ರಕ್ತದೊಕುಳಿ ಹರಿಸಿದ್ದಾರೆ ಉಗ್ರರು..ಹೀಗೆ ಹೇಳುತ್ತಾ ಹೋದರೆ ಇನ್ನೂ ಬಹಳಷ್ಟಿವೆ.

ನಮ್ಮ ಬಡಭಾರತವು ಮೊದಲೇ ಒಂದು ಅಭಿವೃದ್ಧಿಶೀಲ ರಾಷ್ಟ್ರ, ಉಗ್ರಗಾಮಿಗಳು ಹೀಗೆ ಸಾಲು ಸಾಲು ಹೀನಕೃತ್ಯಗಳನ್ನು ನೆಡೆಸುತ್ತಾ ಹೋದರೆ, ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಯಾವ ಅಂತಕ್ಕೆ ಬರಬಹುದು? ನೀವೇ ಯೋಚಿಸಿ? ಮೊನ್ನೆಯ ಘಟನೆಯಲ್ಲಿ ಬರಿ ಹತ್ತು ಜನ ಉಗ್ರರಿಂದ ಉಂಟಾದ ಜೀವ ನಷ್ಟ ಹತ್ತಿರ ಹತ್ತಿರ ಇನ್ನೂರು, ಉಂಟಾದ ಆರ್ಥಿಕ ನಷ್ಟ ಸುಮಾರು ನಾಲ್ಕು ಸಾವಿರ ಕೋಟಿಗಳು. ಅಂದರೆ ಕೇವಲ ಮೂರು ದಿನಗಳಲ್ಲಿ ಆದ ನಷ್ಟ ನಮ್ಮ ದೇಶದ ರಕ್ಷಣಾ ವೆಚ್ಚದ ಹತ್ತನೇಯ ಒಂದು ಪಾಲು (1/1೦).

ನಮ್ಮ ಕೇಂದ್ರ ಹಾಗೂ ನಮ್ಮ ನಮ್ಮ ರಾಜ್ಯ ಸರಕಾರಗಳ ಅಸಡ್ಡೆತನವನ್ನು ಕಂಡು ನಗಬೇಕೋ? ಇಲ್ಲವೇ ಅಳಬೇಕೋ? ಒಂದು ತಿಳಿಯದು. ಇಂತಹ ಈ ಹೇಯ ಘಟನೆಗಳು ನೆಡೆದ ಮುರುಕ್ಷಣದಲ್ಲೇ ಉಗ್ರಗಾಮಿಗಳಿಗೆ ಹಾಗೆ ಮಾಡುತ್ತೇವೆ..ಹೀಗೆ ಮಾಡುತ್ತೇವೆ ಎನ್ನುವ ಪೊಳ್ಳು ಅಶ್ವಾಸನೆಯನ್ನು ನಮ್ಮ ಸರಕಾರ ಕೊಡುವುದು ಸರ್ವೇಸಾಮಾನ್ಯ. ಆದರೆ ಕಾಲಕ್ರಮೇಣ ಇದೇ ಸರಕಾರ ಎಲ್ಲವನ್ನು ಮರೆತು ಸುಮ್ಮನಾಗಿ ಬಿಡುತ್ತದೆ. ಮತ್ತೊಂದು ಇಂತಹ ಅಹಿತಕರ ಘಟನೆ ನೆಡೆದಾಗ ಮತ್ತೆ ಅದೇ ಲೋಕ ಮೆಚ್ಚುವ ಹೇಳಿಕೆಗಳನ್ನು ಕೊಡುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಉಗ್ರಗಾಮಿಗಳು ನೆಡೆಸುವ ಇಂತಹ ಹೀನ ಕೃತ್ಯಗಳಿಗೆ ನೂರಾರು ಅಮಾಯಕರು ಹಾಗೂ ನಮ್ಮ ಯೋಧರು ಬಲಿಯಾಗುವುದಂತು ಸತ್ಯ. ಮಿಕ್ಕೆಲ್ಲ ವಿಚಾರಗಳು ಮಿಥ್ಯ ಅಂದರೆ ಉಗ್ರರನ್ನು ಮಟ್ಟ ಹಾಕುವ, ರಕ್ಷಣಾ ವ್ಯವಸ್ಥೆಯನ್ನು ಬಿಗಿಗೊಳಿಸುವ, ನಮ್ಮ ದೇಶವನ್ನು ಶಾಂತಿನಾಡಾಗಿಸುವ ವಿಚಾರ.. ಇನ್ನೂ ಮುಂತಾದವು.

"ಇದನ್ನೆಲ್ಲ ಗಮನಿಸುತ್ತಾ ಹೋದರೆ ಸರಕಾರ ಭಯೋತ್ಪಾದನೆಯನ್ನು ನಿಯಂತ್ರಸುತ್ತದೇಯೋ? ಇಲ್ಲ ಭಯೋತ್ಪಾದನೆಯೇ ಸರಕಾರವನ್ನು ನಿಯಂತ್ರಸುತ್ತಿದೇಯೋ?" ಎನ್ನುವ ಅನುಮಾನ ನಮ್ಮನ್ನು ಕಾಡುವುದು ಸಹಜ. “ನಮ್ಮ ಸರಕಾರ ಎಚ್ಚೆತ್ತು ಕೊಳ್ಳುವುದಾದರೂ ಎಂದು? ನಮ್ಮ ರಕ್ಷಣಾ ವ್ಯವಸ್ಥೆ ಇಡಿ ವಿಶ್ವದಲೇ ಅಷ್ಟನೇ ಸ್ಥಾನದಲ್ಲಿ ಇದೇ, ಇಷ್ಟನೇ ಸ್ಥಾನದಲ್ಲಿ ಇದೇ ಎಂದು ಬಡಾಯಿ ಕೊಚ್ಚಿಕೊಳ್ಳುವ ಪ್ರವೃತ್ತಿಯನ್ನು ಬಿಟ್ಟು ಉಗ್ರರನ್ನು ತ್ವರಿತವಾಗಿ ಹೇಗೆ ಮಟ್ಟ ಹಾಕಬೇಕು” ಎನ್ನುವ ವಿಚಾರದ ಬಗ್ಗೆ ಸರಕಾರ ಗಮನ ಹರಿಸಬೇಕಾಗಿದೆ.

ಪ್ರತಿವರುಷವೂ ಬಜೆಟ್‌ನಲ್ಲಿ ಕೇಂದ್ರ ಸರಕಾರ ನಮ್ಮ ದೇಶದ ರಕ್ಷಣಾ ವ್ಯವಸ್ಥೆಗೆಂದೆ ಸುಮಾರು 40 ಸಾವಿರದಿಂದ 45 ಸಾವಿರ ಕೋಟಿಗಳವರೆಗೂ ಮೀಸಲು ಇಡುತ್ತದೆ. ಆದರೆ ರಕ್ಷಣಾ ಇಲಾಖೆಯಲ್ಲಿರುವ ಬಹುತೇಕ ಪೋಲಿಸ್‌ರ ಬಳಿಯಾಗಲಿ ಇಲ್ಲವೇ ಯೋಧರ ಬಳಿಯಾಗಲಿ ಇರುವುದು 303 ರೈಫಲ್‌ಗಳಂತೆ (ಸುಮಾರು ನಲವತ್ತು ವರುಷಗಳಿಂದ ನಮ್ಮೂರ ನಂಜುಂಡಜ್ಜನ ಬಳಿಯಲ್ಲೂ ಇರೊದು ಅದೇ ಮಾಡೆಲ್‌ನ ರೈಫಲ್!), ಗುಂಡು ನಿರೋಧಕ ಕವಚಗಳು ನೂರಕ್ಕೆ ಹತ್ತು ಇಲ್ಲವೇ ಇಪ್ಪತ್ತು ಜನರ ಇವೆಯಂತೆ. ಇದು ಎಂತಹ ವಿಪರ್ಯಾಸ ನೋಡಿ. ಅಲ್ಲದೇ ಕಠಿಣ ತರಬೇತಿ ಪಡೆದ ಬಹುತೇಕ ಕುಶಲಯೋಧರು (ಊದಾ: NSG Commands). ನಮ್ಮ ದೇಶದ ರಕ್ಷಣೆಯಲ್ಲಿ ಕಾರ್ಯನಿರ್ವಹಿಸದೆ ನಮ್ಮ ರಾಜಕಾರಣಿಗಳ ಕಾವಲುಗಾರನಾಗಿ ಕೆಲಸ ಮಾಡಬೇಕು. “ಮಳ್ಳರೂಪದ ಕಳ್ಳರ ರಕ್ಷಣೆಗೆ ಕಾವಲುಗಾರರಾಗಿ ನಮ್ಮ ಯೋಧರುಗಳು ಇರಬೇಕೇ??”

ಇಷ್ಟೆಲ್ಲಾ ಉಪಯೋಗ ಪಡೆದುಕೊಳ್ಳುವ ರಾಜಕಾರಣಿಗಳು ಬೊಕ್ಕಸದಿಂದ ಹಣವನ್ನು ನೆರವಿನ ರೂಪದಲ್ಲಿ ಕೊಡುವ ಬದಲು ತಮ್ಮ ಒಂದು ತಿಂಗಳ ವೇತನವನ್ನು (ಸಂಸತ್ ಸದಸ್ಯರು, ರಾಜ್ಯಗಳ ವಿಧಾನ ಸಭೆಯ ಸದಸ್ಯರುಗಳು) ನೆರವಿನ ರೂಪದಲ್ಲಿ ಕೊಡಲಿ. ಆಗ ಅದು ನಿಜವಾದ ನೆರವಿನ ಧನವೆಂದು ಅನಿಸಿಕೊಳ್ಳತ್ತದೆ.

ಇನ್ನೂ ಇಡಿ ದೇಶವೇ ಶೋಕಸಾಗರದಲ್ಲಿ ಮುಳುಗಿದ್ದ ಆ ದಿನದಂದು ನಮ್ಮ ದೇಶದ ಭಾವಿ ಪ್ರಧಾನಿಯೆಂದು ಬಿಂಬತವಾಗಿರುವ ರಾಹುಲ್‌ಗಾಂಧೀ ಗೆಳೆಯನ ಮದುವೆ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದನಂತೆ. ನೋಡಿ ದೇಶವನ್ನು ಆಳುವುದಕ್ಕೆ ಇಂತಹವರುಗಳನ್ನು ನಾವುಗಳು ಆಯ್ಕೆಮಾಡಿ ಕಳಿಸುತ್ತೇವೆ. ಇಷ್ಟೆಲ್ಲಾ ಮಾಡುವ ಅವರಿಗೆ, ನಮ್ಮ ಕೇಂದ್ರ ಸರಕಾರಕ್ಕೆ ಉಗ್ರರನ್ನು ಹತ್ತಿಕ್ಕಲು ಹೋರಾಡಿ ಪ್ರಾಣತೆತ್ತ ಯೋಧರ ಗೌರವರ್ಥವಾಗಿ ಒಂದು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಬೇಕೆಂಬ ಒಂದು ಸಾಮಾನ್ಯ ಪರಿಜ್ಞಾನ ಇದ್ದಂತಿಲ್ಲ!

ಒಂದೆಡೆ ಉಗ್ರರು ನಮ್ಮ ದೇಶದ ಮಾನವನ್ನು, ಅಮಾಯಕ ಜನರ ಪ್ರಾಣವನ್ನು ಬಹಿರಂಗವಾಗಿ ಹರಾಜು ಹಾಕುತ್ತಿದ್ದರೆ, ಇನ್ನೊಂದೆಡೆ ಈ ನಮ್ಮ ರಾಜಕಾರಣಿಗಳು ಹಾಗೂ ಭ್ರಷ್ಟಸರಕಾರಿ ಅಧಿಕಾರಿಗಳು ಅಂತರಿಕವಾಗಿ ನಮ್ಮ ದೇಶವನ್ನು ಸುಲಿಗೆ ಮಾಡುತ್ತಿದ್ದಾರೆ.

“ಇಂತಹ ಒಂದು ದೇಶವನ್ನು ರಾಮರಾಜ್ಯವಾಗಿಸುವ ಕನಸನ್ನು ನಾನು ಕಂಡಿದ್ದೆನಾ?” ಎಂದು ಪರಲೋಕದಲ್ಲಿರುವ ಮಹಾತ್ಮ ಗಾಂಧೀಜಿಯವರ ಆತ್ಮ ಅಂದುಕೊಂಡೀತು ಜೋಕೆ!

ಕೊನೆಯದಾಗಿ.. ಭಾರತ ದೇಶದ ಪ್ರಜೆಗಳಾದ ನಾವುಗಳು ಸಹ ಕಲಿಯಬೇಕಿರುವುದು ಬಹಳಷ್ಟಿದೆ.
“ಕ್ರಿಕೆಟ್” ಎನ್ನುವ ಆಟಕ್ಕೆ ಕೊಡುವ ಮಹತ್ವವನ್ನು ನಾವುಗಳು ದೇಶವು ಶೋಚನೀಯ ಪರಿಸ್ಥಿತಿಯಲ್ಲಿರುವಾಗಲೂ ಕೊಡುವುದಿಲ್ಲ. ಅವರುಗಳು ಆಟದಲ್ಲಿ ಗೆಲ್ಲಲಿ ಎಂದು ಹೋಮ, ಪೂಜೆ, ಪುನಸ್ಕಾರ ಎಲ್ಲ ಮಾಡುತ್ತೇವೆ. ಕ್ರಿಕೆಟ್ ಆಟಗಾರರಿಂದ ದೇಶಕ್ಕೆ ಆಗಿರುವ, ಇಲ್ಲವೇ ನಮಗೆ ಆಗಿರುವ ಅನುಕೂಲಗಳೇನು? ಎಂದು ನಾವು ಯಾವತ್ತಾದರೂ ಯೋಚಿಸಿದ್ದೇವೆಯೇ? ಇದು ಒಂದು ಉದಾಹರಣೆಯಷ್ಟೇ, ಇಂತಹ ನೂರೆಂಟು ಉದಾಹರಣೆಗಳಿವೆ. ಹಾಗಂತ ಕ್ರಿಕೆಟ್ ಆಟಗಾರರನ್ನು ದೂಶಣೆ ಮಾಡುವ ಪ್ರಯತ್ನ ನಾ ಮಾಡುತ್ತಿಲ್ಲ. ಆದರೆ ನಮ್ಮ ಭಾರತದಲ್ಲಿ ಇರುವ ಪ್ರಸ್ತುತ ಚಿತ್ರಣವನ್ನು ಹೇಳಿರುವೆನು. ಅದನ್ನೆಲ್ಲಾ ಬಿಡಿಸಿ ಹೇಳುವ ಅಗತ್ಯವಿಲ್ಲ ಎಂದುಕೊಂಡಿರುತ್ತೇನೆ......

ನನ್ನ ಈ ಲೇಖನವೂ ಸಮಯೋಚಿತವಾಗಿಯೂ ಹಾಗೂ ತರ್ಕಬದ್ಧವಾಗಿಯೂ ಇರುವುದೆನ್ನುವ ಆಶಯದೊಂದಿಗೆ ಈ ಲೇಖನವನ್ನು ಮುಕ್ತಾಯಗೊಳಿಸುತ್ತಿದ್ದೇನೆ. .
ಜೈ ಭಾರತ ಮಾತೆ..
-ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಗುರುವಾರ, ಅಕ್ಟೋಬರ್ 23, 2008

ದೀಪಾವಳಿಯು ಬಂದಿಹುದು..


ಎಲ್ಲರಿಗೂ ದೀಪಾವಳಿ ಹಬ್ಬದ ಮುಂಚಿತವಾದ ಶುಭಾಶಯಗಳು. ದೀಪಾವಳಿಯ ಹಬ್ಬಕೆಂದು ಒಂದು ಕವನ ಬರೆದಿರುವೆನು ಒಮ್ಮೆ ಓದಿರಿ.
ಹಬ್ಬ.. ಹಬ್ಬ.. ಬೆಳಕಿನ ಹಬ್ಬ ದೀಪಾವಳಿಯು ಬಂದಿಹುದು..
ನಾಡಿಗೆಲ್ಲ ಸಂಭ್ರಮದ ಸಡಗರವ ಹೊತ್ತು ತಂದಿಹುದು..
ಮನೆ ಮನೆಯಲಿ ಬೆಳಗೋ ಹಬ್ಬದ ಹುರುಪಿನ ದೀವಿಗೆ..
ನವೀರು ಕಳೆಯ ತಂದಿಹುದು ನಮ್ಮಯ ಈ ಬಾಳಿಗೆ..
ಸುಜ್ಞಾನದ ಹಾದಿಯನು ತೋರಿರುವುದು ಜೀವನದ ನಾಳಿಗೆ..

ಹಬ್ಬ.. ಹಬ್ಬ.. ಬೆಳಕಿನ ಹಬ್ಬ ದೀಪಾವಳಿಯು ಬಂದಿಹುದು..
ಬನ್ನಿ ಅರಿವಿನ ಸಂದೇಶವ ಕಳಿಸೋಣ ನರಕಾಸುರನೂರಿಗೆ..
ಬನ್ನಿ ಭಾವಯೈಕ್ಯದ ಬೆಸುಗೆ ಹಾಗೋಣ ಬಲಿಯೂರಿನ ಪಾಲಿಗೆ..
ಬನ್ನಿ ಎಲ್ಲರು ಜಯಕಾರ ಹಾಕೋಣ ಮಹಾಲಕ್ಷ್ಮಿಗೆ..
ಬನ್ನಿ ಎಲ್ಲರು ಒಟ್ಟಾಗಿ ತಿನ್ನೋಣ ಏಕತೆಯ ಹೋಳಿಗೆ..
ಬನ್ನಿ ಎಲ್ಲರು ಗುಟ್ಟಾಗಿ ಬೆಂಕಿ ಇಡೋಣ ಅಂಧಕಾರದ ಬೇಲಿಗೆ..
- ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಮಂಗಳವಾರ, ಅಕ್ಟೋಬರ್ 21, 2008

ಮುಂಬರುವ ದಿನಗಳಲ್ಲಿ ಬೆಂಗಳೂರು ಉದ್ಯಾನ ನಗರಿಯಾಗಿ ಉಳಿಯಲಿದೆಯೇ?


ಮತಾಂತರ, ಸರಣಿ ಬಾಂಬ್ ಸ್ಪೋಟ ಮುಂತಾದ ಅಹಿತಕರ ಘಟನೆಗಳಿಂದ ನಮ್ಮ ರಾಜ್ಯದಲ್ಲಿ ಅದರಲ್ಲೂ ಬೆಂಗಳೊರಿನಲ್ಲಿ ಒಂದು ರೀತಿಯ ಅಶಾಂತಿಯ ವಾತಾವರಣ ನೆಲಸಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಈ ಘಟನೆಗಳಿಗೆ ಪೂರಕವಾಗಿರುವ ಮತ್ತೊಂದು ಘಟನೆಯೆಂದರೆ ಬೆಂಗಳೂರಿನಲ್ಲಿ ಮಿತಿ ಮೀರಿ ಕಟಲ್ಪಡುತ್ತಿರುವ ಅಪಾರ್ಟ್‌ಮೆಂಟ್ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್‌ಗಳು ಬೆಂಗಳೂರಿನ ಹಸಿರನ್ನು ಹಾಳು ಗೆಡವುದರಲ್ಲಿ ಮಹತ್ತರವಾದ ಕಾಣಿಕೆಯನ್ನು ನೀಡುತ್ತಿವೆ. ಆ ವಿಷಯವಾಗಿ ಬರೆದ ಲೇಖನವಿದು ತಪ್ಪದೆ ಓದಿರಿ.

(ಹಸಿರೇ ಉಸಿರು ಎಂದನ್ನುವವರು ಇವರೇ.. ಕಂಡ ಕಂಡಲೇಲ್ಲ ಹಸಿರಿನ ಉಸಿರನು ತೆಗೆಯಲು ಅನುಮತಿ ಕೊಡುವವರೂ ಇವರೇ..)
ಈಗ್ಗೆ ಸುಮಾರು ದಿನಗಳ ಹಿಂದೆ ಎಂದಿನಂತೆ ನಮ್ಮ ಕಂಪನಿಯ ವಾಹನದಲ್ಲಿ ಕುಳಿತು ಆಫೀಸಿಗೆ ಹೋಗುತ್ತಿದ್ದೆ. ಮಾಮೂಲಿಯಂತೆ ನಮ್ಮ ಕಂಪನಿಯ ವಾಹನವು ಶೇಷಾದ್ರಿಪುರಂ ಕಾಲೇಜ್ ಮಾರ್ಗವಾಗಿ ಶಿವಾನಂದ ಸರ್ಕಲ್ ದಾಟಿ ರೇಸ್‌ಕೋರ್ಸ್ ರಸ್ತೆಯನ್ನು ಪ್ರವೇಶಿಸಿ ಖನಿಜ ಭವನದ ಹತ್ತಿರ ಬರುತ್ತಿದ್ದಂತೆಯೇ ನನ್ನ ಅಂತರಾಳದಲ್ಲಿ ಸುಪ್ತವಾಗಿ ಅಡಗಿಕೊಂಡಿದ್ದ ಪುಟ್ಟ ಪರಿಸರ ಪ್ರೇಮಿಯೊಬ್ಬ ಅಯ್ಯೋ ಎಂದು ಚಿತ್ಕಾರ ಮಾಡಿಬಿಟ್ಟ.

ಅದಕ್ಕೆ ಮೂಲಕಾರಣವೇನೆಂದರೆ? “ಮೆಟ್ರೋರೈಲು”ಯೆಂಬ ಮಹತ್ವಾಕಾಂಕ್ಷಿ ಯೋಜನೆಯ ಅಡಿಯಲ್ಲಿ ರೈಲು ಮಾರ್ಗವನ್ನು ನಿರ್ಮಿಸುವ ಸಲುವಾಗಿ ರಸ್ತೆಯ ಇಕ್ಕೆಲಗಳಲ್ಲಿ ಮೈತುಂಬ ಹಸಿರು ಎಲೆಗಳನ್ನು ಹೊದ್ದುಕೊಂಡು ಬೃಹದಾಕಾರದಲ್ಲಿ ಬೆಳೆದು ನಿಂತಿದ್ದ ಹೆಮ್ಮರಗಳನ್ನು ನಿಕೃಷ್ಟವಾಗಿ ಬುಡ ಸಮೇತ ಕಡಿದು ಉರುಳಿಸುತ್ತಿದ್ದ ದೃಶ್ಯವನ್ನು ನಾನು ಕಣ್ಣಾರೆ ಕಂಡದ್ದೇ ಕಾರಣ. ನಾನೊಬ್ಬ ಅಂತ ಅಲ್ಲ ಆ ಹೃದಯ ವಿದ್ರಾವಕ ದೃಶ್ಯವನ್ನು ಕಂಡ ಬಹುತೇಕ ನಾಗರೀಕರು ಸಹ ಅಯ್ಯೋ ಎಂದು ಮಮ್ಮಲು ಮರುಗಿಯೇ ಇರುತ್ತಾರೆ. ಏಕೆಂದರೆ ಅವು ಸರ್ವೇಸಾಮಾನ್ಯವಾದಂತಹ ಮರಗಳಲ್ಲ ಬೆಂಗಳೂರಿನ ಗತವೈಭವನ್ನು ಸಾರುವಂತಿದ್ದ ತೀರ ಹಳೆಯ ಮರಗಳವು.

ಈಂತಹ ಸನ್ನಿವೇಶಗಳನ್ನು ನೋಡುತ್ತಿದ್ದರೆ ನಮ್ಮ ಕಣ್ಣೆದುರಿಗೆ ನಮ್ಮ ಬೆಂಗಳೂರಿನ ಪರಿಸ್ಥಿತಿ ಹೀಗಾಗಿ ಹೋಗುತ್ತಿರುವುದಲ್ಲಾ ಎನ್ನುವ ಕ್ರೂರ ನೋವು ಹಾಗೂ ಸಂಕಟ ಹಿತೈಷಿಗಳಾದ ನಮ್ಮನ್ನು ಕಾಡುತ್ತಿರುವುದು ನಿಜ. ಒಮ್ಮೆ ಮಹಾತ್ಮ ಗಾಂಧಿ ರಸ್ತೆ, ರೇಸ್‌ಕೋರ್ಸ್ ರಸ್ತೆ ಇನ್ನೂ ಹತ್ತು ಹಲವಾರು ಕಡೆ ಹೋಗಿ ನೋಡಿದರೆ ಗೊತ್ತಾಗುತ್ತೆ ಎಷ್ಟು ಅಂದವಾಗಿ ಮರಗಳನ್ನು ಬುಡ ಸಮೇತ ನಿರ್ನಾಮ ಮಾಡಿದ್ದಾರೆ ಎಂದು.

ನಮ್ಮ ಬೆಂಗಳೂರಿನ ಹಿರಿಮೆ-ಗರಿಮೆಗೆ ಇಲ್ಲಿನ ವಾತಾವರಣ, ಇಲ್ಲಿರುವ ಅತಿಸುಂದರ ಉದ್ಯಾನವನಗಳು ಹಾಗೂ ಯಥೇಚ್ಛಾಗಿ ಬೆಳೆದು ನಿಂತಿರುವ ಕರಿಹಸಿರಿನ ಗಿಡಮರಗಳೇ ಕಾರಣ ಅಂತ ನಮಗೆ ಗೊತ್ತು.

ಆದರೆ ಜಾಗತೀಕರಣದ ಫಲವಾಗಿ 1997ರ ಈಚೆಗೆ ಸಾವಿರಾರು ಸಾಪ್ಟ್‌ವೇರ್ ಕಂಪನಿಗಳು ಹಾಗೂ ಬೆರಳೆಣಿಕೆಗೆ ಸಿಗದಷ್ಟು ಹಲವಾರು ಬೇರೆ ಬೇರೆ ಉದ್ಯಮೆಗಳು ಈ ನಮ್ಮ ಉದ್ಯಾನ ನಗರಿಗೆ ಕಾಲಿರಿಸಿದವು. ಅದರ ಜೊತೆ ಜೊತೆಗೇನೆ ಲಕ್ಷೋಪ ಲಕ್ಷ ವಿದ್ಯಾವಂತರುಗಳು ನಮ್ಮ ದೇಶದ ನಾನಾ ಮೂಲೆ ಮೂಲೆ ಗಳಿಂದ ಉದ್ಯೋಗವನ್ನು ಅರಸಿ ಇಲ್ಲಿಗೆ ಬಂದರು. ಅಲ್ಲದೇ ಕುಬೇರನ ವಂಶಜರೆಂದೇ ಪರಿಗಣಿಸಲಾದ ಅನೇಕಾನೇಕ ವ್ಯಾಪಾರಸ್ಥರುಗಳು ಸಹ ತಮ್ಮ ವ್ಯಾಪಾರಿ ಮಳಿಗೆಗಳನ್ನು ತೆರೆಯಲು ಇಲ್ಲಿಗೆ ಬಂದರು. ಎಲ್ಲ ಇಷ್ಟೇ ಆಗಿದ್ದರೇ ಹೋಗ್ಲಿ ಬಿಡಿ ಅನ್ನಬಹುದಿತ್ತು.

ಆದರೆ ಹೀಗೆ ಬಂದವರು ಸುಮ್ಮನೆ ಇದ್ದರೆ? ಇಲ್ಲ, ಬರುತ್ತಿದ್ದ ಕೈ ತುಂಬ ಸಂಬಳ, ಆದಾಯ ತಂದ ಆಸೆ, ದುರಾಸೆಗಳು ಇವರಲ್ಲಿ ಚಿತ್ರವಿಚಿತ್ರದ ಕನಸುಗಳಿಗೆ ದಾರಿ ಮಾಡಿಕೊಟ್ಟವು. ಅದರಂತೆ ಈ ಉದ್ಯಾನ ನಗರಿಯಲ್ಲಿ ತಮ್ಮದೇ ಆದ ಮನೆ ಇರಬೇಕೆಂದು ಇಚ್ಚಿಸಿದರು ಅದರ ಜೊತೆಗೆ ಶಾಪಿಂಗ್ ಮಾಡಲು, ವಾರಾಂತ್ಯದಲ್ಲಿ ಮೋಜು ಮಾಡಲು ದೊಡ್ಡ ದೊಡ್ಡ ಮಹಲುಗಳು ಇದ್ದರೆ ಇನ್ನೂ ಚೆಂದ ಎಂದೆಣಿಸಿದರು. ಇವರುಗಳ ಆಸೆಯನ್ನು ತಣಿಸಲು ರಿಯಲ್‌ಎಸ್ಟೇಟ್ ಎಜೆನ್ಸಿಗಳು ಹಾಗೂ ದೊಡ್ಡ ದೊಡ್ಡ ಪ್ರಭಾವಿ ಬಂಡವಾಳಗಾರರು ಸಹಕಾರಿಯಾಗಿ ನಿಂತರು.

ಅಂಧಾಭಿಮಾನವಿದೆಂದು ಎನ್ದೆಣಿಸದಿರಿ. ಇರುವ ವಾಸ್ತವ್ಯತೆಯನ್ನು ಹೇಗೆ ಹೇಳಬೇಕೋ ಹಾಗೆ ಹೇಳಿರುವೆನು.

ನಂತರ ಮುಂದೇನು ಮಾಡಿದರು ಅಂತ ನಿಮಗೆ ಚೆನ್ನಾಗಿಯೇ ತಿಳಿದಿದೆ. ಈ ಉದ್ಯಾನ ನಗರದ ಹೊರವಲಯ, ಒಳವಲಯ ಎಲ್ಲೆಂದರಲ್ಲಿ ಸೊಂಪಾಗಿ ಬೆಳೆದು ನಿಂತಿದ್ದ ಅಮಾಯಕ ಗಿಡ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದು ಪರ್ವತಗಳ ಸಾಲುಗಳನ್ನೇ ನೆನಪಿಸುವಂತಹ ಎತ್ತರೆತ್ತರದ ಸಾವಿರಾರು ಅಪಾರ್ಟ್‌ಮೆಂಟ್, ಶಾಪಿಂಗ್ ಕಾಂಪ್ಲೆಕ್ಸ್‌ಗಳನ್ನು ಕಟ್ಟಿದರು, ಈಗಲೂ ಕಟ್ಟುತ್ತಿರುವರು.
ಇದಕ್ಕೆ ಉದಾಹರಣೆಯಂತೆ, ವೈಟ್‌ಫೀಲ್ಡ್‌ನ ಸುತ್ತಾಮುತ್ತಾ, ಎಲೆಕ್ಟ್ರಾನಿಕ್ಸ್ ಸಿಟಿ ಸುತ್ತಾಮುತ್ತಾ, ಮಾರುತಹಳ್ಳಿ ಸುತ್ತಾಮುತ್ತಾ, ಯಲಹಂಕ ಉಪನಗರದ ಸುತ್ತಾಮುತ್ತಾ ಇನ್ನೂ ಹಲವಾರು ಕಡೆ ಕಣ್ಣಳತೆಗೂ ನಿಲುಕದಷ್ಟು ಉದ್ದಗಲವಾಗಿ ನಾನಾ ಆಕೃತಿಗಳುಳ್ಳ ಬಿಲ್ಡಿಂಗ್‌ಗಳನ್ನು ಕಟ್ಟುತ್ತಿರುವರು.

ಇಷ್ಟೆಲ್ಲ ಆದರೂ ಬೆಂಗಳೂರು ತನ್ನ ಹಿರಿಮೆಯನ್ನು ಇನ್ನು ಕಳೆದುಕೊಂಡಿಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದಲ್ಲಿ ಇರುವ ಕಾರ್ಖಾನೆಗಳ ಹಾಗೂ ಕಛೇರಿಗಳ ಆವರಣದಲ್ಲಿ ಗಿಡಮರಗಳು ಈಗಲೂ ಸಹ ಬಹಳ ಸುರಕ್ಷಿತವಾಗಿ ಇವೆ. ಅಲ್ಲದೇ ನೂರಾರು ಉದ್ಯಾನವನಗಳು ಸಹ ಅದಕ್ಕೆ ಪೂರಕವಾಗಿ ಇವೆ. ಆದರೆ ಬರೀ ಇಷ್ಟಿದ್ದರೆ ಸಾಕೇ?

ಈವೂರಿನಲ್ಲಿ ಹೇಗೆ ದಿನದಿಂದ ದಿನಕ್ಕೆ ಜನಸಂಖ್ಯೆ ಹಾಗೂ ಕಟ್ಟಡಗಳ ಸಂಖ್ಯೆ ವೃದ್ಧಿಯಾಗುತ್ತಿದೆಯೋ ಅದೇ ರೀತಿ ಗಿಡಮರಗಳ ಸಂಖ್ಯೆಯಲ್ಲೂ ದುಪ್ಪಟ್ಟು ವೃದ್ಧಿಯಾಗಬೇಕು ಅಲ್ಲವೇ? ಆಗ ಮಾತ್ರ ನಮ್ಮ ಬೆಂಗಳೂರು ಸುಂದ ನಗರಿ, ಉದ್ಯಾನ ನಗರಿ ಎನ್ನುವ ಹೆಸರನ್ನು ಉಳಿಸಿಕೊಳ್ಳಲು ಸಾಧ್ಯ ಅಲ್ಲವೇ? ಇಲ್ಲವೆಂದರೆ ಬೆಂಗಳೂರು ಎಂಬ ಹೆಸರು ಹೋಗಿಬಿಟ್ಟು “ಬೋಳೂರು” ಎಂದ ಹೆಸರು ಬಂದರೂ ಬರಬಹುದು
ಇದಕ್ಕೆ ಯಾರನ್ನು ದೂಷಿಸಬಹುದು??
ಹೀಗೆ ಕಂಡ ಕಂಡವರಿಗೆಲ್ಲ ಭರ್ಜರಿ ಸುತ್ತಳತೆಗಳುಳ್ಳ ವಾಣಿಜ್ಯ ಸಂಕೀರ್ಣಗಳನ್ನು, ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಲು ಅಸ್ತು ಎಂದು ಹೇಳುವ ಸರಕಾರವನ್ನೇ?

ಇಲ್ಲ ಒಳಗೊಳಗೆ ಕೋಟ್ಯಾನುಕೋಟಿ ಹಣವನ್ನು ಗುಳುಂ ಮಾಡಿ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಲು ಅನುಮತಿಯನ್ನು ಮಂಜೂರು ಮಾಡಿಸಿಕೊಡುವ ತುಚ್ಛಮಟ್ಟದ ಪಟ್ಟಭದ್ರ ಹಿತಾಸಕ್ತಿಯುಳ್ಳ ಸರಕಾರಿ ಅಧಿಕಾರಿಗಳನ್ನೇ?
ಇಲ್ಲ ಎಲ್ಲೆಲ್ಲಿಂದಲೋ ಬಂದು ಬೆಂಗಳೂರಿನ ವಾತಾವರಣ, ನೆಮ್ಮದಿಗೆ ಮನಸೋತು ಇಲ್ಲೇ ಠಿಕಾಣಿ ಹೂಡಿ ತಮ್ಮ ವಾಸಕ್ಕೆ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಿಕೊಂಡು ಅಲ್ಲದೆ ತಮ್ಮ ಮೋಜಿಗಾಗಿ ದೊಡ್ಡ ದೊಡ್ಡ ಮಹಲುಗಳು ಇರಬೇಕೆಂದು ಬಯಸುವ ಅವರುಗಳನ್ನು ದೂಷಿಸಲೇ?

ಇಲ್ಲ ಇವೆಲ್ಲವನ್ನೂ ನೋಡಿಯೂ ಕಿಂಚಿತೂ ಪ್ರತಿಭಟನೆ ಮಾಡದೆ ತಮ್ಮ ಪಾಡಿಗೆ ತಮ್ಮ ಬದುಕನ್ನು ಸಾಗಿಸುತ್ತಿರುವ ಬೆಂಗಳೂರಿಗರನ್ನು ಅರ್ಥಾತ್ ಕನ್ನಡಿಗರನ್ನು ದೂಷಿಸಬಹುದೇ?
ಸಧ್ಯಕ್ಕೆ ನಮ್ಮ ಸರಕಾರ ಮಾಡಬೇಕಾಗಿರುವ ಕೆಲಸಗಳೇನು?

೧.ಬೆಂಗಳೂರಿನಲ್ಲಿ ಸಾಪ್ಟವೇರ್ ಕಂಪನಿಗಳು ಮಿತಿ ಮೀರಿಯೇ ಇವೆ. ಅಲ್ಲದೇ ಇಲ್ಲಿ ಇರುವ ಕಂಪನಿಗಳಲ್ಲಿ ಕನ್ನಡಿಗರು ಇರುವುದು ಅಷ್ಟಕ್ಕೆ ಅಷ್ಟೆಯೇ. ಇನ್ನು ಮುಂದೆ ಯಾವುದೇ ಕಂಪನಿಗಳ ಅಂಗ ಕಛೇರಿಯನ್ನು ಬೆಂಗಳೂರಿನಲ್ಲಿ ತೆರೆಯಲು ಅನುಮತಿ ಕೊಡಬಾರದು. ಇದಕ್ಕೆ ಪರ್ಯಾಯವಾಗಿ ಧಾರವಾಡ, ಮಂಗಳೂರು, ಹಾಸನ ಇನ್ನೂ ಮುಂತಾದ ನಗರಗಳಲ್ಲಿ ಕಂಪನಿಗಳನ್ನು ತೆರೆಯಲು ಆಹ್ವಾನ ನೀಡುವುದು. ಅಲ್ಲಿ ಅವರಿಗೆ ಎಲ್ಲ ವಿಧದ ಸೌಕರ್ಯಗಳನ್ನು ಕಲ್ಪಸಿ ಕೊಡುವುದು.

೨.ಇನ್ನು ಮುಂದೆ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳನ್ನು , ವಾಣಿಜ್ಯ ಸಂಕೀರ್ಣಗಳನ್ನು ಕಟ್ಟಲು ಕೊಡುವ ಅನುಮತಿಯನ್ನು ಖಡಾ ಖಂಡಿತವಾಗಿ ನಿರಾಕರಿಸುವುದು. ಒಂದು ಅಪಾರ್ಟ್‌ಮೆಂಟ್ ಇಲ್ಲವೇ ವಾಣಿಜ್ಯ ಸಂಕೀರ್ಣಗಳಲ್ಲಿ ದಿನನಿತ್ಯ ಉಪಯೋಗಿಸುವ ನೀರು, ವಿದ್ಯುತ್. ಅವುಗಳ ಬೆಲೆಯನ್ನು ಸರಕಾರ ಇನ್ನು ಅರಿತು ಕೊಂಡಿಲ್ಲವೇ? ಅರಿತು ಕೊಂಡರೆ ಗೊತ್ತಾಗುವುದು ಮಾನವನ ಆಸೆಗೆ ಕೊನೆಯಲ್ಲಿ?

೩.ಈಗಿರುವ ಕಂಪನಿಗಳು, ವಾಣಿಜ್ಯ ಸಂಕೀರ್ಣಗಳ ಆವರಣದಲ್ಲಿ ಇಂತಿಷ್ಟು ಅಂತ ಮರಗಳನ್ನು ಬೆಳೆಸಲೇ ಬೇಕೆಂದು ತಾಕೀತು ಮಾಡುವ ನಿಯಮವನ್ನು ಕೂಡಲೇ ಜಾರಿಗೆ ತರುವುದು.

೪.ಯಾವುದೇ ಪರಿಸ್ಥಿತಿಯಲ್ಲೂ ಮರಗಳನ್ನು ಕಡಿಯಲು ಅವಕಾಶ ಮಾಡಿಕೊಡಬಾರದು. ಮರವನ್ನು ಕಡಿಯಲೇಬೇಕೆಂಬ ಸಂದರ್ಭ, ಪ್ರಸಂಗಗಳು ಒದಗಿಬಂದ ಪಕ್ಷದಲ್ಲಿ ಅದಕ್ಕೆ ಪರ್ಯಾಯವಾಗಿ ಕನಿಷ್ಟ ಪಕ್ಷ 5 ಮರಗಳನ್ನಾದರೂ ಬೆಳೆಸಲೇಬೇಕು ಎಂಬ ಕಠಿಣ ಕಾನೂನು ಜಾರಿಗೆ ತರುವುದು.

೫.ಎಲ್ಲ ಕನ್ನಡ ಕುಲ ಬಾಂಧವರಲ್ಲಿ ಒಂದು ಕಳಕಳಿಯ ಮನವಿ ನಾವುಗಳೂ ಸಹ ನಮ್ಮ ನಮ್ಮ ಜೀವಿತಾವಧಿಯಲ್ಲಿ ಹೆಚ್ಚಿಗೆ ಅಲ್ಲ ಒಂದೊಂದು ಗಿಡ ನೆಟ್ಟು ಅದನ್ನು ಮರವಾಗಿ ಬೆಳೆಸುವ ಪ್ರಯತ್ನ ಮಾಡೋಣ.

ಕೊನೆಯದಾಗಿ ಹೇಳಬೇಕೆಂದರೆ ನಮ್ಮ ಬೆಂಗಳೂರು ನಮಗೆ ಬರಿ ದುಡ್ಡು ಗಳಿಸಿ ಕೊಡುವ ತಾಣವಾಗಬಾರದು ಜೊತೆಗೇನೇ ನೆಮ್ಮದಿಯನ್ನು, ಉಲ್ಲಾಸವನ್ನು, ಆರೋಗ್ಯವನ್ನು ವೃದ್ಧಿಸುವ ತಾಣವಾಗಬೇಕು ಅಲ್ಲವೇ?
ಇದು ಒಬ್ಬ ಕನ್ನಡಿಗನ ಆಶಯವಲ್ಲ, ಪಂಚ ಕೋಟಿ ಕನ್ನಡಿಗರ ಆಶಯವೆಂದು ನಾನು ಭಾವಿಸಿರುತ್ತೇನೆ.-

-ನಿಮ್ಮ ಸುನಿಲ್ ಮಲ್ಲೇನಹಳ್ಳಿ (http://mallenahallipages.blogspot.com/)

ಮಂಗಳವಾರ, ಸೆಪ್ಟೆಂಬರ್ 23, 2008

ಹೃದಯಬಿಚ್ಚಿ ಲೇಖನವೊಂದನ್ನು ಬರೆದಾಗ (ಭಾಗ 3)..



ನನ್ನ ಹಣೆಗಾದ ನೋವನ್ನೂ ಲೆಕ್ಕಿಸದೆ, “ಏನ್ರೀ ಬಹಳ ನೋವಾಯಿತಾ ನಿಮಗೆ?” ಎಂದು ಅವಳನ್ನು ಬಲು ಕನಿಕರದ ಮಾತುಗಳಿಂದ ಸಂತೈಸಲು ಮುಂದಾದೆನು. ಅವಳ ಮುದ್ದಾದ ಹಣೆಯ ಒಂದಂಚು ನೋವಿನಿಂದ ಊದಿಕೊಂಡಿರುವುದು ಸ್ಪಷ್ಟವಾಗಿ ನನಗೆ ಕಾಣಿಸುತ್ತಿತ್ತು. ತಕ್ಷಣವೇ ನನ್ನ ಬಳಿ ಇದ್ದ ನೋವುನಿವಾರಕ ಔಷಧವನ್ನು ಬ್ಯಾಗಿನಿಂದ ತೆಗೆದು, ಹಚ್ಚಿಕೊಳ್ಳಲು ಅವಳಿಗೆ ಕೊಟ್ಟೆನು. ಅದನ್ನು ಹಚ್ಚಿಕೊಂಡು ಮಲಗಲು ಅಣಿಯಾಗುತ್ತಾಳೆ ಎಂದು ನಾನು ಮನದಲ್ಲಿ ಎಣಿಸಿದ್ದೆ.

ಆದರೆ ಅದು ಹಾಗಾಗಲಿಲ್ಲ. ಮೃದುವಾದ ಅವಳ ಹಸ್ತವನ್ನು ನನ್ನತ್ತ ಚಾಚುತ್ತಾ, “ನೀವು ಆವಾಗಿನಿಂದಲೂ ನನ್ನ ಜೊತೆ ಮಾತನಾಡಲು ತುಂಬಾ ಇಚ್ಚಿಸಿದ್ದೀರಿ ಅಂತಾ ಕಾಣುತ್ತೆ. ಆದರೆ ನಾನೇ ಮಾತನಾಡ್ಲಿಲ್ಲ ಕ್ಷಮಿಸಿ! ನನ್ನ ಹೆಸರು ದೀಪಾ, ಹಾಸನದಲ್ಲಿ ಇಂಜಿನಿಯರಿಂಗ್ ಮಾಡ್ತಾ ಇದ್ದೀನಿ, ಗಣೇಶನ ಹಬ್ಬಕ್ಕೆಂದು ನನ್ನ ಸ್ನೇಹಿತೆಯರೊಂದಿಗೆ ಊರಿಗೆ ಹೋಗ್ತಾ ಇದ್ದೀನಿ" ಎಂದು ಒಂದೇ ನಿಟ್ಟುಸಿರಿನಲ್ಲಿ ಹೇಳದೆ ಬಲು ತಾಳ್ಮೆಯಿಂದ ನನ್ನಲ್ಲಿ ಹೇಳಿದಳು. ಆನಂತರ ನಿಮ್ಮ ಹೆಸರೇನು? ನಿಮ್ಮದು ಯಾವೂರು? ಎನ್ನುವುದನ್ನೂ ಸಹ ಅಷ್ಟೇ ತಾಳ್ಮೆಯಿಂದ ನನ್ನಲ್ಲಿ ಕೇಳಿದಳು. ತುಂಬಾ ಆನಂದಭರಿತನಾಗಿ ಅವಳು ಕೇಳಿದ ಎರಡೇ ಎರಡು ಪ್ರಶ್ನೆಗಳಿಗೆ ಇಡೀ ನನ್ನ ಜನ್ಮವೃತ್ತಾಂತವನ್ನೇ ಚಾಚೂ ತಪ್ಪದೇ ಅವಳಲ್ಲಿ ಹೇಳಿದೆ. ನಾನು ಹೇಳಿದ ಯಾವೊಂದು ಸಂಗತಿಯೂ ಅಷ್ಟು ಕುತೂಹಲವೆಂದು ಅವಳಿಗೆ ಅನ್ನಿಸಲಿಲ್ಲ. ಆದರೆ ನನಗೆ ಪ್ರಕೃತಿಯ ಬಗ್ಗೆ ಹಾಗೂ ಸಾಹಿತ್ಯ, ಕಲೆ ಬಗ್ಗೆ ಇಷ್ಟ ಎಂದು ಹೇಳಿದ ನುಡಿಗಳು ಅವಳಿಗೆ ಕುತೂಹಲ ತರಿಸಿದ್ದವು. ಅಲ್ಲದೇ ಅದರ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸಕ್ತಳಾಗಿದ್ದಳು.

ತುಸುಸಮಯದ ಬಳಿಕ ಅವಳೇ ಮುಂದುವರೆದು, “ನೀವು ಯಾವ್ಯಾವ ಕಾದಂಬರಿ ಓದಿದ್ದೀರಾ? ಯಾರು ನಿಮಗೆ ಇಷ್ಟವಾದ ಸಾಹಿತಿ?” ಎಂದು ಕೇಳಿದಳು. ಮೊದಲೇ ಅವಳ ಜೊತೆ ಮಾತಾಡಲು ಚಡಪಡಿಸುತ್ತಿದ್ದ ನಾನು, "ಪಂಪನಿಂದ ಹಿಡಿದು ಜಯಂತ್ ಕಾಯ್ಕಿಣಿಯವರೆಗೂ ಎಲ್ಲಾ ಕನ್ನಡ ಸಾಹಿತಿಗಳ ಆ ಕಾದಂಬರಿ ಓದಿದ್ದೀನಿ..ಈ ಕಾದಂಬರಿ ಓದಿದ್ದೀನಿ, ದ.ರಾ ಬೇಂದ್ರೆಯವರ ಕವನಗಳು ಅಂದ್ರೆ ಇಷ್ಟ " ಅದು ಇದು ಎಂದು ಮನಸ್ಸಿಗೆ ಬಂದಿದ್ದನ್ನೆಲ್ಲ ಹೇಳಲು ಶುರುಮಾಡಿದೆ. ಆದರೂ ಅವಳು ಸ್ವಲ್ಪವೂ ಬೇಸರಗೊಳ್ಳಲೇ ಇಲ್ಲ ನಾನು ಹೇಳಿದ್ದನ್ನೆಲ್ಲ ತೀರ ಸಮಾಧಾನವಾಗಿ ಕೇಳುತ್ತಲೇ ಇದ್ದಳು. ಆಗಲೇ ನನಗೆ ಅರಿವಾದದ್ದು ಅವಳಿಗೆ ಸಾಹಿತ್ಯದ ಬಗ್ಗೆ ತುಂಬಾ ಒಲವಿದೆ ಎಂದು. ನಾ ಬರೆದ ಒಂದೆರಡು ಲೇಖನಗಳನ್ನು, ಕವನಗಳನ್ನು ಅವಳಿಗೆ ತೋರಿಸಿದೆ.
ಅವುಗಳನ್ನು ಓದಿ, "ತುಂಬಾ ಚೆನ್ನಾಗಿ ಬರೆದಿದ್ದೀರ, ಹೀಗೆಯೇ ಬರೆಯುತಾ ಇರಿ. ನಮ್ಮ ಕನ್ನಡಭಾಷೆ ನಿಮ್ಮಂತಹ ಪ್ರಜ್ಞಾವಂತ ಯುವಕರಿಂದಲೇ ಏಳಿಗೆಯ ಹಾದಿಯನ್ನು ಹಿಡಿಯಬೇಕು" ಎಂದಳು.

ನಂತರದಲ್ಲೂ ಅವಳೇ ಮುಂದುವರೆದು, “ನನಗೆ ಹಾಡುವುದು, ನೃತ್ಯ ಮಾಡುವುದು ಅಂದ್ರೆ ತುಂಬಾ ಇಷ್ಟ ನಾನು ಜಂಬಕ್ಕೆ ಹೇಳ್ತಿಲ್ಲ ಸ್ಕೂಲ್ ಲೆವೆಲ್ನಲ್ಲಿ, ಕಾಲೇಜ್ ಲೆವೆಲ್ನಲ್ಲಿ ಅನೇಕಾನೇಕ ಬಹುಮಾನಗಳು ನನಗೆ ಬಂದಿವೆ” ಎಂದು ಭಾವಪರವಶಳಾಗಿ ನುಡಿದಳು.
ಮೊದಲೇ ಅವಳ ರೂಪರಾಶಿಯ ಬಲೆಯಲ್ಲಿ ಆಜೀವನ ಬಂಧಿಯಾಗಿದ್ದ ನಾನು, ಅವಳಿಗೆ ಕಲೆ, ಸಾಹಿತ್ಯದ ಬಗ್ಗೆ ಇರುವ ಅಭಿರುಚಿಯನ್ನು ಕೇಳಿ ಅವಳಲ್ಲಿ ಇನ್ನಷ್ಟು ಮಾರುಹೋದೆ, ಬಾಳಪಯಣದ ರಥದಲ್ಲಿ ಸಂಗಾತಿಯಾಗಿಸಿಕೊಳ್ಳುವ ಯೋಜನೆಯನ್ನು ಮನದಲ್ಲೇ ಹಾಕಿಕೊಂಡು ಅರೆಕ್ಷಣದಲ್ಲಿ ಒಂದೆರಡು ಕವನಗಳನ್ನು ಅಂತರಾಳದಲ್ಲೇ ಬರೆದುಕೊಂಡು ಅವಳಿಗೆ ಹೇಳಲು ಮುಂದಾದೆ. ಅವಳೂ ಸಹ ಕೇಳಲು ಬಲು ಕಾತರವಾಗಿದ್ದಳು...

ಓ ದೀಪ..
ಆ ನಿನ್ನ ರೂಪ..
ನನ್ನುಸಿರಿನ ಕಣಕಣಕ್ಕೂ ಪರಿಮಳದ ದೂಪ..
ಆ ರೂಪ ಕಂಡ ನಾ, ನಿತ್ಯ ನಿನಗಾಗಿ ಪ್ರೇಮಪತ್ರ ಬರೆಯೋದು ತಪ್ಪಾ..?
ಆ ನನ್ನ ಪ್ರೇಮಪತ್ರಕ್ಕೆ ಮರು ಉತ್ತರ ನೀ ಬರೀತಿಯಾ ಸ್ವಲ್ಪ..?

ಓ ದೀಪು
ಗುಣದಲಿ ನೀ ಮುಗ್ಧ ಪಾಪು..
ಜಗದ ಜನರಲಿ ಸ್ಪೂರ್ತಿ ತುಂಬಲು ನಿನ್ನ ನಗುವೊಂದೇ ಸಾಕು..
ನೀ ನಗು ನಗುತಾ ಜೊತೆಗಿರಲು ನನಗೆ ಇನ್ನೇನು ಬೇಕು?

ಓ ದೀಪು
ನಿನ್ನ ಚೆಲುವ ಸಿರಿ ಹೆಚ್ಚಿಸಲೆಂದು ನಾ ತಂದಿರುವೆ Dove ಸೋಪು..
ಅದನು ತಲುಪಿಸಲು ಒಮ್ಮೆ ನನಗೆ ತೋರುವೆಯಾ ನಿಮ್ಮೂರ Road ಮ್ಯಾಪು.

ಇದನ್ನೆಲ್ಲ ತುಂಬು ಮೌನದಿಂದ ಆಲಿಸುತ್ತಿದ್ದವಳು, ಕಿರುನಗೆ ಬೀರುತ್ತಾ “ನಿಮ್ಮಲ್ಲಿ Imagination Power ತುಂಬಾ ಚೆನ್ನಾಗಿದೆ. ಆದರೆ ಈ ರೀತಿ Silly Silly ಕವನಗಳನ್ನು ಬರೆಯೋದು ಬಿಟ್ಟು, ನೀವ್ಯಾಕೆ ಹೆಚ್ಚು ಅರ್ಥಪೂರ್ಣವಾದ ಕವನಗಳನ್ನು, ಲೇಖನಗಳನ್ನು ಬರೆಯಲು ಪ್ರಯತ್ನಿಸಬಾರದು?” ಎಂದು ನನ್ನಲ್ಲಿ ಪ್ರಶ್ನಿಸಿದಳು. ಅರೆಕ್ಷಣ ಏನೇಳಬೇಕೆಂದು ತೋಚದೆ ನಾನು ತಬ್ಬಿಬ್ಬಾದೆ. ನಂತರ ತಡವರಿಸಿಕೊಂಡು “ಹೌದು..ಹೌದು ನೀವೇಳೊದು ನಿಜ, ನಾ ಆಗಲೇ ಹೆಚ್ಚು ಅರ್ಥಪೂರ್ಣವಾದ ಹತ್ತಾರು ಕವನಗಳನ್ನು ಬರೆದಿದ್ದೀನಿ” ಎಂದೇಳಿದೆ. ಆದರಾಗಲೇ "ನನ್ನ ಮನಸ್ಸು ತನ್ನ ಸ್ಥಿಮಿತ ಕಳೆದುಕೊಳ್ಳುವತ್ತ ಸಾಗಿತ್ತು. ಭುಗಿಲೆದ್ದ ಅಂತರಾಳದ ಇಂಗಿತವು ಮಾತಿನ ರೂಪದಲ್ಲಿ ಬರುವ ಹವಣಿಕೆಯಲಿ ತೊಡಗಿತ್ತು. ಸರಿ ಯಾವುದನ್ನೇ ಆಗಲಿ ಬಚ್ಚಿಟ್ಟುಕೊಂಡಷ್ಟೂ ನೋವೇ ಜಾಸ್ತಿಯೆಂಬುದನ್ನು ಅರಿತು. ನಾನೇ ಮುಂದುವರೆದು, ಅಚಲ ಧೈರ್ಯವನ್ನು ಮನದಲ್ಲಿ ತಂದುಕೊಂಡು ಅಂತರಾಳದ "ಪ್ರೀತಿ ಇಂಗಿತವನ್ನು" ಒಂದೇ ಉಸಿರಲ್ಲಿ ಹೇಳಿಯೆಬಿಟ್ಟೆ!"

ಅದಕ್ಕವಳು ನಸುನಗುತ್ತಾ, "ನೀವಿದನ್ನ ನನ್ನಲ್ಲಿ ಕೇಳಿಯೇ ಕೇಳುತ್ತಿರಾ ಎಂದು ನಾನು ಆಗಲೇ ಊಹಿಸಿದ್ದೆ. ಸರಿ ನಾನೂ ಸಹ ನನ್ನ ಮನದ ಇಂಗಿತವನ್ನು ಹೇಳುತ್ತ್ತೇನೆ ಕೇಳಿ, ನನಗೆ ನೀವು ಇಷ್ಷವಾಗಿಲ್ಲವೆಂದಲ್ಲ ತುಂಬ ಇಷ್ಟವಾಗಿದ್ದೀರಿ, ನಿಮಗಿಂತ ನಿಮ್ಮ ಕವನಗಳು, ನಿಮ್ಮ ಮಾತೃಭಾಷಾ ಪ್ರೇಮ ಇನ್ನೂ ಇಷ್ಟವಾಯಿತು. ಆದರೆ ಇಷ್ಟವನ್ನು ಪ್ರೀತಿ, ಪ್ರೇಮ, ಹಾಗೂ ಬಾಂಧವ್ಯದಲ್ಲಿ ಕೊನೆಮಾಡಿಕೊಳ್ಳೋದು ನನಗೆ ಇಷ್ಟವಿಲ್ಲ. ನಿಮಗೆ, ನಿಮ್ಮ ಬರವಣಿಗೆಗೆ ನಾನು ಆಜೀವ ಪರ್ಯಂತ ಅಭಿಮಾನಿಯಾಗಿರುತ್ತೇನೆ. ಅಲ್ಲದೇ ನಿಮಗೆ ಗೊತ್ತಲ? ನಮ್ಮ ಸಮಾಜದಲ್ಲಿ ಮದುವೆಗೆ ಎದುರಾಗುವ ತೊಡಕುಗಳು ನೂರಾರು ಅಂತ. ಜಾತಿ, ಮತ, ಪಂಥ ಇತ್ಯಾದಿ. ನಮ್ಮದು ಮೊದಲೇ ಕಟ್ಟಾ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ "...ಇನ್ನೂ ಏನೇನೋ ಹೇಳಹೋಗಿದ್ದಳು.

ಅಷ್ಟರಲ್ಲಿ ಏ ದೀಪಾ, ಊರು ಬಂತು ಕಣೇ. ಇಲ್ಲೇ ಸ್ಟಾಪ್ ಕೇಳೋಣ ಇಲ್ಲಾಂದ್ರೆ ಹೆಬ್ರಿಗೆ ಹೋಗಿ ಇಳಿದು ಕೊಳ್ಳಬೇಕಾಗುತ್ತೇ ಎಂದೇಳುತ್ತಾ ಆಕೆಯ ಗೆಳತಿಯರಿಬ್ಬರು ತಾವು ತಂದಿದ್ದ ಭಾರೀ ಗಾತ್ರದ ಲಗೇಜ್‌ಗಳನ್ನು ಕೈಯಲ್ಲಿ ಹಿಡಿದು ಇಳಿಯಲು ಸನ್ನದ್ಧರಾಗಿ ಮುಂದೆಹೋದರು.

ಅವರ ಆ ಮಾತುಗಳನ್ನು ಕೇಳುತ್ತಲೇ ದೀಪಾಳಿಗಿಂತ ಬಿರುಸಾಗಿ ನಾನೇ ಎದ್ದು ಲಗೇಜ್ ಕ್ಯಾಬಿನ್‌ನಿಂದ ಅವಳ ಲಗೇಜ್ ತೆಗೆದುಕೊಡುತ್ತಾ ಪಕ್ಕಕ್ಕೆ ಸರಿದು ಅವಳಿಗೆ ಇಳಿದುಹೋಗಲು ಅನುವು ಮಾಡಿಕೊಟ್ಟು ಅವಳನ್ನು ಕೊನೆಯದಾಗಿ ನೋಡಲು ಒಮ್ಮೆ ಕತ್ತನ್ನು ಎತ್ತಲು, ಅದೇ ಕ್ಷಣದಲ್ಲಿ ಡ್ರೈವರ್ ಲೈಟ್ ಹಾಕಿದನು. ನಾನು ಒಬ್ಬನೇ ಅಳುತ್ತಿರುವುದೆಂದು ನಾ ಅಂದುಕೊಂಡಿದ್ದೆ. ಆದರೆ ವಾಸ್ತವ್ಯದ ಚಿತ್ರಣ ಬೇರೆಯೇ ಹಾಗಿತ್ತು ಕ್ಷಣಾರ್ಧದಲ್ಲಿ ದೀಪಾಳ ನಯನಗಳು ಕಣ್ಣೀರಿನ ಹೊಳೆಯಲ್ಲಿ ಮಿಂದು ಕೆಂಪಾಗಿರುವುದು ಮುಗ್ಧಮಗುವಿಗೂ ತಿಳಿಯುವಂತೆ ಇತ್ತು. ಅವಳ ಆ ಮುಖವನ್ನೊಮ್ಮೆ ನೋಡಿ ತಡೆಯಲಾರದೆ ಬಿಕ್ಕಳಿಸಿ ಜೋರಾಗಿಯೇ ಅತ್ತುಬಿಟ್ಟೆ. ದೀಪಾಳಲ್ಲಿ ಅಳುವಿತ್ತು, ಆದರೆ ಮನದಲ್ಲಿ ಪ್ರೀತಿ ಅನ್ನುವುದರ ಬಗ್ಗೆ ಕೊಂಚವೂ ಕರುಣೆ ಇರಲ್ಲಿಲ್ಲ.

“ಯಾರ್ರೀ ಇಳಿಯೋರು? ಬೇಗ ಬನ್ರೀ, ಎಷ್ಟು ಹೊತ್ತು ಮಾಡ್ತೀರ?” ಎಂದು ಕಂಡಕ್ಟರ್ ಗಡುಸುಧ್ವನಿಯಲ್ಲಿ ಕೂಗಲು, ತಕ್ಷಣ ಎಚ್ಚೆತ್ತುಕೊಂಡ ದೀಪಾ ಅಳುತ್ತಾ ‌ಅಲ್ಲಿಂದ ಹೊರಟುಹೋದಳು. ಆ ಕ್ಷಣದಲ್ಲಿ ನನ್ನ ಕಣ್ಣಂಚಲ್ಲಿ ಕಣ್ಣೀರಿನ ಹನಿಬಿಂದುಗಳು ಹೆಚ್ಚಾಗುತ್ತಿದ್ದಂತೆ ಅವಳ ಭೌತಿಕ ಚಿತ್ರಣ ಅಸ್ಪಷ್ಟವಾಗುತ್ತಾ ಹೋಯಿತು.

ಅವಳು ಕೆಳಗೆ ಇಳಿಯುತ್ತಲೇ ಅವಳ ಗೆಳತಿಯೊಬ್ಬಳು, “ಯಾಕೆ ಅಳ್ತಿದ್ದೀಯಾ? ಏನೇ ವಿಷಯಾ? ಯಾರು ಆ ಹುಡುಗ?” ಎಂದು ಕೇಳಿದ ಪ್ರಶ್ನೆ ನನ್ನ ಕಿವಿಯಂಚನ್ನು ತಾಕುತ್ತಿದ್ದಂತೆ ಬಸ್ಸು ಹೊರಟಿತು.

ನಾನೇ ಹಚ್ಚಿಕೊಂಡಪ್ರೀತಿಯ ದೀಪದೂರ ಹೋಗಿ ಮನದ ಮನೆಯಲ್ಲಿ ಬೆಳಕನ್ನೇ ನುಂಗುವಂತೇ ಆವರಿಸಿದ್ದ ಕತ್ತಲೆ ಹಾಗೂ ನಯನಗಳ ಒಡಲಿನಿಂದ ತುಂಬಿಬರುತ್ತಿದ್ದ ಕಣ್ಣೀರಧಾರೆ ಇವುಗಳ ನಡುವೆಯೂ..... "ಸಹಪ್ರಯಾಣಿಕಳಾಗಿದ್ದ ಅವಳೊಂದಿಗೆ ಕಳೆದ ಪ್ರಯಾಣದ ಮಧುರ ಕ್ಷಣಗಳು ನನ್ನ ಅಂತರಾಳದಲ್ಲಿ ಬಾಲ್ಯದ ನೆನಪುಗಳಂತೆಯೇ ಅಚ್ಚಳಿಯದ ನೆನಪಾಗಲು ಆಗಲೇ ಯಥಾವತ್ತಾಗಿ ತರ್ಜುಮೆಯಾಗುತ್ತಿದ್ದವು" .-----------ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಮಂಗಳವಾರ, ಸೆಪ್ಟೆಂಬರ್ 16, 2008

ಹೃದಯಬಿಚ್ಚಿ ಲೇಖನವೊಂದನ್ನು ಬರೆದಾಗ (ಭಾಗ 2)..




ಹೃದಯ ಬಿಚ್ಚಿ ಲೇಖನವೊಂದನ್ನು ಬರೆದಾಗ (ಭಾಗ 2)
ಮುಂದುವರೆದ ಭಾಗ ೨ - ನಿಮ್ಮ ಸುನಿಲ್ ಮಲ್ಲೇನಹಳ್ಳಿ
http://mallenahallipages.blogspot.com
ಹೆಚ್ಚಾಗಿ ಕನ್ನಡ ಪುಸ್ತಕಗಳನ್ನೇ ಓದುವ ನಾನು ಪಕ್ಕದಲ್ಲಿ ಹುಡುಗಿ ಕುಳಿತಿರುವುದನ್ನು ಮನಗಂಡು ನನ್ನ ಲೆವಲ್ಅನ್ನು ಕಾಯ್ದುಕೊಳ್ಳುವ ಸಲುವಾಗಿ ಓದಲು ಚೇತನ ಭಗತ್‌ರ “Five Point Someone ಎಂಬ ಇಂಗ್ಲೀಷ್ ಪುಸ್ತಕವನ್ನು ಬ್ಯಾಗಿನಿಂದ ಹೊರ ತೆಗೆದು, ಖರೀದಿಸಿದ ನಾಲ್ಕರಲ್ಲಿ ಮೊರು ಸೀಬೆಕಾಯಿಗಳನ್ನು ಬ್ಯಾಗಿನ ಒಳಗೆ ಹಾಕಿ, ಓದಲು ಅಣಿಯಾದೆ. ಆದರೆ ಬರಿ ಪುಟಗಳನ್ನು ತಿರುವಿಹಾಕಲು ಸಾಧ್ಯವಾಯಿತೇ ವಿನಹ: ಓದಲು ಮನಸ್ಸಾಗಲೇ ಇಲ್ಲ! ಅದಕ್ಕೆ ಮೊಲಕಾರಣ “ಕಿರುನೋಟದಲ್ಲಿ ನನ್ನ ಕಣ್ಣುಗಳು ಸೆರೆಹಿಡಿದಿದ್ದ ಆ ಹುಡುಗಿಯ ಸುಂದರವದನದ ರಂಗುರಂಗಿನ ಚಿತ್ರಣವು ನನ್ನಯ ಮನಸ್ಸಲ್ಲಿ ಸದ್ದಿಲ್ಲದ ಯಾವುದೋ ಆಹ್ಲಾದಕರ ನಾದವ ಮೀಟುತಿತ್ತು!”
ಇದರ ನಡುವೆ ನನಗೇನೆ ನನ್ನ ಬಗ್ಗೆ ನಾಚಿಕೆ ತರುವ ಘಟನೆಯೊಂದು ನೆಡೆದುಹೋಯಿತು. ಪಕ್ಕದಲ್ಲಿ ಕುಳಿತ ಆ ತರುಣಿಯ ಎದುರು ನನ್ನ ಲೆವಲ್ಅನ್ನು ಕಾಯ್ದುಕೊಳ್ಳುವ ಸಲುವಾಗಿ ನಾನು ಇಂಗ್ಲೀಷ್ ಭಾಷೆಯ ಪುಸ್ತಕವನ್ನು ಬ್ಯಾಗಿನಿಂದ ಹೊರತೆಗೆದು ಓದಲು ಮಗ್ನನಾದುದ್ದೆನೋ ನಿಜ. ಆದರೆ ಯಾವ ಹುಡುಗಿಯನ್ನು ನಾನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇನೋ ಆ ಹುಡುಗಿನೇ ಕಾರಂತರ “ಹುಚ್ಚು ಮನಸ್ಸಿನ ಹತ್ತು ಮುಖಗಳು” ಪುಸ್ತಕವನ್ನು ಆಕೆಯ ಬ್ಯಾಗಿನಿಂದ ಹೊರತೆಗೆದು ಓದತೊಡಗಿದಳು.

ಇದಕ್ಕಿಂತಾ ಅವಮಾನ ಬೇಕೆ?? ನಾನು ಓದುತ್ತಿದ್ದ ಆ ಇಂಗ್ಲೀಷ್ ಪುಸ್ತಕವನ್ನು ಹಾಗೆ ಬ್ಯಾಗಿನೊಳಗೆ ಇಟ್ಟು,
“ಹುಚ್ಚು ಮನಸ್ಸಿನ ಹನ್ನೊಂದನೆಯ ಮುಖ ನಾನೇ?” ಇರಬೇಕೆಂದು ಅಂದುಕೊಳ್ಳುತ್ತಾ ಕಿಟಕಿಯ ಗ್ಲಾಸ್ ಅನ್ನು ಸ್ವಲ್ಪ ಸರಿಸುತ್ತ ಹೊರಗಿನ ಗಿಡ, ಮರ, ಬೆಟ್ಟಗಳ ನಯನಾಕರ್ಷಕ ದೃಶ್ಯವನ್ನು ನೋಡುವ ಪ್ರಯತ್ನ ಮಾಡತೊಡಗಿದೆ. ಪ್ರಕೃತಿಯ ಈ ಸುಂದರ ದೃಶ್ಯಾವಳಿಯನ್ನೇ ನೋಡಲೇಬೇಕೆಂದು ಇಷ್ಟಪಟ್ಟು ಬಸ್ಸನ್ನೇರಿ ಬಂದಿದ್ದೇನೋ ನಿಜ. ಆದರೆ ಆ ಸೊಬಗನ್ನು ನೋಡಲು ಮನಸ್ಸಿದ್ದರೇ ತಾನೆ? ಮನಸ್ಸೆಲ್ಲಾ ಪಕ್ಕದಲ್ಲಿ ಆಸೀನಳಾಗಿದ್ದ “ಆ ತರುಣಿಯ ರೂಪರಾಶಿಯ ಬಲೆಯಲ್ಲಿ ಆಜೀವನ ಬಂಧಿಯಾಗಿತ್ತು!” ಅವಳನ್ನು ನಾನು ನೋಡಿದ “ಆ ಒಂದೇ ಒಂದು ಕುಡಿನೋಟ” ನನ್ನಲ್ಲಿ ಇಷ್ಟೆಲ್ಲಾ ಬದಲಾವಣೆ ತಂದಿತ್ತು!

“Excuse me, ದಯವಿಟ್ಟು Window Glass ಅನ್ನು ಪೂರ್ತಿ ತೆಗೆಯುತ್ತಿರಾ? ನನಗೆ ಗಿಡ, ಮರ, ಬೆಟ್ಟ, ಗುಡ್ಡಗಳನ್ನು ನೋಡುವುದೆಂದರೆ ತುಂಬಾ ಇಷ್ಟ” ಎಂದು ಮೃದುವಾದ ಮತ್ತು ಅಷ್ಟೇ ಸ್ಪಷ್ಟವಾದ ನುಡಿಗಳು ನನ್ನ ಪಕ್ಕದಲ್ಲಿ ಕುಳಿತ ಆ ತರುಣಿಯ ಬಾಯಿಯಿಂದ ಅಲೆ ಅಲೆಯಾಗಿ ಹೊರಬಂದವು. ನಾನು ಕಿಟಕಿಯ ಗ್ಲಾಸ್ ಅನ್ನು ಪೂರ್ತಿಯಾಗಿ ತೆರೆಯುತ್ತ “ಅಷ್ಟು ಇಷ್ಟವಿದ್ದರೆ ನೀವಿಲ್ಲಿ ಕೂರಬನ್ನಿ, ನಾನು ನಿಮ್ಮ ಜಾಗದಲ್ಲಿ ಕೂರುತ್ತಿನಿ” ಎಂದೇಳಿ ಅವಳಿಗೆ ಕಿಟಕಿಯ ಪಕ್ಕದಲ್ಲಿ ಕೂರಲು ಅನುವು ಮಾಡಿಕೊಟ್ಟೆ. ಕಿಟಕಿಯ ಪಕ್ಕದ ಸೀಟಿನಲ್ಲಿ ಕೂರುತ್ತಾ ಅವಳು “Thank you very much” ಎಂದು ನನ್ನ ಕಣ್ಣಲ್ಲಿ ಕಣ್ಣಿಡುತ್ತಾ ಹೇಳಿದಳು. “ಎಲ್ಲಾ ಹಲ್ಲುಗಳು ಕಾಣುವ ಹಾಗೆ ನಗುತ್ತಾ ಪರವಾಗಿಲ್ಲ ಬಿಡಿ” ಎಂದು ನಾನು ಹೇಳಿದೆ.

ಇನ್ನೇನಾದರೂ ಮುಂದುವರೆದು ಮಾತನಾಡೋಣವೆಂದರೆ ಹೊರಗಿನ ನಯನಮನೋಹರ ದೃಶ್ಯವನ್ನು ನೋಡಲು ಅತ್ತ ತಲೆಹಾಕಿದವಳು ಅರ್ಧತಾಸಾದರೂ ನನ್ನತ್ತ ತಿರುಗಲೇ ಇಲ್ಲ! ಆನಂತರ ನಾನೇ ಬೇಕಂತಲೇ ನನ್ನ ಬ್ಯಾಗಿನಿಂದ Chips ಪ್ಯಾಕೇಟ್ ಅನ್ನು ಹೊರತೆಗೆದು, ಒಂದೆರಡು ಚೂರುಗಳನ್ನು ಬಾಯಿಗೆ ಇಟ್ಟುಕೊಂಡು. ಅವಳತ್ತಾ ತಿರುಗಿ “Excuse me ನೀವು ಸ್ವಲ್ಪ ತಗೋಳಿ” ಎಂದೇಳುತ್ತಾ, ಆ ಪ್ಯಾಕೆಟ್‌ನ್ನು ಅವಳ ಮುಂದೆ ಹಿಡಿದೆ. ಕಿರುನಗೆ ಬೀರುತ್ತಾ “No Thanks” ಎಂದೇಳಿ, ಹೊರಗಿನ ರಮಣೀಯಚಿತ್ರಣವನ್ನು ನೋಡುವುದರಲ್ಲಿ ಮತ್ತೆ ತಲ್ಲಿನಳಾದಳು.

ಅವಳನ್ನು ಮಾತಾನಾಡಿಸುವ ನನ್ನೆಲ್ಲ ಪ್ರಯತ್ನಗಳು ಸತತವಾಗಿ ವಿಫಲವಾಗುತ್ತಿರುವಾಗಲೇ, ನನ್ನ ಮನದ ತೊಳಲಾಟವನ್ನು ಅರಿತ ಆ ಭಗವಂತ ನನಗೆ ಸಹಾಯ ಮಾಡಲೆಂದು ಮಳೆರಾಯನನ್ನು ಧರೆಗೆ ಕಳುಹಿಸಿದನು. ಮಳೆರಾಯನ ಆರ್ಭಟಕ್ಕೆ ವಿಧಿಯಿಲ್ಲದೆ ಅವಳು ಕಿಟಕಿಯ ಗ್ಲಾಸ್ ಅನ್ನು ಮುಚ್ಚಿದಳು. ಚಡಪಡಿಸುತ್ತಿದ್ದ ನನ್ನ ಬಾಯಿಗೆ ಹಾಕಿದ್ದ ಗಾಳವನ್ನು ಬಿಚ್ಚಿದಂತಾಯಿತು. “ಅಯ್ಯೋ ಹಾಳಾದ್ದು ಮಳೆ ಇವಾಗಲೇ ಬರಬೇಕಿತ್ತೇ?” ಎಂದು ಒಂದೇ ಸಮನೆ ಇನ್ನೂ ಏನೇನೋ ಹೇಳಲುಹೋದೆ. ಆದರೆ ಅವಳೇ ಮಧ್ಯದಲ್ಲಿ “ಬಾಯಿ ಹಾಕುತ್ತಾ ಪರವಾಗಿಲ್ಲ ಬಿಡಿ ಬರೋ ಮಳೆಗೆ ಹಾಗೆಲ್ಲ ಹೇಳಬಾರದು” ಎಂದಳು.

ಸ್ವಲ್ಪ ಸಮಯ ಕಾದು ನಿಮ್ಮ ಹೆಸರೇನು? ನಿಮ್ಮದು ಯಾವೂರು? ಇನ್ನು ಏನೇನೋ ಕೇಳಲು ಅವಳತ್ತಾ ತಿರುಗಿದರೆ ಅವಳಾಗಲೇ ನಿದ್ರಾದೇವಿಯ ವಶವಾಗಿದ್ದಳು. ತಲೆ ಕೆಟ್ಟಂತೆ ಆಯಿತು. ಮಲಗಿದ್ದ ಅವಳನ್ನು ನೋಡುತ್ತಲೇ ಬಾಯಿಯಿಂದ ಮಾತುಗಳು ತನ್ತಾನೇ ಬಾರದಾದವು. ಅರೆಕ್ಷಣದಲ್ಲಿ ನನ್ನ ಕಣ್ಣುಗಳು ಇದ್ದಕ್ಕಿದ್ದಂತೆ ಕಾರ್ಯೊನ್ಮುಖವಾದವು. ಶಿಲಾಬಾಲಕೆಯಂತಿದ್ದ ಅವಳ ಆ “ಚೆಲುವಿನ ಚಿತ್ರಣವನ್ನು ನೋಡಲೆಂದು ನನ್ನ ಕಣ್ಣುಗಳು ಸಹಜ ಸ್ಥಿತಿಯಿಂದ ೬೦ ಡಿಗ್ರಿ ಓರೆಯಾಗಿದ್ದವು. ನಿಜಕ್ಕೂ ಇವಳು ಅಪ್ಸರೆಯರ ಪ್ರತಿರೂಪವೋ? ಏನೋ? ಒಂದೂ ನಮ್ಮಗರಿಯದು ಎನ್ನುವ ಸಂದೇಶವನ್ನು ನನ್ನ ಕಣ್ಣುಗಳು ಮನಸ್ಸಿಗೆ ರವಾನೆ ಮಾಡಿದವು”.

ಆಹಾ...! ಅವಳು!, ಬಣ್ಣಿಸಲು ಯಾವ ಭಾಷೆಯ ಪದಗಳಿಗೂ ನಿಲುಕದಂತಹ “ಆಗರ್ಭ ಚೆಲುವು” ಅವಳದು. ಅಂಥವಳನ್ನು ಕಂಡಾಗ ನನ್ನ ಕಣ್‌ರೆಪ್ಪೆಗಳು ಒಂದನ್ನೊಂದು ಆಲಂಗಿಸುವುದನ್ನೇ ಅರೆಗಳಿಗೆ ಮರೆತವು, ನಯನಗಳೆರಡೂ ಎಂದೂ ಕಾಣದ ಆ ನೋಟವನ್ನು ಕಂಡು ಹಿರಿಹಿರಿ ಹಿಗ್ಗಿದ್ದವು, ತುಂಬು ತಂಪನೀಯುವ ಆಹ್ಲಾದಕರ ಸಂಚಾರ ನರನರದಲ್ಲಿ ಆರಂಭವಾಗಿತ್ತು, ಮನವು ಕಲ್ಪನಾಲೋಕಕ್ಕೆ ಲಗ್ಗೆಯಿಟ್ಟು ಅವಳ ಆ “ಅಪೂರ್ವ ಸೌಂದರ್ಯ”ದ ವರ್ಣನೆಗಾಗಿ ಪದಗಳ ಹುಡುಕಾಟದಲ್ಲಿ ತೊಡಗಿತ್ತು, ಹೃದಯದ ಊರೊಳಗೆ ಎಲ್ಲೆಲ್ಲೂ ಪ್ರೀತಿ ನಿನಾದ ಮೊಳಗಿತ್ತು, ಆ ನಿನಾದಕ್ಕೆ ಮೈಯಲ್ಲಿನ ರೋಮ ರೋಮವೂ ಹುಚ್ಚೆದ್ದು ಕುಣಿಯುತ್ತಿದ್ದವು. “ಹಿಂದೂಸಂಸ್ಕೃತಿಯ ಭವ್ಯಪ್ರತಿರೂಪವಾಗಿದ್ದ ಅವಳನ್ನು ನೋಡುನೋಡುತ್ತಲೇ ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಕೊಡುಗೆ ಇವಳೆಂದು ಕ್ಷಣಾರ್ಧದಲ್ಲೇ ನನಗರಿವಾಯಿತು”.

ಹೌದು ನಿಜವಾಗಿಯೂ ಅವಳ ರೂಪ ಹಾಗೆಯೇ ಇತ್ತು! ನುಣುಪಾದ ಕೂದಲುವುಳ್ಳ ಅವಳ ನೀಳವಾದ ಜಡೆ, ಅವಳ ಆ ರೂಪಕ್ಕೆ ಮೆರುಗು ನೀಡುವಂತೆ ಎಷ್ಟು ಬೇಕೋ ಅಷ್ಟು ಮಾತ್ರ ಹೊರಚಾಚಿದ ಮುಂಗುರುಳು, ಪ್ರಾಯದ ಸುಳಿವನ್ನು ಸಾರುವ ಒಂದು ಮೊಡವೆ ಕೂಡ ಇರದ ಮುದ್ದಾದ ಮುಖ, ಮೊದಲ ನೋಟದಲ್ಲೇ ನಾನು ಕಂಡಿದ್ದ ಭಯವೇ ಇರದ, ಬರಿ ನಿರ್ಮಲತೆ ತುಂಬಿಕೊಂಡಿರುವ, ಹುಣ್ಣಿಮೆಯ ಚಂದಿರನ ಕಾಂತಿಯನ್ನೂ ತುಸು ಮೀರಿಸುವ ಕಣ್ಣುಗಳು, ಇನ್ನೂ ಮೂಗುತಿಯನ್ನು ಚುಚ್ಚಿಸಿಕೊಂಡಿರದ ಮುಖಕ್ಕೆ ತಕ್ಕವಾದ ಕಿರುಮೊಗು, ಯಾವುದೇ ಸೌಂದರ್ಯವರ್ಧಕ ಲೇಪಿಸದೇ ಹೋದರೂ ಪಳಪಳನೆ ಹೊಳೆಯುತ್ತಿದ್ದ ಅವಳ ಆ ಕೆಂದುಟಿ, ಮೆಲ್ದುಟಿಯ ಸ್ವಲ್ಪ ಪಕ್ಕಕ್ಕೆ ಇದ್ದ ಕಿರುಕಪ್ಪನೆಯ ಮಚ್ಚೆ, ಕಿರುನಗೆಯನ್ನು ಬೀರುವಾಗ ಮಂಜಿನ ಹೊಳಪಿನಂತೆ ಇದ್ದ ಹಲ್ಲುಗಳು, ತನ್ನ ಸುಂದರ ಉಡುಪಿನ ಬಣ್ಣಕ್ಕೆ ಹೋಲುವ ಹಾಗೆ ಇಟ್ಟುಕೊಂಡ ಬಿಂದಿಗೆ, ಹಚ್ಚಿಕೊಂಡ ಉಗುರು ಬಣ್ಣ, ತೊಟ್ಟ ಕೈ ಬಳೆಗಳು, ನೀಳವಾದ ಜಡೆಗೆ ಹಾಕಿಕೊಂಡ ರಿಬ್ಬನ್ ಒಟ್ಟಾರೆ “ಅರಸಿಕನಲ್ಲೂ ರಸಿಕತೆಯನ್ನ ಬಡಿದೆಬ್ಬಿಸಿ ತರುವ ರೂಪರಾಶಿಯನ್ನು ಮೈಗೂಡಿಸಿಕೊಂಡಿದ್ದ ಅಪ್ರತಿಮ ಲಾವಣ್ಯದ ದಿವ್ಯಾಂಗನೆ ಅವಳು”.

ಅವಳ ಆ “ಸೌಂದರ್ಯರಾಶಿಯನ್ನು ನನ್ನ ನಯನಗಳಲ್ಲಿ ತುಂಬಿಕೊಂಡು, ನಿದ್ರಾದೇವಿಯ ಪರವಶವಾಗುತ್ತಿರುವಾಗಲೇ” ಬಸ್ಸಿನ ಚಾಲಕನು ಹಠಾತ್ತನೆ ವಾಹನದ ಬ್ರೇಕ್ ಹಾಕಿದನು. ಕ್ಷಣಾರ್ಧದಲ್ಲಿ ನನ್ನ ಅವಳ ಹಣೆಗಳೆರಡು ಎದುರಿನ ಸೀಟಿಗೆ ನೋವು ತರುವ ಮುತ್ತನ್ನಿಟ್ಟವು...
(ಮುಂದುವರೆಯುವುದು..........) - ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಸೋಮವಾರ, ಸೆಪ್ಟೆಂಬರ್ 8, 2008

ಹೃದಯಬಿಚ್ಚಿ ಲೇಖನವೊಂದನ್ನು ಬರೆದಾಗ...


ಪ್ರಿಯ ಓದುಗ ವೃಂದಕ್ಕೆ ನನ್ನ ಹೃದಯಪೂರ್ವಕ ನಮನ. ನೀವೇನೋ ಗೌರಿ,ಗಣೇಶ ಹಬ್ಬ ಮಾಡೊದಕ್ಕೆ ನಿಮ್ಮ ನಿಮ್ಮ ಊರಿಗೆ ಹೊರಟ್‌ಹೋಗಿಬಿಟ್ಟಿದ್ರಿ. ಆದ್ರೆ ಇಲ್ಲಿ..ನನ್ನ ಬ್ಲಾಗಿನಲ್ಲಿ ನಾ ಬರೆದ ಕವನಗಳು, ಲೇಖನಗಳು ಓದುವವರು ಯಾರೂ ಇಲ್ವಲಪ್ಪ ಅಂತ ಒಂದೇ ಸಮನೆ ಅಳ್ತಾ ಇದ್ದವು. ಅದನ್ನು ಬಿಟ್ಟ್‌ಹಾಕಿ ಅವುಗಳದ್ದು ಯಾವಾಗಲೂ ಅದೇ ಗೋಳು ಒಂದೊಂದು ಸಲ ಅಳ್ತವೆ, ಒಂದೊಂದು ಸಲ ನಗ್ತಾ ಇರುತ್ತವೆ. ಹೌದು ಮರೆತೇಬಿಟ್ಟಿದ್ದೆ! ಗೌರಿ,ಗಣೇಶ ಹಬ್ಬದ ಆಚರಣೆ ಹೇಗಿತ್ತು? “ನಿಮಗೆಲ್ಲ ತಡವಾದ ಗೌರಿ,ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು”.



ಗೌರಿ, ಗಣೇಶ ಹಬ್ಬದ ಅಂಗವಾಗಿಯೇ ಒಂದು ಲೇಖನ ಬರೆದಿರುವೆನು. ಸ್ವಲ್ಪ ದೀರ್ಘಲೇಖನವಾದ್ದರಿಂದ ಈ ಲೇಖನವನ್ನು ಕಂತುಗಳಲ್ಲಿ ಪ್ರಕಟಿಸುತ್ತಾ ಹೋಗುತ್ತೇನೆ.ಬಿಡುವು ಸಿಕ್ಕಾಗಲೆಲ್ಲ ಓದಿ.ಪ್ರತಿಯೊಂದು ಕಂತು ನಿಮಗೆ ಮೆಚ್ಚಿಗೆಯಾಗುವುದೆಂದು ನನ್ನ ಭಾವನೆ. ಇಷ್ಟವಾದರೆ ಮಾಮೂಲಿಯಂತೆ ನಿಮ್ಮ ಅಭಿಪ್ರಾಯವನ್ನು ತಿಳಿಸಲು ಮರೆಯದಿರಿ - ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಅಂಕಣ-೧


ಆಗುಂಬೆಯ ಹತ್ತಿರ ಹೆಬ್ರಿಯಲ್ಲಿ ಶಿಕ್ಷಕನಾಗಿರುವ ನನ್ನ ಬಾಲ್ಯ ಸ್ನೇಹಿತ ಸತಿ ಫೋನ್ ಮಾಡಿದಾಗಲೆಲ್ಲ, "ಓ ಮಾರಾಯ ಅಲ್ಲೇನ್ ಬರಿ ಕಾಂಕ್ರೀಟ್ ಕಟ್ಟಡಗಳನ್ನು ನೋಡಿಕೊಂಡು ಇರ್ತಿ, ಒಮ್ಮೆ ಇಲ್ಲಿಗೆ ಬಂದೋಗಪ್ಪ, ಪ್ರಕೃತಿ ಮಾತೆಯೇ ಇಲ್ಲಿ ಹಚ್ಚಹಸಿರಿನ ಮನೆ ಮಾಡಿಕೊಂಡವ್ಳೆ. ಸ್ವರ್ಗಕ್ಕೂ ಇಲ್ಲಿಗೂ ಬರಿ ಮೂರೇ ಗೇಣು ಕಣೋ" ಎಂದು ಘಟ್ಟದ ಕೆಳಗಿನ ಜನರ ಭಾಷೆಯ ಶೈಲಿಯಲ್ಲಿ ಹೇಳ್ತಾ ಇದ್ದ. ಹಲವಾರು ಸಾರಿ ಅಲ್ಲಿಗೆ ಹೋಗಿ ಬರುವ ಯೋಜನೆಯನ್ನು ನಾನು ಹಾಕಿಕೊಂಡರೂ ಅದು ವ್ಯರ್ಥಪ್ರಯತ್ನವಾಗುತ್ತಿತ್ತೇ ಹೊರತು ಎಂದೂ ಕೈಗೂಡಿರಲಿಲ್ಲ!

(ಅಂಕಣ ೨ ಮುಗಿದ ನಂತರ ಮತ್ತೆ ಅಂಕಣ ೧ ಶುರುವಾಗುವುದು)

ಅಂಕಣ ೨


ಯಾರು ಈ ಸತಿ? ಸರಿಸರಿ ಮೊದ್ಲು ಸತಿ ಬಗ್ಗೆ ಸ್ವಲ್ಪ ಹೇಳ್‌ಬಿಡ್ತಿನಿ, ಇವ ನನ್ನ ಬಾಲ್ಯದ ಗೆಳೆಯ. ಹತ್ತನೇಯ ತರಗತಿಯವರೆಗೂ ನಾನು, ಅವ ಒಟ್ಟೊಟ್ಟಿಗೆ ಬೆಳೆದವರು. ಪಾಠ, ಆಟ, ಊಟ ಎಲ್ಲದರಲ್ಲೂ ಎಷ್ಟು ಜಗಳವಾಡುತ್ತಿದ್ದೇವೋ ಅದಕ್ಕಿಂತ ಒಂದುಪಾಲು ಹೆಚ್ಚಾಗಿಯೇ ಆತ್ಮೀಯತೆಯಿಂದ ಇರ್ತಾಇದ್ವಿ.

ಚಿಕ್ಕಂದಿನಲ್ಲಿ ನಮ್ಮ ಗ್ಯಾಂಗಿನ ಸದಸ್ಯರುಗಳು ಮಾಡುತ್ತಿದ್ದ ಅನೇಕಾಕ ತುಂಟಾಟ ಕೆಲಸಗಳಲ್ಲಿ ನನ್ನಷ್ಟೇ ಸಹಭಾಗಿಯಾಗಿರುತ್ತಿದ್ದ. ಮುಗ್ಧತನ ಹಾಗೂ ಪೆದ್ಧತನಗಳ ಮಿಶ್ರಣದ ಫಲವಾಗಿ ನಾವು ಮಾಡುತ್ತಿದ್ದ ಕೀಟ್ಲೆ ಕೆಲ್ಸಗಳು ಒಂದಾ-ಎರಡಾ? ನಾನು ಸಹ ಆಗ ಈಗಿನಷ್ಟೂ ನಾಚಿಕೆ, ಹಿಂಜರಿಕೆ ಸ್ವಭಾವದ ಹುಡುಗನಾಗಿರಲಿಲ್ಲ, ಎಲ್ಲದರಲ್ಲೂ ಬಹಳ ಚಲಾಕು ಇದ್ದೆ! “ಬಾಲ್ಯದಲ್ಲಿ ಹಾಗೆ ಮಾಡಿದ್ದ ಹಲವಾರು ಘಟನೆಗಳು ಈಗಲೂ ಸಹ ಅಚ್ಚಳಿಯದ ನೆನಪಿನ ಚಿತ್ರಣಗಳಾಗಿ ನನ್ನ ಮನದಲ್ಲಿ ಹಾಗೆಯೇ ಉಳಿದಿವೆ!” ಸತಿಯ ಬಗ್ಗೆ ಹೇಳಲುಹೋಗಿ ಇಷ್ಟೆಲ್ಲ ಹೇಳಬೇಕಾಯಿತು ಈಗ "ಮೂಲಕಥೆ"ಗೆ ಬರೋಣ...

(ಅಂಕಣ ೧ ರ ಮುಂದುವರಿಕೆ..)


ಆದರೆ ಕಳೆದ ವಾರ ಇದ್ದಕ್ಕಿದ್ದ ಹಾಗೆ ಎಲ್ಲಾದರೂ ಹೋಗಿಬರಬೇಕೆಂಬ ಆಲೋಚನೆಯು ಮನಸ್ಸಲ್ಲಿ ಮೂಡಿತು. ನನ್ನ ಕವನ, ಲೇಖನಗಳನ್ನು ಬರೆವ ಹವ್ಯಾಸಕ್ಕೆ ತಾತ್ಕಾಲಿಕ ತಿಲಾಂಜಲಿಯನ್ನಿಟ್ಟು, ಶುಕ್ರವಾರ ಮಧ್ಯಾಹ್ನ ಹನ್ನೆರಡಕ್ಕೆ ಮೆಜೆಸ್ಟಿಕ್ ತಲುಪಿ, ಅಲ್ಲಿಂದ ಹೆಬ್ರಿಯತ್ತ ಹೋಗುವ ರಾಜಹಂಸ ಬಸ್ಸನ್ನೇರಿ ಹೇಗೋ ಮಟ್ಟಮಧ್ಯದಲ್ಲೇ ಸೀಟುದಕ್ಕಿಸಿಕೊಂಡು ಕುಳಿತೆ.

ಹಾಸನ ಮಾರ್ಗವಾಗಿ ಇದೇ ಮೊದಲ ಸಲ ಪ್ರಯಾಣಿಸುತ್ತಿದ್ದೆನಾದ್ದರಿಂದ ಅಲ್ಲಿನ ಪ್ರಕೃತಿ ಸೊಬಗು “ಹಾಗೆ ಇರಬಹುದು..ಹೀಗೆ ಇರಬಹುದು” ಎಂದು ಮನದಲ್ಲಿ ಕಲ್ಪಿಸುತ್ತಾ, ಪಕ್ಕದಲ್ಲಿ ಯಾರು? ಕುಳಿತಿರುವರು ಎಂದು ನೋಡುವ ಗೋಜಿಗೆ ಹೋಗದೆ ಹಾಗೆಯೇ ನಿದ್ರೆಹೋದೆ. ಹಾಸನ ಹತ್ತಿರ, ಹತ್ತಿರವಾಗುತ್ತಿದ್ದಂತೆ ನನಗೆ ಎಚ್ಚರವಾಯಿತು. ಕಣ್ತೆರದು ನೋಡಿದಾಗ ನನ್ನ ಪಕ್ಕದಲ್ಲಿ ಕುಳಿತಿರುವರು 60ರ ಆಸುಪಾಸಿನ ಹಿರಿಯ ನಾಗರೀಕರು ಎಂದು ಆಗಲೇ ನನಗರಿವಾದುದ್ದು. ಅವರು ಪರಿಚಯ ಮಾಡಿಕೊಳ್ಳದಿದ್ದರೆ ಏನೆಂದುಕೊಂಡಾರು? ಎಂದು ಯೋಚಿಸಿ, ನಾನೇ ಅವರ ಹೆಸರು, ಊರು ಕೇಳುತ್ತಾ ಔಪಚಾರಿಕವಾಗಿ ಒಂದೆರಡು ಮಾತನಾಡಿದೆ. ಅಷ್ಷರಲ್ಲಿ ಹಾಸನದ ಬಸ್ಸ್ ನಿಲ್ದಾಣ ಬಂದೇಬಿಟ್ಟಿತು. ಸರಿ ನಮ್ಮೂರು ಬಂತಪ್ಪ ಮತ್ತೆಸಿಗೋಣ ಎಂದು ಹೇಳಿ ಆ ಹಿರಿಯರು ಬಸ್ಸಿನಿಂದ ಇಳಿದುಹೋದರು.

ಅವರು ಹೋದ ಕ್ಷಣಾರ್ಧದಲ್ಲೇ ಭಾರಿಗಾತ್ರದ ಲಗೇಜ್‌ಗಳನ್ನೊತ್ತು ಮೂರುಜನ ತರುಣಿಯರ ಗುಂಪೊಂದು ಬಸ್ಸಿನ ಒಳಗಡೆ ಪ್ರವೇಶಿಸಿ ಖಾಲಿ ಇರುವ ಸೀಟುಗಳನ್ನು ಹುಡುಕತೊಡಗಿದರು. ಬಸ್ಸು ಭಾಗಶ: ಭರ್ತಿಯಾಗಿದ್ದರಿಂದ ಅವರಿಗೆ ಸೀಟು ಸಿಗುವುದು ದುಸ್ತರವಾಗಿತ್ತು. ನನ್ನ ಪಕ್ಕದಲ್ಲಿ ಇದ್ದ ಒಂದು ಸೀಟ್ ಬಿಟ್ಟರೆ ತೀರಾ ಹಿಂದಗಡೆಯಲ್ಲಿ ಒಂದೆರಡು ಸೀಟ್‌ಗಳು ಖಾಲಿ ಇದ್ದವೂ. ಆ ಗುಂಪಿನ ಇಬ್ಬರು ತರುಣಿಯರು ಮತ್ತೊಬ್ಬಳನ್ನು ಕುರಿತು ನೀನು ಇಲ್ಲೇ ಕುಳಿತುಕೋ ನಾವಿಬ್ಬರು ಹಿಂದಗಡೆ ಹೋಗಿ ಕುಳಿತುಕೊಳ್ಳುತ್ತೇವೆ ಎಂದೇಳಿ ಹಿಂದೆ ಖಾಲಿ ಇದ್ದ ಸೀಟುಗಳತ್ತ ಹೆಜ್ಜೆ ಹಾಕಿದರು.

ಇದನ್ನೆಲ್ಲಾ ಮೂಕಪ್ರೇಕ್ಷಕನಾಗಿ ನೋಡುತ್ತಾ ಇದ್ದ ನಾನು ಪಕ್ಕಕ್ಕೆ ಸರಿದು “ಆ ಹುಡುಗಿ” ಕುಳಿತುಕೊಳ್ಳಲು ಅನುವು ಮಾಡಿಕೊಟ್ಟೆ. ಲಗೇಜ್ ಕ್ಯಾಬಿನ್‌ನಲ್ಲಿ ತನ್ನ ಲಗೇಜ್ ಇಟ್ಟು ನನ್ನ ಪಕ್ಕದಲ್ಲಿ ಕುಳಿತಳು ಆ ಹುಡುಗಿ. ನಾನಾಗಿಯೇ ಮೇಲೆಬಿದ್ದು ಮಾತನಾಡಿಸುವ ಗೋಜಿಗೆ ಹೋಗದೆ ನನ್ನ ಪಾಡಿಗೆ ನಾನು ಇರಲು ನಿಶ್ಚಯಿಸಿದೆ. ಅಷ್ಷರಲ್ಲಿ ಬಸ್ಸುಹೊರಡುವ ವೇಳೆಯಾಗುತ್ತಿತ್ತು. ಕಿಟಕಿಯ ಸಮೀಪ ಬಂದ ಸೀಬೆಕಾಯಿ ಮಾರುವವನಲ್ಲಿ ನಾಲ್ಕು ಸೀಬೆಕಾಯಿ ಖರೀದಿಸಿ, ಹತ್ತು ರೂಪಾಯಿಯನ್ನು ಅವನ ಕೈಯಲ್ಲಿಡುತ್ತಾ,..ಚಿಲ್ಲರೆ ನೀನೇ ಇಟ್ಟುಕೊಳ್ಳಪ್ಪ ಎಂದೇಳಿದೆ. “ಪಕ್ಕದಲ್ಲಿ ಹುಡುಗಿ ಕುಳಿತ್ತಿದ್ದರಿಂದಲೋ ಏನೋ? ನನ್ನಲ್ಲಿ ಧಾರಾಳತನ ತಾನಾಗಿಯೇ ಮನೆ ಮಾಡಿತ್ತು!” ಬಸ್ಸು ಹಾಸನದ ನಿಲ್ದಾಣವನ್ನು ಬಿಟ್ಟು ಹೊರಟ್ಟಿತು.

(ಮುಂದುವರೆಯುವುದು...)

ಮಂಗಳವಾರ, ಸೆಪ್ಟೆಂಬರ್ 2, 2008

ಗೌರಿ ಗಣೇಶ ಹಬ್ಬಕ್ಕೊಂದು ಕವನ


ಹಬ್ಬ..ಹಬ್ಬ..ಗೌರಿ ಗಣೇಶ ಹಬ್ಬ ಬಂತು ನಾಡಲಿ|
ಹಬ್ಬಕ್ಕೆಂದು ಅಮ್ಮ ಮಾಡಿದ ಬಿಸಿಬಿಸಿ ಚಕ್ಕುಲಿ
ತಿನ್ನುತಾ ನಾ ಏರಿದ ಮನೆಯಂಗಳದ ಜಗುಲಿ|

ಪೂಜೆಗೆ ಮುಂಚಿತವಾಗಿ ಚಕ್ಕುಲಿ ನಾ ತಿನ್ನವುದಾ
ಮರೆಯಲಿ ಓರೆಗಣ್ಣಲಿ ಕಂಡ ದಪ್ಪನೆಯ ಮೂಗಿಲಿ|
ದೂರನು ಹೇಳಲು ಶರವೇಗದಲಿ ಓಡಿತು ಗಣಪನ ಬಳಿ|

ಗಜಾನನನಲಿ ನನ್ನ ಬಗ್ಗೆ ಚಾಡಿ ಹೇಳಿತು ವಿಧವಿಧ ಪರಿ|
ಚಾಡಿ ಮಾತನು ಕೇಳಿ ಮೈಯೆಲ್ಲ ಹಸಿ ಕೋಪ ಮೂಡಿ|
ಗೌಡರ ಮನೆಯಲಿ ಕಡುಬನು ತಿನ್ನುವುದಾ ಅರ್ಧಕ್ಕೆ ಬಿಟ್ಟೆದ್ದ ಗಣಪ|
ಮೂಗಿಲಿಯೊಡನೆ ಪ್ರತ್ಯಕ್ಷನಾದ ನಮ್ಮ ಮನೆಯಂಗಳದ ಸಮೀಪ|

ಆದರೆ ತಿನ್ನುತ್ತಾ ತಿನ್ನುತ್ತಾ ಬಿಸಿಬಿಸಿ ಚಕ್ಕುಲಿ
ನಾ ಆಗಲೇ ಸೆರೆಯಾಗಿದ್ದೆ ನಿದ್ರಾದೇವಿಯ ಮಡಿಲಲಿ
ಇನ್ನೂ ವಿನಾಯಕ ಬಂದ ಅರಿವು ನನಗೆಲ್ಲಿ?

ಇದನ್ನು ಕಂಡು ಕೋಪದಲಿ ಮೂಗಿಲಿ ಏರಿತು ಜಗುಲಿ
ನನ್ನ ಮೈ ಮೇಲೆ ಓಡಾಡುತಾ ಇಟ್ಟಿತು ಕಚಗುಳಿ
ನಂತರದಲಿ ಕೈಯಲಿ ಇದ್ದ ಚಕ್ಕುಲಿ ಕಿತ್ತೊಯ್ದಿತು ಮೂಗಿಲಿ
ನಿಂತಿತು ಗಣಪನ ಸನಿಹದಲಿ! ನಾ ತಪ್ಪಿನ ಅರಿವಿನಲಿ
ಗಣಪನ ಕ್ಷಮೆ ಕೇಳಲು| ಜಗುಲಿಯಿಂದ ಎದ್ದೇಳಲು
ಇದ್ದೆನು ಹಾಸಿಗೆಯಲಿ| ಸೊಗಸಾದ ಕನಸ ಕಂಡಿದ್ದೆನು ನಿದ್ರೆಯಲಿ!

- ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಬುಧವಾರ, ಆಗಸ್ಟ್ 20, 2008

ಕಾಲಕ್ಕೆ ಸರಿಯಾಗಿ ಬಾರದ ಮಳೆರಾಯನ ಕುರಿತೊಂದು ಕವನ

ಕಾಲಕ್ಕೆ ಸರಿಯಾಗಿ ಬಾರದ ಮಳೆರಾಯನ ಕುರಿತೊಂದು ಕವನ
ಮಳೆ..ಮಳೆ..ಮಳೆ..ಮಳೆ|
ಆಹಾ! ಮುಂಗಾರು ಮಳೆ|
ತಡವಾದರೂ ಕೊನೆಗೂ
ಬಂತೀ ಮುಂಗಾರು ಮಳೆ|

ಹೀಗೆ ಬಂದ ಹನಿಹನಿ ಮಳೆ|
ಅಲ್ಲಲ್ಲಿ ತೊಳೆದು ಹಾಕುತಿಹುದು
ಬರದ ಸೋಂಕಿನ ಕೊಳೆ|
ಅಗೋ ನೋಡಿ ಎಲ್ಲೆಲ್ಲೂ
ಮಿಣುಕುತಿಹುದು ಹೊಸ ಕಳೆ|

ಇದ ಕಂಡು ನಾಚುತಲಿರುವುದು
“ಮೇಘ ಪ್ರಿಯೆ” ಇಳೆ|
ಜೀವ ಸಂಕುಲಗಳ ಎದೆಯಲಿ
ಹರಿದಿಹುದು ನವೋಲ್ಲಾಸದ ಹೊಳೆ|

ಇಳೆಯ ಹೃದಯದೊಡಲ ಸೇರಿದ ಮಳೆ
ಹೇಳುತಿಹುದು, ಓ ಇಳೆ ನನ್ನ ಕ್ಷಮಿಸಿ ಬಿಡೆ|
ನಾ ಬಿಟ್ಟು ನನ್ನ ಮುಗಿಲ ಕರಿದಾದ ಮನೆ
ನಿನ್ನ ಸೇರುವುದರಲಿ ಸ್ವಲ್ಪ ತಡ ಆಯಿತು ಕಣೆ|
ನಿನ್ನ ಮನುಜ ಸುತರೇ ಇದಕ್ಕೆ ಕಾರಣ ಕಣೆ|
ನಾ ಬರುವ ಹಾದಿಯಲಿ ಮಾಲಿನ್ಯದ ಮುಳ್ಳ
ಅಡ್ಡಲಾಗಿ ಎಸೆಯುತಲಿವವರು ಅವರೇ ಕಣೆ|
ಆ ನಿನ್ನ ಮನುಜ ಸುತರು ಎಂದು ತಿಳಿಯುವರು
ಪರಿಸರವನು ಅರಿತು ಬಾಳುವ ಭವ್ಯ ಕಲೆ ?

(ಪದಗಳ ಅರ್ಥ
ಇಳೆ= ಭೂಮಿ, ಧರೆ, ಸುತರು= ಮಕ್ಕಳು, ಮಗ)

-ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಮಳೆಯೆಂಬ “ಮುಗಿಲ ಮಾಯೆ”



ಮಳೆಯೆಂಬ “ಮುಗಿಲ ಮಾಯೆ” ಬಾರದೆ
ಬಂದ ಬರಗಾಲಕ್ಕೆ ಕಂಗಾಲಾದ ರೈತಾಪಿ ಜನರನ್ನು ಗುರಿಯಾಗಿ ಇಟ್ಟುಕೊಂಡು ಬರೆದ ಕವನ.

(ಈಗ ವರಗಾಲ ಆದರೆ ಕೆಲ ದಿನಗಳ ಹಿಂದೆ ಬರಿ ಬರಗಾಲ) - ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಹಾವೇರಿಯ ಕಾವೇರಿದ ಕಪ್ಪು ನೆಲದಲಿ|
ಮಳೆಗಾಗಿ ಕಾದು ಬಿರಿದ ಆ ಹೊಲದಲಿ|
ಬಾರದ ನಿದ್ರೆಯನು ತಾ ಬರಿಸಿಕೊಂಡು|
ಕಂಡ ಹೊಂಗನಸನು ತಾ ಕರಗಿಸಿಕೊಂಡು|
ಆ ಕಡೆ ಮುಖ ಮಾಡಿ ಮಲಗಿರುವ ಮಾನವ|
ಈ ಕಡೆ ಮುಖ ಮಾಡಿ ಮಲಗಿಸಿರುವ ತನ್ನ ಶ್ವಾನವ|

ಯೋಚನೆ, ಆಲೋಚನೆಯಲಿ ಮಾನವ, ಶ್ವಾನವ
ಇಬ್ಬರದೂ ಬಿಡಿಸಲಾಗದ ಅವಿನಾಭಾವ ಸಂಬಂಧ!

ನೆಡೆಸಲು ಬದುಕಿನ ತೇರು| ಕಾಣಲೊಂದು ಕಿರು ಸೂರು
ಮಳೆಯನೇ ನಂಬಿ ಉಳುಮೆ ಮಾಡಿ ಸೋತಿಹನು ಅವ|

ತನ್ನೊಡಯನ ಸ್ಥಿತಿಯನು ಕಂಡು| ಅವಗೆ ನೆರವಾಗಲೆಂದು
ಬಾರದ ಮಳೆಯನು ಕೂಗಿ ಕರೆದು ಸೋತಿಹುದು ಅದು|

ಹೀಗೆ ಹೊಲಕ್ಕೆರಡು ಜೀವಗಳಂತೆ ಅದೇಷ್ಟೊ ಜೀವಗಳನು
ಪ್ರಕೃತಿಯು ಮಾತೆಯೂ ಕೈಬಿಟ್ಟಿರುವುದೊ? ಯಾರು ಬಲ್ಲರು?

(ಪದಗಳ ಅರ್ಥ, ಅವಿನಾಭಾವ= ಒಂದೇ ರೀತಿಯ, ಶ್ವಾನ = ನಾಯಿ)

ಭಾನುವಾರ, ಆಗಸ್ಟ್ 3, 2008

ಸ್ನೇಹ..


(ಸ್ನೇಹಿತರ ದಿನದ ಶುಭ ಸೂಚಕವಾಗಿ ಬರೆದ ಕವನ )

ಸ್ನೇಹ.. ಸ್ನೇಹ.. ಸ್ನೇಹ.. ಸ್ನೇಹ│
ಬಾಳ ಪಯಣದ ಗೀತೆಗೆ ಅದುವೇ ಗೇಯ│
ಗೆಳೆಯ ಗೆಳತಿಯರ ಅಕ್ಕರೆಯ ಗೆಳೆತನ│
ಬಾಳಲಿ ನಾವ್ ಪಡೆಕೊಂಡ ನಿಜ ಸಿರಿತನ│

ಜಗದಣ್ಣ ಕನಸಲಿ ಬಂದು ಹೇಳಿದ ಒಂದು ನೀತಿ│
ನಲ್ಲ ನಲ್ಲೆಯರಲಿ ಇರುವುದು ಆಗಸದೆತ್ತರದ ಪ್ರೀತಿ
ಎಂದಾದರೊಂದು ದಿನ ಅದು ಮುಗಿಯುವ ಭೀತಿ│
ಸ್ನೇಹದಲ್ಲಿ ಇರುವುದು ಎಂದೂ ತೀರದ ಪ್ರೀತಿ│

ಬಂಧು ಬಳಗ ಬಾಂಧವ್ಯವೊಂದು ಅವಿಭಾಜ್ಯ ಬಂಧನ│
ಅದರ ನಡುವೆ ಗೆಳೆತನವೊಂದು ನೆಮ್ಮದಿಯ ಸ್ಪಂದನ│
-ನಿಮ್ಮ ಸುನಿಲ್ ಮಲ್ಲೇನಹಳ್ಳಿ

(ಪದಗಳ ಅರ್ಥ
ಗೇಯ =ಸಂಗೀತ , ಅವಿಭಾಜ್ಯ= ಬಿಡಿಸಲಾಗದ , ಜಗದಣ್ಣ= ಶಿವ, ಈಶ್ವರ)

ಶನಿವಾರ, ಆಗಸ್ಟ್ 2, 2008

ಬಂಗಾರದ ಮನುಷ್ಯನಿಗೆ ಹೃದಯಸ್ಫರ್ಶಿ ನಮನ


ಶಿವಪ್ಪನಿಗೆ ಕಣ್ಣನ್ನು ಕೊಟ್ಟು│
ಶಬ್ಧವೇದಿಯ ಜಾಡನ್ನು ಹಿಡಿದು│
ದೂರದ ಬೆಟ್ಟ ಏರಿ ಗಿರಿ ಕನ್ಯೆ ರೂಪಕ್ಕೆ ಕರಗಿ│
ಗುರಿ ಮರೆತು ದಾರಿ ತಪ್ಪಿದ ಮಗನಾಗಿ│
ಪ್ರಾಯಶ್ಚಿತ್ತಕೊಸ್ಕರ ಮನದಲ್ಲಿ ಅನುರಾಗ ಅರಳಿಸಿಕೊಂಡು│
ಅದೇ ಕಣ್ಣಲ್ಲಿ ಸಾಧನೆಗೈದು│ ತ್ರಿಮೂರ್ತಿಗಳ ವರ ಪಡೆದು│
ಭಲೇ ಹುಚ್ಚನಾಗಿ ಜಾಣ್ಮೆಯನ್ನು ತೋರಿ│
ಬಹದ್ದೂರ್ ಗಂಡಾಗಿ ಶೌರ್ಯವನ್ನು ಬೀರಿ│

ಆಕಸ್ಮಿಕವಾಗಿ ಕಸ್ತೂರಿ ನಿವಾಸಕ್ಕೆ ಬಂದು│
ಜೀವನ ಚೈತ್ರದಲ್ಲಿ ಮಿಂದು│
ಒಡಹುಟ್ಟಿದವರೊಡಗೂಡಿ│
ಶ್ರಾವಣ ಬಂತೆಂದು ಹಾಡಿ│
ಭಾಗ್ಯದ ಬಾಗಿಲಲ್ಲಿ│
ಹೊಸ ಬೆಳಕನು ಚೆಲ್ಲಿ│

ನೀತಿ ಇಲ್ಲದ ಸಿರಿವಂತರ ಸಂಪತ್ತಿಗೆ ಸವಾಲ್ ಹಾಕಿ│
ಮೇಯರ್ ಮುತ್ತಣ್ಣನಾಗಿ│
ಭಾಗ್ಯದ ಲಕ್ಷ್ಮಿ ಬಾರಮ್ಮನಿಗೆ ಮನಸೋತು│
ಎರಡು ಕನಸನು ಹೊತ್ತು│
ಚೂರಿ ಚಿಕ್ಕಣ್ಣನ ವೇಷ ಧರಿಸಿ│
ಅಪರೇಷನ್ ಡೈಮಂಡ್ ರಾಕೆಟ್‌ನಲ್ಲಿ ಬಾನಂಗಳಕ್ಕೆ ಹೋಗಿ│
ಧ್ರುವತಾರೆಯನು ಹೊತ್ತು ತಂದು ಸಂಭ್ರಮಿಸಿ│
ಗಂಧದ ಗುಡಿಯಲಿ ಇರಿಸಿ│
ಕಾಮನಬಿಲ್ಲಿನಲ್ಲಿ ಬೆಸೆದು ಉಡುಗೊರೆಯಾನ್ನಾಗಿಸಿ│
ಪ್ರೇಮದಕಾಣಿಕೆಯಾಗಿ ನೀಡಿ│
ಯಾವ ಕವಿಯು ಬರೆಯಲಾರದ ಗೀತೆಯನ್ನು ಹಾಡಿ│


ಕನ್ನಡಿಗರ ಹೃದಯವನ್ನು ಸದ್ದಿಲ್ಲದೆ ಕದ್ದು ತನ್ನ ಅಭಿನಯನದಲ್ಲಿ ಇರಿಸಿ│
ಬಂಗಾರದ ಮನುಷ್ಯಯೆಂಬ ಹೆಸರನಿಟ್ಟ ತಾಯಿಗೆ ತಕ್ಕಮಗನಾಗಿ ಬಾಳಿ│
ಒಲವನ್ನು ಸಾಕ್ಷಾತ್ಕಾರಿಸಿಕೊಂಡು ಹೋದರು ನಮ್ಮಣ್ಣ ರಾಜಣ್ಣ│
ನೆಡೆ ನುಡಿ ನಟನೆಯಲ್ಲಿ ಎಂದೆದಿಂಗೂ ಅವರಿಗೆ ಅವರೇ ಸಾಟಿ│
ವಿಧಿಕರೆಗೆ ಓಗೊಟ್ಟು ಅವರು ಹೋದಾಗ ಕಂಬನಿ ಧಾರೆ ಹರಿಸಿದ ಜೀವಗಳವು ಕೋಟಿ│
ರಚನೆ, ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಶುಕ್ರವಾರ, ಆಗಸ್ಟ್ 1, 2008

ಬಾಳ ಗೆಳತಿಗೊಂದು ಕವನ (ಕಲ್ಪನೆಯಲಿ ಅರಳಿದ ಕಾವ್ಯ)

ಆ ಹುಣ್ಣಿಮೆ ರಾತ್ರಿಯದು
ಬಲು ಸೊಗಸು│

ಅಂದು ನಾ ಕಂಡ ನನ್ನ ಅವಳ
ಬಾಂಧವ್ಯದ ಮಧುರ ಸವಿಗನಸು│

ತನುಮನದಲ್ಲಿ ತಂದಿಹುದು
ಬಗೆ ಬಗೆ ರೂಪದ ಹುಮ್ಮಸ್ಸು│

ಇಂದಾಗಿಹುದು ಅವಳ ಚೆಲುವಿನ ವರ್ಣನೆಯ
ಕವನವಾಗಿ ಬರೆಯುವ ಮನಸು│

ಓ ಭಾವವೇ ನೀ ಅದಕ್ಕೆ ಸಹಕರಿಸು│
ನಿನ್ನೊಡಲಿನಿನ್ದ ಸುಲಲಿತ ಪದಗಳನು ಹೂಂಕರಿಸು│
- ಸುನಿಲ್ ಮಲ್ಲೇನಹಳ್ಳಿ
(ಮುಂದಿನ ಕವನದಲಿ ಅವಳ ಚೆಲುವಿನ ವರ್ಣನೆ)

ಸೋಮವಾರ, ಜುಲೈ 28, 2008

ಪಪ್ಪ (ಅಪ್ಪ)

ಪುಟಾಣಿ ಮಕ್ಕಳಿಗಾಗಿ ಅರ್ಪಣೆ

ಪಪ್ಪ ಪಪ್ಪ
ಮುದ್ದಿನ ಪಪ್ಪ
ಕೇಳಿದ್ದು ಕೊಡಿಸೋ ಪಪ್ಪ│
ಒಳ್ಳೇದು ಕಲಿಸೋ ಪಪ್ಪ│
ಕೆಟ್ಟದ್ದು ಬಿಡಿಸೋ ಪಪ್ಪ│

ಪಪ್ಪ ಪಪ್ಪ
ಇಂದೇಕೆ ನನ್ನಲಿ ನಿನಗೆ ಕೋಪ?│
ನೀ ಕುಡಿಯೋದನು ಅಮ್ಮನಿಗೆ
ನಾ ಹೇಳಿದ್ದೇ ತಪ್ಪಾ?│
ಪಪ್ಪ ಪಪ್ಪ
ನೀ ಹೀಗೆ ಮುನಿಸಿಕೊಂಡರೆ
ನನ್ನ ಹೋಮ್ ವರ್ಕ್ ಮಾಡೋರ್ಯಾರಪ್ಪ?

ಪಪ್ಪ ಪಪ್ಪ
ನನ್ನ ಮಾತನು ಕೇಳಪ್ಪ│
ನೀ ಕುಡಿಯೋದ್ ಬಿಟ್ರೆ
ನನ್ ಹೋಮ್ ವರ್ಕ್ ನಾನೇ
ಮಾಡಿಕೊಳ್ಳುವೆನಪ್ಪ│
ಮತ್ತೆ ಅಮ್ಮನ ಮುಖದಲಿ
ನಗುವಿನ ಅಲೆಯನು ನೀ ಕಾಣುವೆಯಪ್ಪ│
ರಚನೆ: ಸುನಿಲ್ ಮಲ್ಲೇನಹಳ್ಳಿ

ನಾ ಓದಿದ ಕಾದಂಬರಿ “ಮರಳಿ ಮಣ್ಣಿಗೆ”


ಶಿವರಾಮ ಕಾರಂತರ “ಮರಳಿ ಮಣ್ಣಿಗೆ” ಕಾದಂಬರಿಯು ಕನ್ನಡ ಸಾರಸ್ವತ ಲೋಕದಲ್ಲಿ ಮೆಚ್ಚುಗೆ ಪಡೆದ ಸಾಹಿತ್ಯದಾಕರಗಳಲೊಂದು. ಈ ಕಾದಂಬರಿಯಲ್ಲಿ ಕಾರಂತರು ಕರಾವಳಿ ತೀರ ಪ್ರದೇಶದ ಐತಾಳ ಕುಟುಂಬವೊಂದರ ತಲೆಮಾರನ್ನು ಕೇಂದ್ರಬಿಂದುವಾಗಿರಿಸಿಕೊಂಡು ಕಥೆಯನ್ನು ತುಂಬಾ ಸ್ವಾರಸ್ಯವಾಗಿ ಎಣೆದಿದ್ದಾರೆ. ಕಾದಂಬರಿಯನ್ನು ಓದುತ್ತಾ ಹೋದರೆ ಕರಾವಳಿಯ ತೀರ ಪ್ರದೇಶಗಳಿಗೆ ನಮ್ಮನ್ನು ನಮಗರಿವಿಲ್ಲದೆ ಕರೆದೊಯ್ಯತ್ತದೆ.

ಕೋದಂಡರಾಮ ಐತಾಳರ ಮಗ ರಾಮ ಐತಾಳರು ನಾರಾಯಣ ಮಯ್ಯನವರ ಮಗಳು ಪಾರ್ವತಿಯನ್ನು ವಿವಾಹವಾಗುವುದರಿಂದ ಕಥೆಯು ಪ್ರಾರಂಭವಾಗುತ್ತದೆ. ಇವರೀರ್ವರ ಮದುವೆಯಾದ ಕಲವೇ ವರುಷಗಳಲ್ಲಿ ಇಬ್ಬರು ಬೀಗರು ಅಂದರೆ ಕೋದಂಡರಾಮ ಐತಾಳರು ಹಾಗೂ ನಾರಾಯಣ ಮಯ್ಯನವರು ಕಾಲವಶವಾಗಿಬಿಡುತ್ತಾರೆ. ಮನೆಯ ಜವಾಬ್ದಾರಿ ಹಾಗೂ ಅಪ್ಪನಿಂದ ಬಳುವಳಿಯಾಗಿ ಬಂದ ಪೌರೋಹಿತ್ಯದ ಕೆಲಸವು ರಾಮ ಐತಾಳರ ಹೆಗಲ ಮೇಲೆ ಬೀಳುತ್ತದೆ. ರಾಮ ಐತಾಳರದು ಸ್ವಲ್ಪ ಆಸೆಬುರಕ ಸ್ವಭಾವ, ಪೌರೋಹಿತ್ಯದಲ್ಲಿ ತಮಗೆ ಸಿಕ್ಕ ಯಾವ ವಸ್ತುವನ್ನೂ ಬಿಡದೆ ಎಲ್ಲವನ್ನೂ ಮನೆಗೆ ಬಾಚಿಕೊಂಡು ಬರುತ್ತಿರುತ್ತಾರೆ. ಚಿಕ್ಕವಯಸಿನಲ್ಲೇ ತನ್ನ ಗಂಡನನ್ನು ಕಳೆದಕೊಂಡು ರಾಮ ಐತಾಳರ ತಂಗಿ ಸರಸ್ವತಿ ತನ್ನ ತೌವರು ಮನೆಯಲ್ಲೇ ಇರುತ್ತಾಳೆ. ರಾಮ ಐತಾಳರು ಹಾಗೂ ಪಾರ್ವತಿ ದಂಪತಿಗಳಿಗೆ ಮಕ್ಕಳಾಗದ ಕಾರಣ ರಾಮ ಐತಾಳರು ಸತ್ಯಭಾಮೆ ಎನ್ನುವ ಕನ್ಯೆಯನ್ನು ವಿವಾಹವಾಗಿತ್ತಾರೆ. ಈ ದಂಪತಿಗಳಿಗೆ ಗಂಡು ಮಗುವೊಂದು ಜನಿಸುತ್ತದೆ. ಆ ಮಗುವಿಗೆ ಲಕ್ಷ್ಮಿ ನಾರಾಯಣ (ಲಚ್ಚ) ಎಂಬ ಹೆಸರನ್ನು ಇಡುತ್ತಾರೆ. ಆ ಲಚ್ಚನೇ ಮರಳಿ ಮಣ್ಣಿಗೆ ಕಾದಂಬರಿಯ ಪ್ರಮುಖ ಪಾತ್ರಧಾರಿ. ಅವನು ಐತಾಳರ ಕುಟುಂಬಕ್ಕೆ ಕೀರುತಿ ತರುತ್ತಾನೋ ಇಲ್ಲ ಅಪಕೀರುತಿಯನ್ನು ತರುತ್ತಾನೋ ಅಲ್ಲದೆ ತನ್ನ ಪತ್ನಿಯಾಗಿ ಬರುವ ಸುಸಂಸ್ಕೃತ ಸಂಪ್ರಾದಯದ ಮನೆತನದ ಹುಡುಗಿ ನಾಗವೇಣಿಯನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂಬುದೇ ಈ ಕಾದಂಬರಿಯ ಪ್ರಮುಖ ತಿರುಳು.

ಕಾರಂತರು ಕಥೆಯನ್ನು ಎಳೆ ಎಳೆಯಾಗಿ ಬರೆದಿದ್ದಾರೆ. ಈ ಕಥೆಯಲ್ಲಿ ಕಡಲತೀರದ ಜನರ ಆಚಾರ-ವಿಚಾರವಿದೆ, ಕನ್ನಡ ಸಾಹಿತ್ಯಲೋಕಕ್ಕೆ ಉಡುಗೊರೆಯಾಗಿ ಹರಿದು ಬಂದಿರುವ ಹೊಸಹೊಸ ನುಡಿಮುತ್ತುಗಳಿವೆ, ಹಾಗೇನೇ ಪ್ರಾಯದ ಯುವಕರ ಕೆಡುಕಿನ ವಿಚಾರವೂ ಇದೆ, ಇವೆಲ್ಲಕ್ಕಿಂತ ಮಿಗಿಲಾಗಿ ಹೆಂಗಳೆಯರು ಹೊರಗಿನ ಕೆಲಸಕಾರ್‍ಯಗಳಲ್ಲಿ ಗಂಡಸರಿಗಿಂತ ಕಡಿಮೆ ಇಲ್ಲ ಎಂಬುದನ್ನು ತಿಳಿಸುವ ಮಾರ್ಮಿಕ ಸಂದೇಶವಿದೆ ಹಾಗೂ ಅವರು ಸಂಸಾರದಲ್ಲಿ ಅನುಭವಿಸುವ ಒಣ ನೋವುಗಳ ವ್ಯಾಕ್ಯಾನವಿದೆ. ನಿಜ ಹೇಳಬೇಕೆಂದರೆ ನಲವಿಗಿಂತ ನೋವೇ ಕಾರಂತರ ಈ ಕಥೆಯಲ್ಲಿದೆ. ಕೊನೆಯಲ್ಲಿ ನಗುವಿನ ಆಶಾಕಿರಣವೊಂದನ್ನು ಹುಟ್ಟಿಸುವುದರಲ್ಲಿ ಕಾರಂತರು ಯಶಸ್ವಿಯಾಗಿದ್ದಾರೆ.
- ಸುನಿಲ್ ಮಲ್ಲೇನಹಳ್ಳಿ

ಬುಧವಾರ, ಜುಲೈ 23, 2008

ಓ ಕನ್ನಡ ಬಾಲೆ│

ಓ ಕನ್ನಡ ಬಾಲೆ│

ಈ ಬ್ಲಾಗಿನ ಹಾಳೆ
ಹರಿಸುತಿಹುದು
ನಿನ್ ವರ್ಣನೆಯ ಸಾಲೆ│

ಅನ್ನದಿರು ನಾಳೆ
ಇಂದೇ ನೀ ಬಂದು ನೋಡೆ
ಈ ಬ್ಲಾಗಿನ ಹಾಳೆ│

ಇಷ್ಟವಾದರೆ ನಿನ್ನ ಗೆಳತಿಗೂ ಫಾರ್ವರ್ಡ್ ಮಾಡೆ│

ಓ ನನ್ನ ಕನ್ನಡ ಗೆಳೆಯ│

ಓ ನನ್ನ ಕನ್ನಡ ಗೆಳೆಯ│
ಒಮ್ಮೆ ನೀ ಬಾರೆಯಾ.. ಬಂದು ನೋಡೆಯಾ
ಈ ಸುಂದರ ಬ್ಲಾಗಿನ ಹಾಳೆಯ│

ಹಾಗೆಯೇ ಬಂದಾಗಲೆಲ್ಲಾ│
ನವ್ಯ ಕವನಗಳ ಸಿಹಿಯ.. ನೀ ಸವಿದು ಹೋಗೆಯಾ│

ಸವಿದ ನವ್ಯ ಕವನಗಳ ಸಿಹಿಯು ಹಿತವೆನ್ನಿಸಿದರೆ
ಈ ಬ್ಲಾಗಿನ ಲಿಂಕನು ನಿನ್ನ ಗೆಳೆಯರಿಗೂ ಫಾರ್ವರ್ಡ್ ಮಾಡೆಯಾ│

ನನ್ನೊಲವಿನ ಬಿಂದು

ರಸಿಕತೆ ಇಲ್ಲದ ಅರಸಿಕ ನೀ ಎಂದು
ಛೇಡಿಸಿದಳು ನನ್ನೊಲವಿನ ಬಿಂದು│

ನನ್ನೆದೆಯ ಛಲವು ಮನನೊಂದು
ರಚಿಸಿತು ಸುಮಧುರ ಗೀತೆಯೊಂದು│

ಓದಿದವಳ ಮನವು ಮಿಡಿಯಿತು, ಎ ಬಿಂದು
ನಿತ್ಯ ನಿನ್ನ ಕನಸಲಿ ಬಳಿ ಸಾರುವ
ರಸಿಕರ ರಸಿಕ ಇವನೇ ಎಂದು!

ಸೋಮವಾರ, ಜುಲೈ 21, 2008

ಗೆಳತಿಗಾಗಿ ಒಂದು ಕವನ


ಓ ಗೆಳತಿ..
ನಿತ್ಯ ನಿನಗಾಗಿ ಕವನ ಬರೆಯಲು
ನನ್ನಾಣೆಗೂ ನಾ ಕವಿಯಲ್ಲ│
ಕಾವ್ಯ, ಕವನದ ಒಗಟು│
ನನಗೆ ತಿಳಿಯದ ಗುಟ್ಟು│

ಅದರೆ ಏನು ಮಾಡಲಿ?
ನಿನ್ನೊಮ್ಮೆ ನೆನೆದ ಕ್ಷಣದಲಿ│
ಮನದ ಭಾವಗಳ ಸರಮಾಲೆ
ಪದಗಳ ರೂಪದಲಿ ಉದ್ಭವಿಸಿ│
ನರನಾಡಿಗಳಲಿ ಸಾಲು ಸಾಲಾಗಿ ಹರಿದು│
ಉಸಿರಿನ ಕಣಗಳಲಿ ಪ್ರಾಸಬದ್ಧವಾಗಿ ಬೆರೆತು│

ಎದೆಯ ಗುಡಿಯ ಒಳಗೆ ಒಂದು ಹೊಸ ಮಿಡಿತ│
ಒಲವಿನ ಪುಟದ ಹಾಳೆಯ ಮೇಲೆ ಒಂದು ಹೊಸ ಕವನ│
ಒಮ್ಮಿಂದೊಮ್ಮೆಲೆ ಉದಯಿಸುವುದು!

ಹೃದಯದಂಗಳದ ಅಣೆಕಟ್ಟೆಯಲಿ
ಮುಗಿಲೆತ್ತರದ ಪ್ರೀತಿ ತುಂಬಿ ತುಳುಕುತ್ತಿದ್ದರೂ│
ಆ ನನ್ನ ಹೊಸ ಕವನಕ್ಕೆ│ಆ ನನ್ನ ಹೊಸ ಮಿಡಿತಕ್ಕೆ│
ಸ್ನೇಹದ ಬಣ್ಣ ಹಚ್ಚಿ│ಪ್ರೇಮದ ಕಾಲುವೆಯನು ಮುಚ್ಚಿ│
ಓದಲು ಗೆಳತಿ ನಿನ್ನ ಕೈಯಂಚಲಿ ಇಟ್ಟಿರುವೆನು!

ಶುಕ್ರವಾರ, ಜುಲೈ 18, 2008

ಓ ನಗು..

ಓ ನಗು│
ಗಾಳಿಯ ಹಾಗೆ
ಎಲ್ಲೆಲ್ಲೂ ನೀ ಸಿಗು│

ಧನಿಕ, ತಿರುಕ
ಶ್ರಮಿಕ, ಭಾವುಕರೆನ್ನದೇ
ಎಲ್ಲರ ಪಾಲಲಿ ಸಮವಾಗಿ ನೀ ಇರು│
ಪ್ರತಿಯೊಬ್ಬರ ಮುಖದಲ್ಲೂ ಸದಾ ನೀ ಉಕ್ಕಿ ಬರು│

ನೀ ಇರಲೂ ದ್ವೇಷಭಾವ ತೋರಲ್ಲ ಯಾರು│
ಆಗ ಜಗ ಆಗುವುದು ನಿತ್ಯ ನೆಮ್ಮದಿಯ ಸೂರು│
- ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಗುರುವಾರ, ಜುಲೈ 17, 2008

ಬಾಲ್ಯದ ಒಂದು ಘಟನೆ

ನಾನ್ ಆವಾಗ 3ನೇ ತರಗತಿಯಲ್ಲಿ ಓದುತಿದ್ದೆ, ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಬಂದಿತ್ತು ರಜೆ ಬಂತೆಂದರೆ ಸಂತಸದ ಮನೆಗೆ ಏಣಿ ಹಾಕುತ್ತಿದ್ದಂತ ಕಾಲವದು ಬೆಳಗ್ಗೆ ಮನೆ ಬಿಟ್ಟರೆ ಸಂಜೆಯೋ ಇಲ್ಲ ರಾತ್ರಿನೋ ಮತ್ತೆ ಮನೆ ಸೇರುತ್ತಿದ್ದು.
ಕ್ರಿಕೆಟ್ ಆಡೋದು, ಚಿನ್ನಿದಾಂಡು ಆಡೋದು, ಈಜಾಡೋದು, ಮಾವಿನಕಾಯಿ, ಗೋಡುಂಬಿ ಹಣ್ಣುಗಳನ್ನು ಅವರಿವರ ಮರಗಳಲ್ಲಿ ಕಿತ್ತು ತಿನ್ನೊದು, ಇವೇ ರಜೆಯಲ್ಲಿ ನಮ್ಮ ದಿನನಿತ್ಯದ ಕೆಲಸಗಳಾಗಿರುತ್ತಿದ್ದವು. ವಿಶೇಷವಾಗಿ ಊರಿನಲ್ಲಿ ಏನೇ ತರಲೆ ಕೆಲಸಗಳು ನೆಡೆದಿದ್ದರೆ ಅದರ ಹಿಂದೆ ನಮ್ಮ ಗ್ಯಾಂಗಿನ ಸದಸ್ಯರುಗಳ ಕೈವಾಡವಿರುತಿತ್ತು.
ನಮ್ಮೂರು ಮೊದಲೇ ಹೇಳಿಕೇಳಿ ಚಿಕ್ಕದಾದ ಊರು ಏನಾದರೂ ಘಟನೆಗಳು ನೆಡೆದರೆ ಬಹುಬೇಗನೆ ವಿಷಯ ಊರತುಂಬೆಲ್ಲಾ ಹರಡುತ್ತಿತ್ತು. ಅಂತಹ ಅನೇಕ ಘನಂಧಾರಿ ಕೆಲಸಗಳಿಗೆ ನಾವುಗಳು ಕಾರಣವಾಗಿದ್ದೇವು. ಓಮ್ಮೆ ಕ್ರಿಕೆಟ್ ಆಡಿ ದಣಿದು ಬಿರುಬಿಸಿಲ ದಾಹ ನೀಗಿಸಿಕೊಳ್ಳಲು ನಮ್ಮ ಗ್ಯಾಂಗ್ ಲೀಡ್ರು ಪರಮೇಶಿ ಜೊತೆ ಸೇರಿ ಅಪಾಯಕಾರಿ ಯೋಜನೆಯೊಂದನ್ನು ಎಲ್ಲರೂ ನಿರ್ಧರಿಸಿ ಅದರಂತೆ ನಮ್ಮೂರ ರೇವೇಗೌಡ್ರ ತೆಂಗಿನತೋಟದಲ್ಲಿ ಒಬ್ಬರಿಗೆ ತಲಾ ಎರಡೆರಡರಂತೆ ಹನ್ನೆರಡು ಎಳನೀರನ್ನು ನಮ್ಮತ್ತೆ ಮಗ ಮಂಜ ಮರ ಏರಿ ಕಿತ್ತುಹಾಕಿದ. ಆಸೆ ದುರಾಸೆಯಾಗಿ ತೆಂಗಿನಕಾಯಿಯನ್ನು ಸಹ ಮರದಿಂದ ಕಿತ್ತುಹಾಕಲು ನಾವುಗಳು ಅವನಿಗೆ ಆದೇಶ ಕೊಟ್ಟೆವು. ಕಂಠಪೂರ್ತಿ ಎಳನೀರನ್ನು ಕುಡಿದು, ತೆಂಗಿನಕಾಯಿಯನ್ನು ಚನ್ನಬಸವಯ್ಯನವರ ಅಂಗಡಿಗೆ ಹಾಕಲು ಹೊರಟೆವು ಆಗಲೇ ನಮ್ಮ ಈ ಸತ್ಕಾರ್ಯದ ವಿಷಯ ಊರಲ್ಲೆಲ್ಲಾ ಹರಡಿತ್ತು!
ವಿಷಯ ಸೋರಿಕೆ ಮಾಡಿದವನು ನಮ್ಮ ಗ್ಯಾಂಗಿನ ಸದಸ್ಯ ಸತಿ. ಒಂದು ಎಳನೀರನ್ನು ಅವನಿಗೆ ಕಡಿಮೆ ಕೊಟ್ಟಿದ್ದಕ್ಕೆ ಸಿಡಿದ್ದೆದ್ದು ನಮಗೆ ಮುಳುವಾಗಿದ್ದನು. ಬೇರೆಯವರ ತೋಟದಲ್ಲಿ ತೆಂಗಿನ ಕಾಯಿಯನ್ನು ಮರದಿಂದ ಕೆಡವುದು ಇರಲಿ, ಬಿದ್ದ ಒಂದು ಕಾಯಿಯನ್ನು ತೆಗೆದು ಕೊಂಡರೆ ಐವತ್ತು ರೂಪಾಯಿ ದಂಡ ತೆರಬೇಕಾದ ನಿಯಮ ನಮ್ಮೂರಲ್ಲಿ ಇತ್ತು. ಇನ್ನೂ ನಾವುಗಳು ಮಾಡಿದ್ದು ಮಹಾಪರಾಧವೇ ಆಗಿತ್ತು. ಆದರೆ ಅರಿವಿಲ್ಲದ ಹುಡುಗರು ಎಂಬ ಶ್ರೀರಕ್ಷೆ ನಮ್ಮನ್ನು ಕಾಪಾಡಿತ್ತು. ನಿಯಮದ ಪ್ರಕಾರ ನಮಗೆ ಶಿಕ್ಷೆ ಕೊಟ್ಟಿದ್ದರೆ ಎರಡುದಿನ ಕತ್ತಲೆ ಕೋಣೆಯಲ್ಲಿ ನಮ್ಮನ್ನು ಕೂಡಿಹಾಕಬೇಕಿತ್ತು!

ಕಾಲಚಕ್ರ ಉರುಳಿದೆ. ಅಂದು ನಮ್ಮೂರಿನ ಜನರೆದರು ಖಳನಾಯಕರಾಗಿದ್ದ ನಮ್ಮ ಗುಂಪಿನ ಗೆಳೆಯರೆಲ್ಲ ಇಂದು ನಾಡಿನ ಸತ್ ಪ್ರಜೆಗಳಾಗಿದ್ದಾರೆ. ನನ್ನ ಬಾಲ್ಯ ಸ್ನೇಹಿತ ಸತಿ ಸದ್ಯ ಹೆಬ್ರಿ (ಆಗುಂಬೆ ಹತ್ತಿರ) ಎಂಬಲ್ಲಿ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಹೈಸ್ಕೂಲ್ ಅಧ್ಯಾಪಕರ ಆಯ್ಕೆಗೆ ಕರ್ನಾಟಕ ಸರಕಾರ ನೆಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಇಡೀ ಜಿಲ್ಲೆಗೇ ಎರಡನೇ ಸ್ಥಾನ ಪಡೆದ ಹಿರಿಮೆ ಈತನದು. ನಮ್ಮ ಗ್ಯಾಂಗ್ ಲೀಡ್ರು ಪರಮೇಶಿ ಮನೆಯಲ್ಲಿ ಆರ್ಥಿಕ ವ್ಯವಸ್ಥೆ ಸರಿಯಾಗಿಲ್ಲದ್ದರಿಂದ ಕಷ್ಟಪಟ್ಟು ದುಡಿದು ತಂಗಿಯನ್ನು ಅಧ್ಯಾಪಕಿಯನ್ನಾಗಿಸಿ, ತನ್ನ ಸ್ವಂತ ಖರ್ಚಿನಿಂದ ಅವಳ ಮದುವೆ ಮಾಡಿದಂತಹ ಸಾಧಕ ಅವನು. ಇನ್ನೂ ನಮ್ಮತ್ತೆ ಮಗ ಮಂಜ ಇವನಿಗೆ ಸರಿಯಾದ ಮಾರ್ಗದರ್ಶನ ಮತ್ತು ಆರ್ಥಿಕ ವ್ಯವಸ್ಥೆ ಇದ್ದಿದ್ದರೆ ಇಂಡಿಯಾ ಕ್ರಿಕೆಟ್ ಟೀಮಿನಲ್ಲಿ ಅಲ್ಲದಿದ್ದರೂ ರಣಜಿ ಮಟ್ಟದಲ್ಲಿನ ಕ್ರಿಕೆಟ್ ತಂಡದ ಖಾಯಂ ಸದಸ್ಯನಾಗುವ ಪ್ರತಿಭೆ ಈತನದು. ಅಷ್ಟು ಸೊಗಸಾಗಿ ಕ್ರಿಕೆಟ್ ಆಡುತ್ತಾನೆ. ಅವನ ಆಟದ ಶೈಲಿಯನೊಮ್ಮೆ ನೋಡುವಾಸೆ ಇದ್ದರೆ ನನ್ನ ಜೊತೆ ಒಂದುಸಲ ನಮ್ಮೂರಿಗೆ ಹೋಗುವ ಬನ್ನಿ. - ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಶುಕ್ರವಾರ, ಜುಲೈ 11, 2008

ಆ ದೈವ ಕೊಟ್ಟ ಈ ಬದುಕು..

ಆ ದೈವ ಕೊಟ್ಟ ಈ ಬದುಕು..

ಒಬ್ಬನ ಪಾಲಿಗೆ ಆಗಿಹುದು ಥಳುಕು..

ಮತ್ತೊಬ್ಬನ ಪಾಲಿಗೆ ಆಗಿಹುದು ಹುಳುಕು..

ಇನ್ನೊಬ್ಬನ ಪಾಲಿಗೆ ಆಗಿಹುದು ಬಳುಕು..

ಮಗದೊಬ್ಬನ ಪಾಲಿಗೆ ಆಗಿಹುದು ಮುರುಕು..

ಥಳುಕೋ..ಹುಳುಕೋ..ಬಳುಕೋ..ಮುರುಕೋ..

ಅದೃಷ್ಟದಾಟ ಮುಗಿದಾಗ ಬರುವುದು ಉಸಿರಿಗೆ ತೊಡಕು..

ಕೊನೆಯಲಿ ಈ ಬದಕು ಆಗುಹುದು ಯಮನ ಪಾಲಿನ ಸರುಕು!!

ಕವನದ ಸಾರಾಂಶ..

ಆ ದೈವನು ಕೊಟ್ಟು ನಮ್ಮಗಳ ಬದುಕು ನಮಗೆ ತಿಳಿದಿರುವ ಹಾಗೆ ಒಬ್ಬನು ಹುಟ್ಟುವಾಗಲೇ ಸಿರಿವಂತನಾಗಿ ಹುಟ್ಟುತ್ತಾನೆ. ಅಂಥವರ ಪಾಲಿಗೆ ಬದುಕೆಂಬುದು ಬಹಳ ಹಿತವಾಗಿರುತ್ತದೆ. ಆದರೆ ಇನ್ನೂ ಕೆಲವರು ಜನಿಸುವಾಗಲೇ ಬಹಳ ಬಡತನದ ಕುಟುಂಬದಲ್ಲಿ ಜನಿಸುತ್ತಾರೆ ಅಂಥವರ ಪಾಲಿಗೆ ಬದುಕೆಂಬುದು ಹುಳುಕಿನ ತರಹ ಇರುತ್ತದೆ. ಮತ್ತೆ ಕೆಲವರ ಪಾಲಿಗೆ ಬದುಕು ಬಳುಕು ಆಗಿರುತ್ತದೆ. ಅಂದರೆ ಅವರು ಜೀವನದಲ್ಲಿ ಏನು ಬಯಿಸುತ್ತಾರೋ ಅದು ಅವರಿಗೆ ಒಲಿದು ಬರುತ್ತದೆ. ಅವರು ಬಹಳ ಅದೃಷ್ಟವನ್ತರಾಗಿರುತ್ತಾರೆ. ಮತ್ತೆ ಇನ್ನೂ ಕೆಲವರ ಪಾಲಿಗೆ ಬದುಕು ಮುರುಕು ಆಗಿರುತ್ತದೆ. ಅಂದರೆ ಅವರು ಜೀವನದಲ್ಲಿ ಏನ್ನೆಲ್ಲಾ ಕಷ್ಟಪಟ್ಟರು ಅದೃಷ್ಟ ಅವರ ಜೊತೆಯಲ್ಲಿ ಇರುವುದಿಲ್ಲ.

ಆದರೆ ಬದುಕಲ್ಲಿ ಯಾರು ಏನೇ ಆಗಿರಲಿ ಕೊನೆಗೆ ಕಾಲ ಬಂದಾಗ ಎಲ್ಲರೂ ಒಬ್ಬರ ಮೇಲೆ ಒಬ್ಬರಾದಂತೆ ಭಗವಂತನ ಸನಿಹಕ್ಕೆ ಹೋಗಲೇ ಬೇಕು.

-ಸುನಿಲ್ ಮಲ್ಲೇನಹಳ್ಳಿ

ಮಂಗಳವಾರ, ಜುಲೈ 8, 2008

ಕ್ಷಣಿಕ, ಸಾರ್ಥಕಗಳ ನಡುವಿನ ಅಂತರ


ನಾನು, ನನ್ನದು ಎಂಬುವನ ಬದುಕೇ ಕ್ಷಣಿಕ..

ಅವನು, ಅವನದು ಎಂಬುವನ ಬದುಕೇ ಸಾರ್ಥಕ..

ತನುಮನ ತುಂಬಿ ಕೊಟ್ಟದ್ಧೆ ಉಳಿಕೆ..

ಅದುವೇ ಅವನಾರ್ಶಿವಾದದ ಗಳಿಕೆ..

ಯಾರಿಗೂ ಕಾಣಿಸದೆ ಅಲ್ಲಿ ಇಲ್ಲಿ ಬಚ್ಚಿಟ್ಟದ್ಧೆ ಸೋರಿಕೆ..

ಅದುವೇ ಭಗವಂತನ ಒಲುಮೆಯನು ದೂರಾಗಿಸುವ ಮರಿಚಿಕೆ..
( ಸೂಚನೆ:ಈ ಕವನದಲ್ಲಿ ಅವನು ಅಂದರೆ "ದೇವರು" )

-ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಸೋಮವಾರ, ಜೂನ್ 30, 2008

ಗೆಳೆಯ ಇದು ನನ್ನ ಬ್ಲಾಗು¦

ಓ ಗೆಳೆಯ, ಇದು ನನ್ನ ಬ್ಲಾಗು¦

ಟೈಮ್ ಸಿಕ್ಕಾಗಲೆಲ್ಲ ನೀ ಇಲ್ಲಿಗೆ ಬಂದು ಹೋಗು¦

ನಿತ್ಯ ನಿನ್ನ ಆಗಮನವೇ ನನಗಾನಂದ¦

ನೀ ಬರೆವ ಅಭಿಪ್ರಾಯವೇ ನನಗ ಹೊಸ ನುಡಿಬಂಧ¦