ಮಂಗಳವಾರ, ಮಾರ್ಚ್ 10, 2009

ನಮ್ಮ ಅಂತರಂಗ, ನಮ್ಮ ಬಹಿರಂಗ ಆಗಿರಲಿ ನಮ್ಮ ಕನ್ನಡ ಚಲನಚಿತ್ರರಂಗ!


ಎಲ್ಲರಿಗೂ ನಮಸ್ಕಾರ, ಮೊನ್ನೆ ತಾನೇ ನಮ್ಮ ಕನ್ನಡ ಚಲಚಿತ್ರರಂಗದ ಅಮೃತ ಮಹೋತ್ಸವದ ಆಚರಣೆ ಸಂಭ್ರಮ, ಸಡಗರ ಹಾಗೂ ವೈಭವತೆಯಿಂದ ನೆರೆವೆರಿದ್ದು, ಕನ್ನಡಿಗರಿಗೆಲ್ಲ ಒಂದು ಬಗೆಯ ಸಂತಸವನ್ನು ತಂದಿದೆ. ಆ ಮಹೋತ್ಸವದ ಸುಂದರ ಚಿತ್ರಣ ನಮ್ಮ ಕಣ್ಣಲ್ಲಿ ಇನ್ನೂ ಮಾಸದೇ ಇರುವಾಗ. ಕನ್ನಡ ಚಿತ್ರರಂಗವು ಸಾಗಿ ಬಂದ ದಾರಿಯನ್ನು ತಿಳಿಸುವ ಸಲುವಾಗಿ ಒಂದು ಸಂಕ್ಷಿಪ್ತ ಲೇಖನವನ್ನು ಬರೆದಿರುವೆನು. ಬಿಡುವಿನ ವೇಳೆಯಲ್ಲಿ ಓದಿರಿ.

ನಮ್ಮ ಕನ್ನಡ ಚಲನಚಿತ್ರರಂಗದ ಅಮೃತ ಮಹೋತ್ಸವನ್ನು (ಎಪ್ಪತ್ತೈದನೇಯ ವರುಷದ) ಬಹಳ ಸಂಭ್ರಮ, ಸಡಗರ ಹಾಗೂ ವಿಜೃಂಭಣೆಯಿಂದ ಕನ್ನಡ ಚಲನಚಿತ್ರರಂಗದ ಕುಟುಂಬ ವರ್ಗದವರು ಆಚರಣೆ ಮಾಡಿದ್ದನ್ನು ನಾವುಗಳು ಪೇಪರಗಳಲ್ಲಿ, ಟಿವಿಗಳಲ್ಲಿ ನೋಡಿದ್ದೇವೆ (ಕೆಲವರು ಕಣ್ಣಾರೆ!). ಈವೊಂದು ಅಮೃತ ಮಹೋತ್ಸವನ್ನು ಆಚರಣೆ ಮಾಡುವರೆಗೂ ನಮ್ಮ ಕನ್ನಡ ಚಿತ್ರರಂಗ ಬೆಳೆದದ್ದು ಕನ್ನಡಿಗರಾದ ನಮಗೆಲ್ಲ ನಿಜಕ್ಕೂ ಬಹಳ ಸಂತೋಷ ಮತ್ತು ಹೆಮ್ಮೆಯ ಪಡುವಂಥ ಸಂಗತಿ . ಯಾಕೆಂದರೆ ನಾವುಗಳು ಕಂಡಹಾಗೆಯೇ ನಮ್ಮ ಕನ್ನಡ ಚಿತ್ರರಂಗವು ಎದುರಿಸಿದ ಸಂಕಷ್ಟಗಳು, ಎಳು ಬೀಳುಗಳು ಒಂದಾ? ಎರಡಾ? ಬಹಳಷ್ಟು. ನೆರೆಹೊರೆ ಭಾಷೆಯ ಚಲನಚಿತ್ರ ಉದ್ಯಮೆಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದದ್ದು, ಒಮ್ಮೊಮ್ಮೆ ಸಾಲು ಸಾಲು ಕಳಪೆ ಚಿತ್ರಗಳನ್ನು ಕೊಟ್ಟಿದ್ದು, ಉತ್ತಮ ಚಿತ್ರಗಳನ್ನು ಕೊಡಲು ಸಾಕಷ್ಟು ಸಲ ವಿಫಲರಾಗುತ್ತಿದ್ದದ್ದು, ಬಂಡವಾಳದ ಅಭಾವ. ಇವುಗಳೆಲ್ಲವುಗಳ ನಡುವೆಯೂ "ಸತಿಸುಲೋಚನದಿಂದ ಪ್ರಾರಂಭವಾದ ಕನ್ನಡ ಚಲನಚಿತ್ರರಂಗದ ಓಟವು ನಾನಾ ವಿಧದ ತೊಂದರೆ, ತೊಡಕುಗಳನ್ನುಎದುರಿಸುತ್ತಾ, ಎಳುತ್ತಾ-ಬೀಳುತ್ತಾ ಎಪ್ಪತ್ತೈದನೇಯ ವರುಷದ ಮೈಲುಗಲ್ಲನ್ನು ತಲುಪಿದೆ. ನಮಗೆ ತಿಳಿದಿರೋ ಹಾಗೆಯೇ ಇಂದು ಬೃಹದಾಕಾರವಾಗಿ ಬೆಳೆದಿರೋ ಈ ನಮ್ಮ ಕನ್ನಡ ಚಿತ್ರರಂಗದ ಉದ್ಯಮದ ಏಳಿಗೆಗೆ ಶ್ರಮಿಸಿರುವರು ನೂರಾರು ಮಂದಿ. ಆ ಮಹನೀಯರುಗಳ ಕನ್ನಡ ತಾಯಿಯ ಬಗೆಗಿನ ಅಪಾರ ಅಭಿಮಾನ, ನಿಸ್ವಾರ್ಥ ಕಲಾಸೇವೆ ಕನ್ನಡ ಚಿತ್ರರಂಗವನ್ನು ಇಂದು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಕನ್ನಡ ಚಲನಚಿತ್ರರಂಗಕ್ಕೆ ನಾಟಕ ಮಂಡಳಿಗಳು ಹಾಗೂ ರಂಗಭೂಮಿಗಳ ಕೊಡುಗೆಯನ್ನು ಸಹ ಎಂದೂ ಮರೆಯುವಾಗಿಲ್ಲ".

೧೯೫೪ರಲ್ಲಿ ಕನ್ನಡ ಚಿತ್ರರಂಗವು ೨೦ರ ಹರೆಯದ ಹೊಸ್ತಿಲಲ್ಲಿದ್ದಾಗ ಡಾ ರಾಜ್ ಕುಮಾರ್ ಅವರು ಬೇಡರ ಕಣ್ಣಪ್ಪ ಚಲನಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಲನಚಿತ್ರರಂಗಕ್ಕೆ ಕಾಲಿರಿಸಿದರು. ಅವರು ಕಾಲಿರಿಸಿದ ಸಮಯದ ಅಸುಪಾಸಿನ ಸಮಯದಲ್ಲಿ ಬಹು ಅಭಿರುಚಿಯುಳ್ಳ ನಿರ್ದೇಶಕರು, ಗೀತೆರಚನೆಕಾರರು, ಸಂಗೀತ ನಿರ್ದೇಶಕರು, ಚಿತ್ರಕಥೆಕಾರರು ಕನ್ನಡ ಚಲನಚಿತ್ರರಂಗಕ್ಕೆ ಬಂದರು. ಅವರೆಲ್ಲ ಕಾಲಿರಿಸಿದ ಗಳಿಗೆಯಲ್ಲಿ ನೋಡು, ನೋಡುತ್ತಿರುವಂತೆ ಕನ್ನಡ ಚಿತ್ರರಂಗದ ಸ್ವರೂಪವೇ ಬದಲಾಗಿ ಹೋಗಿತು. ರಾಜ್ ಅವರ ನಟನೆಯ ಜೊತೆಗೆ, ನಿರ್ದೇಶಕರುಗಳ, ಗೀತೆರಚನೆಕಾರರ, ಸಂಗೀತ ನಿರ್ದೇಶಕರುಗಳ ಕ್ರಿಯಾಶೀಲತೆ ಎಲ್ಲವೂ ಸರಿಯಾದ ರೀತಿಯಲ್ಲಿ ಬೆರೆತು ಉತ್ತಮೋತ್ತಮ ಗುಣಮಟ್ಟದ ಚಲನಚಿತ್ರಗಳು ತೆರೆಯ ಮೇಲೇರಿ ಬಂದವು.
೧೯೬೫ರಲ್ಲಿ ತೆರೆ ಕಂಡ ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ, ಕೆ ಸಿ ಏನ್ ನಿರ್ಮಾಣದ, ರಾಜ್ ಅಭಿನಯದ ಸತ್ಯ ಹರಿಶ್ಚಂದ್ರ , ಎಪ್ಪತ್ತರ ದಶಕದಲ್ಲಿ ತೆರೆಕಂಡ ಸಿದ್ದಲಿಂಗಯ್ಯನವರ ಬಂಗಾರದ ಮನುಷ್ಯ, ನಂತರದಲ್ಲಿ ಬಂದ ಕಸ್ತೂರಿ ನಿವಾಸ, ಎಮ್.ಪಿ ಶಂಕರ್ ಅವರ ಗಂಧದ ಗುಡಿ, ಭೂತಯ್ಯನ ಮಗ ಅಯ್ಯು, ರಾಮ ಲಕ್ಷ್ಮಣ. ತರಾಸು ಅವರ ಕಾದಂಬರಿಯಾದರಿತ, ಪುಟ್ಟಣ್ಣ ಕಣಗಾಲ್ ನಿರ್ದೇಶನದ , ವಿಷ್ಣುವರ್ದನ್ ಅಭಿನಯದ ನಾಗರ ಹಾವು, ನಾಗ್ ಸಹೋದರರು ಅಭಿನಯಿಸಿದ ನೋಡಿ ಸ್ವಾಮಿ ನಾವಿರೋದು ಹೀಗೆ ಇನ್ನೂ ಹತ್ತು ಹಲವಾರು ಸಿನಿಮಾಗಳು ಇಂದಿಗೂ ಸಹ ಕನ್ನಡ ಚಿತ್ರರಸಿಕರ ಮನದಾಳದಲ್ಲಿ ಹಸಿರು ನೆನಪಾಗಿ ಉಳಿದಿವೆ.ಈ ರೀತಿಯ ಚಲನಚಿತ್ರಗಳನ್ನು ಮತ್ತೆ ಮತ್ತೆ ನೋಡುವ ಆಸೆ ನಮ್ಮಗಳ ಮನದಲ್ಲಿ ತುಂಬಿಕೊಡಿರುವುದಂತು ಬಹಳ ಸಹಜದ ಸಂಗತಿ. ಪುಟ್ಟಣ್ಣ ಕಣಗಾಲ್, ಎಂ.ಪಿ. ಶಂಕರ್, ಶಂಕರ್ ನಾಗ್ ಅಂಥವರು ನಿರ್ದೇಶಕರಾಗಿ ಕನ್ನಡ ಚಲನಚಿತ್ರರಂಗದ ಏಳಿಗೆಗೆ ತಮ್ಮನ್ನು ತಾವು ಪರಿಪೂರ್ಣವಾಗಿ ಅರ್ಪಿಸಿಕೊಂಡಿದ್ದರು.

ಕನ್ನಡ ಚಲನಚಿತ್ರರಂಗದಲ್ಲಿ ನಟರುಗಳ ನಟನೆಗೆ ಸಮವಾಗಿ ಮೂಡಿ ಬಂದಂತಹ ಚಲನಚಿತ್ರ ಸಾಹಿತಿಗಳ ಮಧುರ, ಭಾವನಾತ್ಮಕ ಪದಗಳಿಂದ ಕೂಡಿದ ಅರ್ಥಪೂರ್ಣ ಸಾಹಿತ್ಯ ರಚನೆಯ ಕೊಡುಗೆಯನ್ನು ಯಾವ ಸನ್ನಿವೇಶದಲ್ಲೂ ಮರೆಯುವಾಗಿಲ್ಲ. ಉದಯಶಂಕರ್, ಆರ್ ಎನ್ ಜಯಗೋಪಾಲ್, ವಿಜಯ ನಾರಸಿಂಹ ಹಾಗೂ ಈಚಿನ ದಿನಗಳಲ್ಲಿ ಜಯಂತ್ ಕಾಯ್ಕಿಣಿ, ಕವಿರಾಜ್ ಮುಂತಾದ ಸಾಹಿತಿಗಳು ಅತ್ಯದ್ಭುತವಾದ ಗೀತೆ ರಚನೆ ಮಾಡಿರುವರು.. ಮಾಡುತ್ತಲೂ ಇರುವರು. ಅಲ್ಲದೇ ಪಿಬಿ ಶ್ರೀನಿವಾಸ್, ಎಸ್.ಪಿ.ಬಿ ಯವರು, ಎಸ್ ಜಾನಕಿ ಕನ್ನಡಿಗರಲ್ಲದಿದ್ದರು ಕನ್ನಡದ ಬಹುಪಾಲು ಚಲನಚಿತ್ರಗಳಲ್ಲಿ ಹಿನ್ನಲೆ ಗಾಯಕರಾಗಿ ಗೀತೆಗಳನ್ನು ತಮ್ಮ ತಮ್ಮ ಮಧುರ ಕಂಠದಿಂದ ಹಾಡಿ ಕನ್ನಡ ಚಿತ್ರಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಹಂಸಲೇಖ ಅವರು ಗೀತೆರಚನೆಕಾರರಾಗಿ, ಸಂಗೀತ ನಿರ್ದೇಶಕರಾಗಿ ಹೊಸ ಹೊಸ ಪ್ರಯೊಗ ಮಾಡಿ ಎಂಬತ್ತು, ತೊಂಬತ್ತರ ದಶಕದಲ್ಲಿ ಕನ್ನಡ ಚಲನಚಿತ್ರರಂಗದಲಿ ಹೊಸ ಅಲೆಯನ್ನೇ ಎಬ್ಬಿಸಿದ್ದರು.
ಇವರೆಲ್ಲರ ನೆನಪಿನ ಜೊತೆಗೆ ಕನ್ನಡದ ಚಾರ್ಲಿ ಚಾಪ್ಲಿನ್ ನರಸಿಂಹರಾಜು ಅವರನ್ನು ನೆನಪಿಸಿಕೊಳ್ಳದಿದ್ದರೆ ಯಾವ ನ್ಯಾಯಕ್ಕೆ ಸಾಕಾದೀತು! ಕನ್ನಡ ಚಿತ್ರರಂಗ ಕಂಡ ಅಪರೂಪದ ಹಾಸ್ಯ ಕಲಾವಿದ ಅವರು. ರಾಜ್ ಅವರ ಚಿತ್ರಗಳಲ್ಲಿ ನರಸಿಂಹರಾಜು ಅವರು ಇದ್ದರೇನೇ ಆ ಚಿತ್ರ ಹೆಚ್ಚು ತೂಕಯುತವಾಗಿರುತ್ತಿತ್ತು. ಎಷ್ಟೋ ಜನ ಪರಭಾಷಾ ಕಲಾವಿದರು ಕನ್ನಡದಲ್ಲಿ ತಮ್ಮ ವೃತ್ತಿ ಜೀವನದ ಮೊದಲ ಚಿತ್ರಗಳನ್ನು ಕನ್ನಡದಲ್ಲಿ ಮಾಡಿ ನಂತರ ಬಾಲಿವುಡ್ ನಲ್ಲೋ, ಕೊಲಿವುಡ್ ನಲ್ಲೋ ಮಿಂಚಿರುವರು..ಮಿಂಚುತ್ತಲೂ ಇರುವರು.

ನಮ್ಮ ಕನ್ನಡ ಸಿನಿಮಾ ಮಾಡುವವರಿಗೆ ಒಂದಷ್ಟು ಕಿವಿ ಮಾತುಗಳನ್ನು ಹೇಳಬೇಕಾದ ಪರಿಸ್ಥಿತಿ ಕನ್ನಡಿಗರದ್ದಾಗಿದೆ.
“ನಿರ್ದೇಶಕರೇ, ನಿರ್ಮಾಪಕರೇ ಈ ಬಣ್ಣದ ಲೋಕದ ಆಟದಲಿ
ಎಳು ಬೀಳು ಎಲ್ಲ ಮಾಮೂಲಿ ಆಗದಿರಲಿ ನಿಮ್ಮ ಸ್ವಂತಿಕೆಯು ಖಾಲಿ!
ಇನ್ನಾದರೂ, ಹೇಗದರೂ ಬಿಟ್ಟುಬಿಡಿ ರಿಮೇಕ್ ಗಳನ್ನು ಮಾಡುವ ಚಾಳಿ!
ಇಂದಾದರೂ ಎಲೆಲ್ಲೂ ಬೀಸುವನ್ತಾಗಲಿ ಕನ್ನಡ ತನದ ಸುಮಧುರ ಗಾಳಿ”
ಇಂದು ನಮ್ಮ ಕನ್ನಡ ಚಿತ್ರರಂಗ ಸಾವಿರಾರು ಜನ ಕಲಾವಿದರ ಬದುಕಿಗೆ ಆಸರೆಯಾಗಿದೆ. ಈ ಬಣ್ಣದಲೋಕ ಕೆಲವರ ಪಾಲಿಗೆ ವರದಾನವಾಗಿರುವುದುಂಟು, ಅವರು ಮಾಡಿದ್ದು, ಆಡಿದ್ದು, ಹಾಡಿದ್ದು ಎಲ್ಲವೂ ಚಿನ್ನವಾಗಿರುವುದುಂಟು.

ಇನ್ನ ಹಲವರ ಪಾಲಿಗೆ ಈ ಬಣ್ಣದಲೋಕವು ಸಂಕಷ್ಟಗಳ ಸರಮಾಲೆಯನ್ನೇ ತಂದಿರುವುದುಂಟು. ಹಲವಾರು ದಿನಗಳಿಂದ ನನಗೇಕೋ http://mleelavathi.com/ ಈ ಲಿಂಕ್ನಲ್ಲಿ ಇರುವವರ ಬಗ್ಗೆ ಏನದರೂ ಬರೆಯಬೇಕೆಂದು ಆಸೆಯಿತ್ತು. ಅಂದಹಾಗೆ ಅದರಲ್ಲಿರುವ ಭಾವಚಿತ್ರಗಳು ಯಾವ ಖ್ಯಾತನಟಿಯದು ಎಂದು ಈ ವೇಳೆಗಾಗಲೇ ನೀವು ಗುರುತ್ತಿಸಿರುತ್ತಿರಿ.

ಇವರ ಬಗ್ಗೆ ಬರೆಯಲು ಸಮಯ ಒದಗಿಬಂದದ್ದು ಮೊನ್ನೆ. ಎಂದಿನಂತೆ ಆ ದಿನದ ದಿನಪತ್ರಿಕೆಯ ಒಳಪುಟಗಳನ್ನು ತಿರುವಿ ಹಾಕುತ್ತಿರುವಾಗ. ಈ ನಮ್ಮ ಕನ್ನಡ ಚಿತ್ರರಂಗದ ಮಾಜಿ ಖ್ಯಾತನಟಿ ಚೆನ್ನೈನಲ್ಲಿದ್ದ ತಮ್ಮ ಆಸ್ತಿಯನ್ನು ಮಾರಿ ನೆಲಮಂಗಲದ ಸಮೀಪದಲ್ಲಿರುವ ಸೋಲ್ದೇವನಹಳ್ಳಿಯ ಬಳಿ ಬಡವರಿಗಾಗಿ ಆಸ್ಪತ್ರೆಯೊಂದನ್ನು ಕಟ್ಟಿರುವ ವಿಷಯವನ್ನು ಓದಿದೆ. ನಿಜಕ್ಕೂ ಬಹಳ ಖುಷಿಯಾಯಿತು. ಈ ಸೌಂದರ್ಯ ದೇವತೆ ೬೦-೭೦ರ ದಶಕದಲ್ಲಿ ಬಣ್ಣದ ಲೋಕದಿಂದ ಕನ್ನಡ ಚಿತ್ರರಸಿಕರ ಮನವನ್ನು ಗೆದ್ದಿದೇನೋ ನಿಜ. ಆದರೆ ಅವರ ನಿಜ ಜೀವನವೆಲ್ಲ ಎಷ್ಟು ಯಾತನಾಮಯವಾಗಿ ಸಾಗುತ್ತಿದೆಯೆಂಬುದು ನಮಗೆಲ್ಲ ತಿಳಿದಿದೆ. ಬದುಕಿನ ಉದಕ್ಕೂ ಬರಿ ಕಷ್ಟವನ್ನೇ ಅನುಭವಿಸುತ್ತಾ ಬಂದಿರುವ ಜೀವವದು. ಕೆಲದಿನಗಳ ಹಿಂದೆ ಕನ್ನಡದ ಮಾಸಿಕ ಪತ್ರಿಕೆ ಮಯೂರದಲ್ಲಿ ಲೀಲಾವತಿಯವರೊಂದಿಗೆ ನಡೆಸಿದ ಸಂದರ್ಶನದ ಭಾಗವನ್ನು ಓದಿದಾಗ ನನ್ನ ಮನ ಕಲಕಿತು. ಅವರ ಜೀವನದಲ್ಲಿ ಎದುರಿಸಿದ ಸಂಕಷ್ಟಗಳು, ನೂರೆಂಟು ಅಡಚಣೆಗಳು, ಚಲನಚಿತ್ರ ನಿರ್ಮಾಪಕರಿಂದ ಎಷ್ಟೋ ಸಲ ಸರಿಯಾದ ಸಂಭಾವನೆ ಸಿಗದೆ ಹೋಗಿ ಮೋಸವಾದುದ್ದು. ಇಷ್ಟೆಲ್ಲ ಆದರೂ ಈ ಮಹಾತಾಯಿ ಯಾವಾಗಲೂ ತಮ್ಮ ಕೈಯಲ್ಲಿ ಆಗುವ ಸಮಾಜ ಸೇವೆ ಹಾಗೂ ತಮ್ಮ ಕೈಯಲ್ಲಿ ಆಗುವ ಕನ್ನಡ ಚಲನಚಿತ್ರಗಳನ್ನು ನಿರ್ಮಿಸುತ್ತಾ, ಮಾಡುತ್ತಾ ಬಂದಿದ್ದಾರೆ. ಕಣ್ಣಿಲ್ಲದ ನಮ್ಮ ಸರಕಾರಕ್ಕೆ ಇವರೆಗೂ ಅವರ ಸಾಧನೆಯನ್ನು ಸರಿಯಾಗಿ ಗುರುತಿಸಲಾಗಿಲ್ಲ. ಅಂದಹಾಗೆ ಲಿಲಾವತಿಯವರು ಕನ್ನಡ ಚಲಚಿತ್ರದ ಅಮೃತ ಮಹೋತ್ಸವಕ್ಕೆ ಬಂದಿದ್ದನ್ನು ನಾನು ಕಾಣಲಿಲ್ಲ ನೀವೇನಾದರೂ ಕಂಡಿರಾ? ಮೇಲೆ ನಾನು ಹೇಳಿದ ಲೀಲಾವತಿಯವರ ವಿಚಾರ ಒಂದು ಉದಾಹರಣೆ ಇವರ ರೀತಿ ಸರಕಾರದಿಂದ, ಜನತೆಯಿಂದ ನಿರ್ಲಕ್ಶಕ್ಕೊಳಗಾದ ತೇರೆ ಮೇಲೆಯೇ ತೇಲಿವೊದ “ಕಲಾಜೀವಗಳು” ಬಹಳಷ್ಟು.
ಕನ್ನಡದ ಚಿತ್ರಗಳಲ್ಲಿ ಪೋಷಕ ನಟ ಪಾತ್ರ ಮಾಡುತ್ತಿದ್ದ ರಾಜಾನಂದ ನಿಮಗೆ ನೆನಪಿರಬೇಕಲ್ಲವೇ?? ಆ ಅವರು ತೀರ ಹೋದ ಮೇಲಂತು ಅವರ ಕುಟುಂಬ ತುಂಬಾ ದಯಾನೀಯ ಸ್ಥಿತಿಯಲ್ಲಿದೆ ಎನ್ನುವ ವಿಷಯ ನಿಮಗೆ ತಿಳಿದಿರುತ್ತದೇ ಅಲ್ಲವೇ??
ಕನ್ನಡಕ್ಕಾಗಿ, ಕನ್ನಡ ಚಿತ್ರರಂಗಕ್ಕಾಗಿ ದುಡಿದು, ಮಡಿದ ಜೀವಗಳ ಬಗ್ಗೆ ಸ್ವಲ್ಪವಾದರೂ ಬೆಲೆ, ಗೌರವ, ಅಭಿಮಾನ ಇಟ್ಟುಕೊಳ್ಳೋಣ.

ಕೊನೆಯದಾಗಿ.............
ಕನ್ನಡ ಜನತೆಯಲ್ಲಿ ನನ್ನದೊಂದು ವಿನಮ್ರ ವಿನಂತಿ..ಈಚಿನ ದಿನಗಳಲ್ಲಿ ಕನ್ನಡದಲ್ಲಿಯೂ ಸಹ ಒಳ್ಳೊಳ್ಳೆ ಸಾಹಿತ್ಯ, ಕಥೆ ಹಾಗು ದೃಶ್ಯಾವಳಿಗಳುಳ್ಳ ಚಲನಚಿತ್ರಗಳು ತೆರೆ ಕಾಣುತ್ತಿವೆ. ದಯಮಾಡಿ ತಾವುಗಳು ಹಿಂದಿ, ತೆಲುಗು, ತಮಿಳು ಸಿನಿಮಾಗಳನ್ನು ನೋಡುವುದನ್ನು ಕಡಿಮೆ ಮಾಡಿ ಕನ್ನಡ ಚಲಚಿತ್ರಗಳ ಬಗ್ಗೆ ಆದಷ್ಟೂ ಗಮನ ಹರಿಸಿ. ಯಾಕೆಂದರೆ ನಮ್ಮ ಕನ್ನಡ ಸಿನಿಮಾಗಳನ್ನು ನಾವು ನೋಡದೆ ಪರಭಾಷೆಯವರು ನೋಡುತ್ತಾರೆಯೇ??ತಮಿಳು ಫಿಲ್ಮ್ ನಲ್ಲಿ ಬರುವ Creativity ಈಗ ಕನ್ನಡದಲ್ಲೂ ಬರುತ್ತಿದೆ, ತೆಲುಗು ಫಿಲ್ಮ್ ನಲ್ಲಿ ಬರುವ Love Story ಯಂಥ ಸಿನಿಮಾಗಳು ಈಗ ಕನ್ನಡದಲ್ಲೂ ಬರುತ್ತಿವೆ..ನಾವುಗಳು ನೋಡುವ ಪ್ರಯತ್ನ ಮಾಡಬೇಕಷ್ಟೆ. ಇದಕ್ಕೆ ನಿಮ್ಮ ಸಮ್ಮತಿ ಇದೆ ಅಲ್ಲವೇ?
- ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಬುಧವಾರ, ಫೆಬ್ರವರಿ 11, 2009

ಪ್ರೀತಿ, ಪ್ರೇಮ ಅಂದರೆ ನನಗಿಷ್ಟು ಗೊತ್ತು..ನಿಮಗೆಷ್ಟು ಗೊತ್ತು??


ಪ್ರೀತಿ, ಪ್ರೇಮ ಅಂದರೆ ನನಗಿಷ್ಟು ಗೊತ್ತು..ನಿಮಗೆಷ್ಟು ಗೊತ್ತು??
"ಪ್ರೇಮಿಗಳ ದಿನದ" ಸುಸಂದರ್ಭದ ನಿಮಿತ್ತ ಎಲ್ಲರಿಗೂ ಒಪ್ಪಿಗೆ ಹಾಗೂ ಇಷ್ಟವಾಗುವಂತಹ ಒಂದು ಸರಳ, ಸುಂದರವಾದ ಲೇಖನವನ್ನು ಬರೆಯಬೇಕೆಂದು ಹಲವಾರು ಬಾರಿ ನಾನು ಮನದಲ್ಲೇ ಆಲೋಚಿಸಿದ್ದೆ. ಅದರಂತೆ ಪ್ರೀತಿ, ಪ್ರೇಮದ ಬಗ್ಗೆ ನನ್ನ ಮನದಾಳದ ಅನಿಸಿಕೆಗಳನ್ನು ತಿಳಿಸುವ ಸಲುವಾಗಿ ಒಂದು ಪರಿಪಕ್ವವೆನ್ನಿಸುವ ಲೇಖನವೊಂದನ್ನು ಬರೆದಿರುವೆನು. ದಯಮಾಡಿ ಬಿಡುವು ಇದ್ದಾಗ ಒಮ್ಮೆ ಓದಿರಿ..

ಮಿಂಚು, ಗುಡುಗು, ನ್ಯೂಕ್ಲಿಯರ್ ಪವರ್ ಗಳಿಗಿಂತಲೂ ಬಲಿಷ್ಟವಾದ "ಪ್ರೀತಿ ಹಾಗೂ ಪ್ರೇಮ"ಎನ್ನುವ ಎರಡು ಭಾವನಾತ್ಮಕ ಪದಗಳ ಬಗ್ಗೆ ಪ್ರೇಮಿಯಾಗದೆ ಬರೆಯುವ ಶಕ್ತಿ ನನಗೆ ಇರದಿದ್ದರೂ. ಅಲ್ಪ-ಸ್ವಲ್ಪ ಕವಿ ಚಿಂತನ ಮನೋಭಾವನ್ನು ನನ್ನಲಿ ಇಟ್ಟುಕೊಂಡಿರುವುದರಿಂದ, ಆ ಎರಡು ಭಾವನಾತ್ಮಕ ಪದಗಳ ಬಗ್ಗೆ ಬರೆಯುವ ಶಕ್ತಿ, ಸಾಮರ್ಥ್ಯ ನನ್ನಲಿ ಇದೆ ಎಂದು ಭಾವಿಸುತ್ತಾ. ಈ ಲೇಖನವನ್ನು ಬರೆದಿರುವೆನು.

“ಪ್ರೀತಿಯೆಂದರೇನು...?”
ಪ್ರೀತಿಯೆನ್ನುವುದು ಬಹುಮುಖ ಹಾಗೂ ಬಹುರೂಪವುಳ್ಳದ್ದು. ಅದರ ಬಾಹುಗಳ ವಿಸ್ತಾರ ಅಳತೆಗೆ ಮೀರಿದ್ದು, ಕಣ್ಣಿಗೆ ಕಾಣದ್ದು, ವಯಸ್ಸಿನ ಅಂಕೆಯಲ್ಲಿ ಒಳಪಡದ್ದು. ಸ್ವಾರ್ಥಕ್ಕೆ ಎಷ್ಟೂ ದೂರವಾದುದ್ದೋ ಅಷ್ಟೇ ಹತ್ತಿರವಾದುದ್ದು. ಇವರೆಗೂ ಎಷ್ಟೋ ಕವಿಗಳ, ಎಷ್ಟೋ ರಸಿಕರ ಕಾವ್ಯ ಕಾರಂಜಿಯ ಲಹರಿಯಲ್ಲಿ ಎಷ್ಟು ವಿಧವಾಗಿ ಬಣ್ಣಿಸಿದರೂ, ಎಷ್ಟು ವಿಧವಾಗಿ ವರ್ಣಿಸಿದರೂ ಮತ್ತೆ ಮತ್ತೆ ಎಲ್ಲೆಲ್ಲೋ, ಯಾರ್ಯಾರಿಂದಲೋ ಯಾರ್ಯಾರೋ ಮನದಲ್ಲೋ, ಕಲ್ಪನೆಯಲ್ಲೋ, ನರನಾಡಿಗಳ ಮಿಡಿತದಲ್ಲೋ ಚಿಗುರೊಡೆದು ಹೊಸ ಬಗೆಯ ರೂಪ, ಹೊಸ ಬಗೆಯ ಭಾವ, ಹೊಸ ಬಗೆಯ ಉತ್ಸಾಹ ಎಲ್ಲವನ್ನೂ ಪಡೆದು ಮತ್ತೆ ಮತ್ತೆ ವರ್ಣಿಸಲ್ ಪಡುವುದು, ಮತ್ತೆ ಮತ್ತೆ ಬಣ್ಣಿಸಲ್ ಪಡುವುದು... ಈ ಪ್ರೀತಿ!”

ಇದು ಕೇವಲ ಬರಿ ಹುಡುಗ-ಹುಡುಗಿ, ಗಂಡ-ಹೆಂಡತಿಗಳ ನಡುವೆ ಮಾತ್ರವೇ ವ್ಯಕ್ತವಾಗುವಂತಹದ್ದಲ್ಲ. ತಾಯಿ ತನ್ನ ಮಗುವಿನಲ್ಲಿ ಇರಿಸಿರುವ ಅನನ್ಯ ಮಮಕಾರ, ಅಕ್ಕರೆ ರೂಪದಲ್ಲೂ ಅಡಗಿರುತ್ತದೆ. ಬಂಧು-ಬಾಂಧವ್ಯ ರೂಪದಲ್ಲಿ ಇರುತ್ತದೆ, ಗೆಳೆತನದ ರೂಪದಲ್ಲೂ ಇರುತ್ತದೆ. ಆದರೆ ಇವುಗಳೆಲ್ಲವುಗಳಿಗಿಂತ ಸ್ವಲ್ಪ ವಿಭಿನ್ನವಾಗಿಯೂ, ಸ್ವಲ್ಪ ವಿಚಿತ್ರವಾಗಿಯೂ ಇರುವುದು ಹುಡುಗ-ಹುಡುಗಿ, ಗಂಡ-ಹೆಂಡತಿಯರ ನಡುವೆ ಇರುವ ಪ್ರೀತಿ! ಇವೊಂದು ಪ್ರೀತಿಯಲ್ಲಿ ವಯೋ ಸಹಜವಾದ ಆಕರ್ಷಣೆ ಇರುತ್ತದೆ, ನೂರಾರು ಹೊಂಗನಸುಗಳು ಇರುತ್ತವೆ, ಬರಿ ಇಷ್ಟೇ ಅಲ್ಲದೆ ಮನದ ಮೂಲೆಯಲ್ಲಿ ಎಲ್ಲೋ ಅದಮ್ಯ ಕಾಳಜಿ, ನವಿರು ರೋಮಾಂಚನ, ಮತ್ತೆಲ್ಲೋ ಒಂದು ಕಡೆಯಲ್ಲಿ ಸಮಾಜದ ಭೀತಿ, ಬೆಸುಗೆ ಕಳಚಿ ಬೀಳುವ ಭಯ ಹೀಗೆ ಎಲ್ಲವೂ ಸಂಮಿಶ್ರಣವಾಗಿರುತ್ತದೆ.

ಯುವಕ, ಯುವತಿಯರು ಪ್ರೀತಿ ಮಾಡಬಾರದೆಂದು ನಮ್ಮ ಸಂಪ್ರದಾಯ, ನಮ್ಮ ಧರ್ಮ ಎಂದೂ, ಯಾವತ್ತೂ ಹೇಳಿಲ್ಲ. ಇದಕ್ಕೆ ಪೂರಕವಾಗಿರುವಂತೆ ಆಗಿನ ಕಾಲದಲ್ಲೇ ನಳ ದಮಯಂತಿ ಪ್ರೀತಿ ಮಾಡಿರಲಿಲ್ಲವೇ? ರಾಧಾ ಕೃಷ್ಣರು ಪ್ರೀತಿ ಮಾಡಿರಲಿಲ್ಲವೇ? ಹೆತ್ತವರು, ಒಡಹುಟ್ಟಿದವರು, ಬಂಧು-ಬಾಂಧವರು ಹಾಗೂ ಗೆಳೆಯರು ಇವರೆಲ್ಲರ ಪ್ರೀತಿಯ ಜೊತೆಗೆ ನಮ್ಮನ್ನು, ನಮ್ಮಷ್ಟೇ ಅರ್ಥಮಾಡಿಕೊಂಡು ಪ್ರೀತಿ ಮಾಡುವ ಜೀವವಿದ್ದರೆನೇ ಈ ನಮ್ಮ ಬದುಕು ಒಂದು ಪರಿಪೂರ್ಣವಾದದ್ದು ಎಂದು ಹೇಳಿಕೊಳ್ಳಬಹುದು.
ಆದರೆ ನಾವು ಮಾಡುವ ಈ ಪ್ರೀತಿ, ಪ್ರೇಮ ಬರಿ ವಯೋ ಸಹಜವಾದ ಆಕರ್ಷಣೆಯಿಂದ ಬಂದಂತದ್ದು ಆಗಿರಬಾರದು. ಏಕೆಂದರೆ ಆ ರೀತಿ ಬಂದಂತದ್ದು ತಾತ್ಕಾಲಿಕವಾಗಿರುತ್ತದೆ. ನಮ್ಮ ಭವ್ಯ ಸಂಸ್ಕೃತಿ, ಪರಂಪರೆಗಳನ್ನು, ಕಟ್ಟುಪಾಡುಗಳನ್ನು ಮುರಿಯಲು ದಾರಿಯಾಗುತ್ತದೆ. ಅದ್ದರಿಂದ ನಮ್ಮ ಅಂತರಾಳದಲ್ಲಿ ಮೂಡಿ ಬಂದ ಪ್ರೀತಿ, ಪ್ರೇಮ, ಆಕರ್ಷಣೆ ಶಾಶ್ವತವಾಗಿರಬೇಕು, ನಂಬಿಕೆಯುತವಾಗಿರಬೇಕು ಮತ್ತು ಎಲ್ಲರೂ ಒಪ್ಪಿ ಮೆಚ್ಚುವಂತಿರಬೇಕು

ನಮಗೆ ಇಷ್ಟವಾದವರ ಪ್ರೀತಿಯನ್ನು ಹೇಗೆ ಒಲಿಸಿಕೊಳ್ಳುವುದು??

ಕೆಲವರಿಗೆ ಪ್ರೀತಿಯ ವಿಚಾರವೊಂದೇ ಅಲ್ಲ ಮಿಕ್ಕೆಲ್ಲ ವಿಚಾರದ ಬಗ್ಗೆಯೂ ಸಹ ತಮ್ಮ ಮನದಾಳದಲ್ಲಿ ಹೊಮ್ಮಿಬಂದ ಹೊಸ ಬಯಕೆಯನ್ನ, ಹೊಸ ಭಾವನೆಯನ್ನ, ನವಿರು ಪುಳಕವನ್ನ ಹಾಗೆ ಬರಲು ಕಾರಣರಾದವರ ಮುಂದೆ ಸುಂದರವಾಗಿ ಹೇಳಿ ಅವರ ಪ್ರೀತಿಯನ್ನ, ಅವರ ಒಲವನ್ನ, ಅವರ ಪ್ರೇಮವನ್ನ, ಕೊನೆಗೆ ಅವರ ಬಾಂಧವ್ಯವನ್ನೂ ಸಹ ಪಡೆದುಕೊಳ್ಳುವ ಕಲೆ ಇರುತ್ತದೆ (ಸಿದ್ದಿಸಿರುತ್ತದೆ). ಹೌದು ಇದು ಅದ್ಬುತವಾದ ಒಂದು ಕಲೆ. ಪ್ರೀತಿ ಮಾಡುವ ಅವಕಾಶ, ಸೌಭಾಗ್ಯ, ಎಲ್ಲರಿಗೂ ಒಲಿದು ಬರುವುದಿಲ್ಲ.

ಆದರೆ ಪಾಪ ಇನ್ನು ಕೆಲವರಿಗೆ ತಮ್ಮ ಮನದಲ್ಲಿ ಮೂಡಿಬಂದ ಅಪರಿಮಿತ ಮಧುರ ಭಾವ, ಹೊಚ್ಚ ಹೊಸ Feelingsಗಳನ್ನು, ಆಸೆ, ಆಕಾಂಕ್ಷೆಗಳನ್ನು ಹೇಳುವ ಧೈರ್ಯ ಬಾರದೆ ತಮ್ಮ ಮನದಲ್ಲೇ ಇಟ್ಟುಕೊಂಡು ಕೊರಗುತ್ತಾರೆ. ತಮ್ಮೊಳಗೇನೆ ಆ ಮಧುರ ಭಾವವನ್ನು ಹೆಮ್ಮರವಾಗಿಸಿ ಬಿಡುತ್ತಾರೆ.

ನೆನಪಿರಲಿ, ಎಲ್ಲೂ ಹೇಳಲಾರದೆ ಮನದ ತಿಜೋರಿಯ, ಮಧುರ ಭಾವಗಳ ಖಾನೆಯೊಳಗೆ ಬಚ್ಚಿಟ್ಟುಕೊಂಡ ಪ್ರೀತಿಯು ನಿಜಕ್ಕೂ ಬಹಳ ಪ್ರಬಲವಾದುದ್ದು, ಅದರ ಜೊತೆಗೆ ಅಷ್ಟೇ ನೋವನ್ನು ಯಾತನೆಯನ್ನು ತರುವಂತಹದ್ದು...ಮತೆ ಹಾಗೆ ಇರದೆ ನಮ್ಮ ಪ್ರೀತಿಯನ್ನು ಹೇಗೆ ವ್ಯಕ್ತ ಪಡಿಸುವುದು? ಪ್ರೇಮಿಗಳ ದಿನದೊಂದು ಅದ್ದೂರಿಯಾಗಿ ಮಾಡುವ ಆಚರಣೆ ತರವೇ?? ಎಲ್ಲವನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ!!

ಒಂದು ಸರಳವಾದ ಕವನವನ್ನೂ ಕೆಳಗೆ ಬರೆದಿರುವೆನು ಒಮ್ಮೆ ಓದಿರಿ
ಇದು ನಿಜವೇನೇ? ಗೆಳತಿ, ಇದು ನಿಜವೇನೇ?
ಇದು ನಿಜವೇನೇ? ಗೆಳತಿ, ಇದು ನಿಜವೇನೇ?
ಆ ಹಾಲು ಬೆಳದಿಂಗಳ ಚಂದಿರ│ ಅವನಿದ್ದರೂ ಅಷ್ಟು ಸುಂದರ│
ನಿನ್ನಯ ಚೆಲುವಿನಲಿ ಒಂದಿಷ್ಟು ಪಾಲು│ ಪಡೆಯಲು ತೋರಿಹನಂತೆ ಕಾತರ?
ಇದು ನಿಜವೇನೇ? ಗೆಳತಿ, ಇದು ನಿಜವೇನೇ?

ಹೊನ್ನಕಾಂತಿ ತುಂಬಿಕೊಂಡ ಆ ನೇಸರ│
ಕಂಡು ನಿನ್ನ ಕಣ್ಣಕಾಂತಿ ತಾಳಿಹನಂತೆ ಬೇಸರ│
ನಿನ್ನ ಭೇಟಿಗೊಮ್ಮೆ ತೋರಿಹನಂತೆ ಬಲು ಆತುರ?
ಇದು ನಿಜವೇನೇ? ಗೆಳತಿ, ಇದು ನಿಜವೇನೇ?

ನಿನ್ನ ಮುದ್ದುನಗು│ ಕಂಡ ಮುಗ್ದ ಮಗು│
ಮಾಡಿವುದಂತೆ ಹಠ│ ನಿನ್ನ ಜೊತೆಯಲಿ ಆಡಬೇಕೆಂದು ಆಟ!
ಇದು ನಿಜವೇನೇ? ಗೆಳತಿ, ಇದು ನಿಜವೇನೇ?

ಇರಲಿ ಇರಲಿ ಗೆಳತಿ, ಹೀಗೆ ಇರಲಿ ಇರಲಿ
ನಿನ್ನ ಚಲುವಿನಲಿ ಕಾಂತಿ│ ನಿನ್ನ ನಯನದಲೂ ಕಾಂತಿ│
ನಿನ್ನ ನಗುವಿನಲಿ ಸ್ಫೂರ್ತಿ│ ನಿನ್ನ ಬದುಕಲಿ ಕೀರ್ತಿ│
ಆದರೆ ನಿನ್ನಲಿ ನಾ ಇಟ್ಟಿರುವ ಪ್ರೀತಿ│ ಎಂದೂ ಆಗದಿರಲಿ ಒಂದು ಭ್ರಾಂತಿ!

ಭಾನುವಾರ, ಫೆಬ್ರವರಿ 1, 2009

ಬಂದಿದೆ ಬಂದಿದೆ ಬಂದಿದೆ│ಪ್ರಬಲ ಆರ್ಥಿಕ ಹಿಂಜರಿತ│




ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
Americaದಲಿ Europeನಲಿ
Indiaದಲಿ, ಎಲೆಡೆಯಲಿ
ಆಗುತಿದೆ ಆಗುತಿದೆ ಆಗುತಿದೆ
ಷೇರು ಸೂಚ್ಯಂಕದಲ್ಲಿ ಇಳಿತ│
ಕೆಲಸಗಳ ಹಿಗ್ಗ ಮುಗ್ಗಾ ಕಡಿತ!

ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
ಈಗೀಗ ಆಗಿದೆ ಆಗಿದೆ ತಣ್ಣಗಾಗಿದೆ
Party, Outingಗಳ ಮೊರೆತ│
Bar-Pubಗಳಲಿ ಅಬ್ಬರದ ಕುಣಿತ!

ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
Career Lifeನಲಿ ಆಗುವ ಅನಾಹುತಕ್ಕೆ
ಯಾರನೂ ಮಾಡಲಾಗದು ದೂಷಣೆ│
ಆದರೂ ನಾಜೂಕಾಗಿ ಮಾಡಿಕೊಳ್ಳಬೇಕಿದೆ
ನಮ್ಮ ನಮ್ಮ ಕೆಲಸಗಳನು ರಕ್ಷಣೆ!

ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
ನಮ್ಮ ನಮ್ಮಯ ದುಂದು ವೆಚ್ಚಕ್ಕೆ
ಇಂದೇ ನಾವ್ ಹಾಕೋಣ ಕಡಿವಾಣ!
ಕಾಯಕ ಕೈ ತಪ್ಪಿ ಹೋದವರಿಗೆ
ನುಗ್ಗಿ ಮುಂದೇ ಹೇಳೋಣ ಸಮಾಧಾನ

ಬಂದಿದೆ ಬಂದಿದೆ ಬಂದಿದೆ│ ಪ್ರಬಲ ಆರ್ಥಿಕ ಹಿಂಜರಿತ│
ಅವರಿಗಾದರೇನು? ನಮಗಾದರೇನು? ಯಾರಿಗಾದರೇನು?
ಎಲ್ಲರ ಸಂಕಷ್ಟದಲ್ಲಿ ಸ್ವಲ್ಪವಾದರೂ ಸಹಭಾಗಿಯಾಗೋಣ
ಕಾಲಕ್ರಮೇಣ ಆರ್ಥಿಕ ಹಿಂಜರಿತವನು ಹಿಮ್ಮೆಟ್ಟಿಸೋಣ!

ರಚನೆ ಸುನಿಲ್ ಮಲ್ಲೇನಹಳ್ಳಿ

ಸೋಮವಾರ, ಜನವರಿ 19, 2009

ಓ ನನ್ನ ಬಡಕನ್ನಡವೇ..ನಿನಗೆಲ್ಲರಿಂದಲೂ ಸಂಕಟವೇ??


ಎಲ್ಲರಿಗೂ ಹೃತ್ಪೂರ್ವಕ ನಮಸ್ಕಾರ,
ಜನವರಿ ೨೬ ರ ಗಣರಾಜ್ಯೋತ್ಸವದ ಪ್ರಯುಕ್ತ ಎಲ್ಲ ಪ್ರಾಂತೀಯ ಭಾಷೆಗಳ ಪ್ರಾಮುಖ್ಯತೆಯನ್ನು ಮನಗಂಡು ಬರೆದ ಲೇಖನವಿದು.

ಮೊನ್ನೆ ಮೊನ್ನೆ ದೆಹಲಿಯಲ್ಲಿ ದುಂಡು ಮೇಜಿನ ಸಮ್ಮೇಳನವೊಂದನ್ನು ಆಯೋಜಿಸಲಾಗಿತ್ತು. ಅದರಲ್ಲಿ ಸಕ್ರಿಯಾವಾಗಿ ಪಾಲ್ಗೋಳ್ಳಲು ಭಾರತ ದೇಶದ ಎಲ್ಲಾ ಪ್ರಾದೇಶಿಕ ಸಮ್ಮೇಳನಕ್ಕೆ ತುಂಬು ಹೃದಯದಿಂದ ಆಹ್ವಾನಿಸಲಾಗಿತ್ತು. ಆಯಾ ರಾಜ್ಯಗಳಲ್ಲಿ, ಆಯಾ ಭಾಷೆಗಳು ಎದುರಿಸುತ್ತಿರುವ ಎಡರು, ತೊಡರುಗಳನ್ನು ಕುರಿತು ಚರ್ಚಿಸುವುದು ಹಾಗೂ ಭಾರತೀಯ ಭಾಷೆಗಳಲ್ಲೇ ಇರುವ ಒಳಜಗಳನ್ನು ಪರಿಣಾಮಕಾರಿಯಾಗಿ ಹೇಗೆ ನಿರ್ಮೂಲನೆ ಮಾಡುವುದು ಎನ್ನುವುದರ ಬಗ್ಗೆ ನಿರ್ಣಯ ಕೈಗೊಳ್ಳುವುದು, ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿತ್ತು. ಹಿಂದಿ ಭಾಷೆಯು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಂಡಿತ್ತು.

ಸಮಯಕ್ಕೆ ಸರಿಯಾಗಿ ಸಮ್ಮೇಳನ ಶುರುವಾಯಿತು. ಒಂದೊಂದೇ ಭಾಷೆಗಳು ತಮ್ಮ, ತಮ್ಮ ರಾಜ್ಯಗಳಲ್ಲಿ ತಾವುಗಳು ಗಳಿಸಿಕೊಂಡಿರುವ ಹಿರಿಮೆ ಹಾಗೂ ತಾವುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರವಾಗಿ ಹೇಳುತ್ತಾ ಬಂದವು. ಬಹುಮುಖ್ಯವಾಗಿ ಎಲ್ಲ ಭಾಷೆಗಳು ತೋಡಿಕೊಂಡಿದ್ದು ಒಂದೇ ಅಳಲು, ಅದು “ಇಂಗ್ಲೀಷ್ ಭಾಷೆಯು ತಮ್ಮ ನಾಡಿನ ಜನರ ಮೇಲೆ ಬೀರುತ್ತಿರುವ ಗಾಢ ಪ್ರಭಾವ ಹಾಗೂ ಅದರಿಂದ ತಮ್ಮ ಉಳಿವಿಗೆ ಬಂದಿರುವ ಆಪತ್ತು”.

ಉತ್ತರ ಭಾರತದ ಎಲ್ಲಾ ಭಾಷೆಗಳ ಸರದಿ ಮುಗಿಯುತ್ತಿದ್ದಂತೆಯೇ, ದಕ್ಷಿಣ ಭಾರತೀಯ ಭಾಷೆಗಳ ಸರದಿ ಬಂತು. ಅದರಲ್ಲಿ ಮೊದಲನೇ ಸರದಿ ಮಲೆಯಾಳಂ ಭಾಷೆಯದಾಗಿತ್ತು. ಸಮಾರಂಭಕ್ಕೆಂದು ಚೆನ್ನಾಗಿಯೇ ಪೂರ್ವ ತಯಾರಿ ಮಾಡಿಕೊಂಡು ಬಂದಿದ್ದ ಮಲೆಯಾಳಂ ಭಾಷೆಯು ಎಲ್ಲ ಭಾಷೆಗಳಿಗೂ ನಮಸ್ಕಾರ ಹೇಳುತ್ತಾ, ತನ್ನ ಮಾತನ್ನು ಮುಂದುವರೆಸಿತು, “ನಾನು ಬಳಸಲ್ಪಡುವ ಕೇರಳ ರಾಜ್ಯ ದಕ್ಷಿಣ ಭಾರತದ ರಾಜ್ಯಗಳಲ್ಲೇ ಬಹಳ ಚಿಕ್ಕದಿರುಬಹುದು. ಆದರೆ ನನ್ನ ಜನ ನನ್ನನ್ನು ಬಹಳ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ, ಅಲ್ಲದೇ ಈ ಭೂಮಿಯ ಮೇಲಿರುವ ಪ್ರತಿಯೊಂದು ದೇಶಗಳಲ್ಲೂ ಮಲಯಾಳಂ ಜನರಿದ್ದಾರೆ. ಅವರುಗಳು ಅಲ್ಲಿ ಮಲಯಾಳಂ ನಾಡು, ನುಡಿ ಸಂಸ್ಕೃತಿಯನ್ನು ಬಹಳ ಅಚ್ಚುಕಟ್ಟಾಗಿ ಮೆರೆಸುತ್ತಿದ್ದಾರೆ. ಅವರ ಬಗ್ಗೆ ನನಗೆ ತುಂಬು ಹೆಮ್ಮೆ ಇದೆ. ಸದ್ಯಕ್ಕಂತೂ ನನಗೆ ನನ್ನ ನಾಡಿನಲ್ಲಿ ಯಾವುದೇ ಎಡರು ತೊಡರುಗಳಿಲ್ಲ, ಜೊತೆಗೆ ಇಲ್ಲಿಯವರೆಗೂ ನನಗಾಗಲಿ, ನನ್ನ ನಾಡಿಗಾಗಲಿ ನೆರೆಹೊರೆಯ ಸಹೋದರಿಯರ ನಾಡಿನ ಜನರಿಂದ ಯಾವ ತೊಂದರೆ ಉಂಟಾಗಿಲ್ಲ!” ಎಂದು ಹೇಳುತ್ತಾ.. ಬಹಳ ಸಂತೋಷದಿಂದ ತನ್ನ ಮಾತನ್ನು ಮುಗಿಸಿತು.

ನಂತರದ ಸರದಿ ಕನ್ನಡ ಭಾಷೆಯದಾಗಿತ್ತು. ಇವರೆಗೂ ಎಲ್ಲ ಭಾಷೆಗಳು ಹಿಂದಿಯಲ್ಲೇ ತಮ್ಮ ಅಭಿಪ್ರಾಯಗಳನ್ನು ಪ್ರಸ್ತಾವಿಸಿ, ಮಂಡಿಸಿದ್ದರಿಂದ ಕನ್ನಡ ಭಾಷೆಯು ಸಹ ಹಿಂದಿಯಲ್ಲೇ ತನ್ನ ಮನದಾಳದ ಮಾತುಗಳನ್ನು ತಿಳಿಸಲು ಮುಂದಾಯಿತು...
ಎಲ್ಲರಿಗೂ ನನ್ನ ನಮಸ್ಕಾರ, ಇಲ್ಲಿಯವರೆಗೂ ನೀವೆಲ್ಲರು ನಿಮ್ಮ, ನಿಮ್ಮ ನಾಡಿನಲ್ಲಿ, ನಿಮ್ಮ ಏಳಿಗೆಗೆ ಹಾಗೂ ಉಳಿವಿಗೆ ಇರುವ ಎಡರು ತೊಡರುಗಳನ್ನು ಮನ ಮುಟ್ಟುವಂತೆ ವಿವರಿಸಿ ಹೇಳಿದ್ದೀರಿ. ನಿಜ ಹೇಳಬೇಕೆಂದರೆ ಇವೊಂದು ಪರಿಸ್ಥಿತಿಯಿಂದ ನಾನು ಸಹ ಹೊರತಲ್ಲ. ನಿಮ್ಮಂತೆಯೇ ಜಾಗತೀಕರಣದ ಫಲವಾಗಿ ನನ್ನ ಉಳಿವು ಸಹ ಅನುಮಾನದ ವಿಷಯವಾಗಿ ಹೋಗಿದೆ.
“ಜಾಗತೀಕರಣ”ಇದು ಒಂದು ನೋವಿನ ವಿಷಯವಾದರೆ. ಇದರ ಜೊತೆಗೆ ನನ್ನವೇ ವೈವಿಧ್ಯಮಯವಾದ ನೋವುಗಳು ಇವೆ. ಅವುಗಳನ್ನು ಈ ಸಮಾರಂಭದಲ್ಲಿ ಹೇಳಲು ನನಗೆ ಹಕ್ಕು ಇದೆ ಎನ್ನುವ ಭಾವನೆ ನನ್ನದು, ಅದನ್ನು ಕೇಳುವ ಸಂಯಾಮ ನಿಮ್ಮಲ್ಲಿ ಇದೆ ಎಂದು ನಾ ಭಾವಿಸಿರುತ್ತೇನೆ,

1) ಈ ವಿಚಾರದಲ್ಲಿ ಮೊದಲನೆಯದಾಗಿ, ನನ್ನ ನಾಡಿನ ನೆರೆಹೊರೆಯಲ್ಲಿ ನಾಲ್ಕಾರು ಸಹೋದರಿಯರ ನಾಡುಗಳು ಇರುವುದು ನಿಮಗೆ ಗೊತ್ತಿದೆ. ಆ ನಾಡುಗಳ ಜನರಿಗಂತೂ ನನ್ನಿಂದ, ನನ್ನ ನಾಡಿನಿಂದ ಆದಷ್ಟು ಬೇಗ ಎಲ್ಲವನ್ನೂ ಕಸಿದುಕೊಳ್ಳುವ ಆಸೆ, ಕೇಂದ್ರ ಸರಕಾರವನ್ನೇ ಅಂಗೈಯಲ್ಲಿ ಇಟ್ಟಿಕೊಂಡಿರುವ ಆ ಜನರಿಗೆ ಹೆಜ್ಜೆ ಹೆಜ್ಜೆಗೂ ನನ್ನ ಏಳಿಗೆಗೆ ಮುಳ್ಳಾಗುವ ಆಸೆ. ಮತ್ತೊಂದೆಡೆ ನನ್ನ ನಾಡಿನ ಅವಿಭಾಜ್ಯ ಅಂಗವಾದ ಬೆಳಗಾವಿಯನ್ನು ಸಂಪೂರ್ಣವಾಗಿ ಕಸಿದುಕೊಳ್ಳುವ ಪ್ರಯತ್ನ. ಒಟ್ಟಾರೆ ನನ್ನ ನಾಡಿನ ಹೊರಗೂ ಎಲ್ಲೆಲ್ಲೂ ನನಗೆ ಉಳಿಗಾಲವೇ ಇಲ್ಲ.

2) ನನ್ನ ಉಳಿವಿಗಾಗಿ ಚಿಂತನೆಗಳನ್ನು ಮಾಡುವವರಿಗೆ, ಕನ್ನಡದ ವಾತಾವರಣದಲ್ಲಿ ಇರೋರಿಗೆ, ಕನ್ನಡಕ್ಕಾಗಿ ಶ್ರಮಿಸುವವರಿಗೆ, ಕೆಲವೊಂದು ಸತ್ಯಾಸತ್ಯಗಳು ತಿಳಿಯಬೇಕಾಗಿದೆ. ಪಾಪ ಅವರು ಕನ್ನಡ ಎಲ್ಲ ಕಡೆ ಬೆಳೆಯುತ್ತಿದೆ ಎಂದು ತಿಳಿದಿದ್ದಾರೆ.. "ನನ್ನ ನಾಡಿನ ರಾಜಧಾನಿ ಬೆಂಗಳೂರು ಒಂದರಲ್ಲೇ ಲಕ್ಷಾಂತರ ಜನ ಕನ್ನಡಿಗರು ಒಳ್ಳೊಳ್ಳೆ ಉನ್ನತ ದರ್ಜೆಯ ಕೆಲಸಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಅವರುಗಳು ಬಹಳ ಸುಖಮಯವಾದಂತಹ ಜೀವನವನ್ನೂ ನಡೆಸುತ್ತಿದ್ದಾರೆ. ಆದರೆ ಅವರುಗಳಲ್ಲಿ ಬಹುಪಾಲು ಮಂದಿ “ಮಾತೃ ಭಾಷೆ” ಎನ್ನುವ ವಿಷಯದಲ್ಲಿ ಎಂತಹ ಹೃದಯ ಶೂನ್ಯರಾಗಿದ್ದಾರೆ. ನನ್ನ ಉಳಿವಿನ ಮಹತ್ವದ ಬಗ್ಗೆ ತಿಳುವಳಿಕೆಯನ್ನು ಮೂಡಿಸುವಂತಹ ಒಂದು ಕಾರ್ಯಕ್ರಮವನ್ನು ಅವರಿಂದ ಏರ್ಪಡಿಸಲು ಆಗಿಲ್ಲ. ಒಮ್ಮೆಯಾದರೂ ಹಳ್ಳಿಗಾಡುಗಳ ಕಡೆ ಹೋಗಿ ಅಲ್ಲಿ ಇಂಗ್ಲೀಷ್ ಭಾಷೆಯ ಬಗ್ಗೆ ಹೆಚ್ಚು, ಹೆಚ್ಚು ಒಲವು ತೋರುತ್ತಿರುವರಿಗೆ ಕನ್ನಡ ಮಾಧ್ಯಮದಲ್ಲಿ ಓದಿ ಏನ್ನೆಲ್ಲ ಸಾಧಿಸಬಹುದೆಂದು ಅರಿವು ಮೂಡಿಸಿ ಬರಲು ಅವರಿಗೆ ಸಮಯವಿಲ್ಲದಂತಾಗಿದೆ".

3) ಅಲ್ಲದೇ ನನ್ನ ನಾಡಿನಲ್ಲಿ ನೂರಾರು ಕನ್ನಡ ಪರ ಸಂಘಟನೆಗಳನ್ನು ಸಂಘಟಿಸಿದ್ದಾರೆ. ಅವುಗಳು ಒಂದಿಷ್ಟು ಗಮನಾರ್ಹ ಕೆಲಸಗಳನ್ನು ಮಾಡಿವೆ. ಆ ವಿಷಯವಾಗಿ ಅವರುಗಳನ್ನು ಮೆಚ್ಚಲೇಬೇಕು. ಆದರೆ ಅವುಗಳಲ್ಲಿ ಹಲವಾರು ಸಂಘಟನೆಗಳ ಸದಸ್ಯರುಗಳ ಮಧ್ಯೆ ವೈಮನಸ್ಸು ಮೂಡಿ, ಕೆಲವೊಂದು ಸಂಘಟನೆಗಳು ಹರಿದು ಚೂರು, ಚೂರಾಗಿ ಅವುಗಳಲ್ಲಿ ಮತ್ತೊಂದೊಂದು ಬಣಗಳು ಹುಟ್ಟಿಕೊಂಡಿವೆ. ಇಂತಹ ಒಂದು ಪರಿಸ್ಥಿತಿ ಬೇಕಿತ್ತೇ? ಒಂದು ನಾಡು, ನುಡಿಯ ಬಗ್ಗೆ ಹೋರಾಡುವವರಿಗೆ ಮನಸ್ಸು, ಮೈಯಿ, ಅವನು, ಇವನು ಎಲ್ಲವೂ ಒಂದೇ ಆಗಿರಬೇಕು. ತನ್ನಲ್ಲೂ, ಅವನಲ್ಲೂ, ಎಲ್ಲದರಲ್ಲೂ ತನ್ನ ಭಾಷೆಯ ತನವನ್ನು ಕಾಣಬೇಕು ಆಗಲೇ ಒಂದು ನಾಡಿನ, ಒಂದು ಭಾಷೆಯ ಪರಿಪೂರ್ಣ ಏಳಿಗೆ ಸಾಧ್ಯ. ಇದನ್ನು ನನಗೆ ಮಾತ್ರ ಅನ್ವಯಿಸಿಕೊಂಡು ಹೇಳುತ್ತಿಲ್ಲ, ನನ್ನಂತೆಯೇ ನೂರಾರು ಸಮಸ್ಯೆಗಳನ್ನು, ಒಳನೋವುಗಳನ್ನು ಎದುರಿಸುತ್ತಿರುವ ಸಹೋದರಿಯ ಭಾಷೆಗಳಾದ ನಿಮ್ಮನ್ನೂ ಅನ್ವಯಿಸಿಕೊಂಡು ಹೇಳುತ್ತಿರುವೆನು. ಯಾಕೆಂದರೆ ನನ್ನ ನಾಡಿನಲ್ಲಿ, ನನ್ನ ಅಭ್ಯುದಯದ ಜೊತೆಗೆ ನೀವು ನಿಮ್ಮ, ನಿಮ್ಮ ನಾಡಿನಲ್ಲಿ ಬೆಳೆಯಬೇಕೆಂಬುದು ನನ್ನ ಮನೋಭಿಲಾಷೆ.

4) ಇನ್ನೂ ನನ್ನ ನಾಡಿನ ಪ್ರಾಧಿಕಾರಗಳು, ಪರಿಷತ್ತುಗಳು ಹಾಗೂ ಸರಕಾರ ಇವರುಗಳು ಕಲಿಯಬೇಕಿರುವುದು ಬಹಳಷ್ಟು ಇದೆ. ಚಿಕ್ಕಪುಟ್ಟ ಮಕ್ಕಳ ತರ ಸಣ್ಣ ಸಣ್ಣದಕ್ಕೂ ಜಗಳ ಕಾಯೋದನ್ನು ಬಿಟ್ಟು, ನನ್ನ ಹಾಗು ನನ್ನ ನಾಡಿನ ಏಳಿಗೆಗೆ ದಾರಿದೀಪಗಳಾಗಬೇಕಿದೆ. ಕನ್ನಡ ನಾಮಾಫಲಕ ಕಡ್ಡಾಯ ಅನ್ನುವ ನಿಯಮವನ್ನು ಇಷ್ಟು ವರುಶವಾದರೂ ಸರಿಯಾಗಿ ಅನುಷ್ಟಾನಕ್ಕೆ ತರಲಾಗಿಲ್ಲ ಅವರಿಗೆ. ಎರಡು ವರುಷಗಳಿಗೊಮ್ಮೆ ನಡೆಸುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೂರಾರು ಎಡರು-ತೊಡರುಗಳು ಜೊತೆಗೆ ಪರ್ಯಾಯ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತಾದ ಕೂಗುಗಳು.

4) ಬೆಳಗಾವಿಯಂತ ನಗರದಲ್ಲಿ ಹತ್ತು ದಿನಗಳ ಕಾಲ ಸರಕಾರದ ಕಾರ್ಯಕಲಾಪಗಳನ್ನು ನಡೆಸುವುದು ಸ್ವಾಗತರ್ಹ ಕ್ರಮ. ಆದರೆ ಹತ್ತು ದಿನದ ಸಮಾವೇಶಕ್ಕೆ ಇಪ್ಪತೈದು ಕೋಟಿ ಖರ್ಚು ಮಾಡುವ ಇವರು. ನಾಡಿನಲ್ಲಿ ಇರುವ ನಿರುದ್ಯೋಗಿ ಪಧವಿದರರಿಗೆ ಮಾಸಿಕವಾಗಿ ಒಂದು ಐದುನೂರು ರೂಪಾಯಿಗಳನ್ನು ಸಹಾಯ ಧನವಾಗಿ ಕೊಡುವ ಯೋಜನೆಯನ್ನು ಅನುಷ್ಟಾನಕ್ಕೆ ತರಲಾಗುದಿಲ್ಲವೇ? ವರುಶಕ್ಕೆ ಇನ್ನೂರರಿಂದ ಮೂನ್ನೂರು ಕೋಟಿ ವೆಚ್ಚವಾಗಬಹುದು ಸರಕಾರದ ಬೊಕ್ಕಸಕ್ಕೆ. ಅಷ್ಟನ್ನೂ ಭರಿಸಲಾಗುವುದಿಲ್ಲವೇ?

ನನ್ನ ನಾಡಿನ ಜನತೆಗೆ, ಪರಿಷತ್ತುಗಳಿಗೆ, ಪ್ರಾಧಿಕಾರಗಳಿಗೆ ಹಾಗೂ ನನ್ನ ನಾಡಿನ ಸರಕಾರಕ್ಕೆ ನನ್ನ ಏಳಿಗೆ ಬಗ್ಗೆ ಸಾಕಷ್ಟು ಕಾಳಜಿ ಬರಲೆಂದು ಭಾರತಮಾತೆಯಲ್ಲಿ ಪ್ರಾರ್ಥಿಸುತ್ತಾ, ಇಷ್ಟು ಹೊತ್ತು ಮಾತನಾಡಲು ಅವಕಾಶ ಕೊಟ್ಟ ಎಲ್ಲ ಸಹೋದರಿಯ ಭಾಷೆಗಳಿಗೆ ವಂದನೆಗಳನ್ನು ಹೇಳುತ್ತಾ... ಕನ್ನಡ ಭಾಷೆಯು ತನ್ನ ಮಾತುಗಳನ್ನು ಮುಗಿಸಿತು!!!!
-ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಸೋಮವಾರ, ಜನವರಿ 12, 2009

"ನಮ್ಮ ಅಪ್ಪಾಜಿ ಅಂದ್ರೆ ನನಗಿಷ್ಟ"

ಬರಹಗಾರ ವಸುಧೇಂದ್ರ ಅವರು ಬರೆದ "ನಮ್ಮ ಅಮ್ಮ ಅಂದ್ರೆ ನನಗಿಷ್ಟ" ಅನ್ನುವ ಪುಸ್ತಕವನ್ನು ಓದುವ ಅವಕಾಶ ಈಗ್ಗೆ ಕೆಲವು ದಿನಗಳ ಹಿಂದೆ ನನಗೆ ಒದಗಿಬಂದಿತ್ತು. ವಸುಧೇಂದ್ರ ಅವರು ತಮ್ಮ ಪೂಜ್ಯ ತಾಯಿಯವರು ಬಾಳಿ, ಬದುಕಿ ಹೋದ ಪರಿಯನ್ನು ಬಹಳ ಚಂದವಾಗಿ ವರ್ಣಿಸಿ ಬರೆದ ಪುಸ್ತಕವದು.

ಆ ಪುಸ್ತಕವನ್ನು ಓದಿ ಮುಗಿಸಿದಾಗಿನಿಂದಲೂ ನನ್ನ ಅಪ್ಪಾಜಿಯವರ ಬಗ್ಗೆ ಏನಾದರೂ ಬರೆಯಬೇಕೆಂಬ ವಿಚಾರವೂ ಸದಾ ಮನದ ಕಾರ್ಮುಗಿಲಲ್ಲಿ ಮಿಂಚುತ್ತಲೇ ಇತ್ತು. ಎಲೆಮರೆ ಕಾಯಿಯಂತೆ ಬಾಳಿ, ಬದುಕಿ ಹೋದ ನನ್ನ ಬಾಳಿನ ದಿವ್ಯ ಧ್ರುವತಾರೆ ಅಪ್ಪಾಜಿ ಅವರು. ನನಗಂತೆ ಅಲ್ಲ ಎಲ್ಲರಿಗೂ ಅವರ, ಅವರ ಹೆತ್ತವರ ಬಗ್ಗೆ ಅದಮ್ಯ ಪ್ರೀತಿ, ಗೌರವ, ಪೂಜ್ಯನೀಯ ಭಾವ ಮನದಲ್ಲಿ ತನ್‌ತಾನೇ ಮನೆಮಾಡಿಕೊಂಡಿರುವುದು ಸಹಜ. ನಮ್ಮ ಹಾಗೂ ಅವರ ನಡುವಿನ ಸಂಬಂಧ ತ್ಯಾಗ, ಅಕ್ಕರೆ, ಮಮಕಾರ, ಸಹಕಾರ, ತೀರದ ಒಲವು ಇನ್ನು ಹಲವಾರು ಪವಿತ್ರ ಸಂಕೋಲೆಗಳಿಂದ ಆದಂತಹ ಒಂದು ಪವಿತ್ರ ಬಂಧನ ಅಲ್ಲವೇ?.

ನಿಜ ಹೇಳಬೇಕೆಂದರೆ ನನ್ನ ಅಪ್ಪಾಜಿಯವರು ಭೌತಿಕವಾಗಿ ಈ ಲೋಕದಿಂದ ಮರೆಯಾದ ಮೇಲೇನೆ “ಬರವಣಿಗೆ” ಅನ್ನುವ ಲೋಕಕ್ಕೆ ನಾನು ಕಾಲಿರಿಸಿದ್ದು. ಅದರಂತೆ ಇವರೆಗೂ ಕೆಲವಾರು ಪ್ರಕಾರಗಳ ಲೇಖನಗಳನ್ನು, ಕವನಗಳನ್ನು ಬರೆದು, ನಿಮ್ಮ ಮುಂದಿರಿಸಿದ್ದೀನಿ. ಏಕೆಂದರೆ ಒಂದೇ ಬಗೆಯ, ಒಂದೇ ವಿಚಾರದ ಲೇಖನಗಳು, ಕವನಗಳು ಎಂದೂ, ಯಾರಿಗೂ ಒಪ್ಪಿಗೆಯಾಗುವುದಿಲ್ಲ ಎನ್ನುವುದು ನನ್ನ ಭಾವನೆ.

ಅಪ್ಪಾಜಿಯವರ ಬದುಕಿನಲ್ಲಿ ನೆಡೆದ ವಿವಿಧ ಘಟನೆಗಳ ಚಿತ್ರಣವನ್ನು ಬರೆಯಲೇಬೇಕು ಅನ್ನುವ ಪಣವನ್ನು ಮನದಲ್ಲಿ ತೊಟ್ಟು. ಈ ಬಾರಿ ಕ್ರಿಸ್ಮಸ್ ಸಲುವಾಗಿ ಸಿಕ್ಕ ರಜೆಯಲ್ಲಿ ಈ ಲೇಖನವನ್ನು ಬರೆದಿರುವೆನು. ಒಂದು ಹತ್ತಾರು ನಿಮಿಷಗಳ ಕಾಲ ಬಿಡುವು ಮಾಡಿಕೊಂಡು ಓದಿರಿ,
ನನ್ನ ಅಪ್ಪಾಜಿಯವರ ಹೆಸರು ಶಾಂತಲಿಂಗಪ್ಪ ಅಂತ, ನನ್ನ ಅಪ್ಪಾಜಿಯವರ ತಾತನವರ ಹೆಸರು ಸಹ ಶಾಂತಲಿಂಗಪ್ಪ ಅಂತ ಇತ್ತಂತೆ. ಅವರ ನೆನಪಿನಗಾಗಿ ನನ್ನ ಅಪ್ಪಾಜಿಯವರಿಗೆ "ಶಾಂತಲಿಂಗಪ್ಪ" ಅನ್ನುವ ಹೆಸರನ್ನು ನನ್ನ ಅಜ್ಜ ಇಟ್ಟರಂತೆ.
ಅಪ್ಪಾಜಿಯವರು ಹೆಸರಿಗೆ ತಕ್ಕಹಾಗೆ ಬಲು ಶಾಂತ,ಅಷ್ಟೇ ಮೃದು ಸ್ವಭಾವದವರಾಗಿದ್ದರು. ತಾವಾಯಿತು, ತಮ್ಮ ಕೆಲಸವಾಯಿತು ಒಂದು ದಿನವೂ, ಒಂದು ಕ್ಷಣವೂ ಬೇರೆಯವರ ಗೋಜಿಗೆ ಹೋದವರಲ್ಲ. ಆದರೆ ವ್ಯವಹಾರದ ವಿಷಯದಲ್ಲಿ ಮಾತ್ರ ಯಾರಿಗೂ, ಎಂದೂ ತಲೆಬಾಗಿದವರಲ್ಲ ಅಷ್ಟೂ ಕಠಿಣ, ಅಷ್ಟೂ ಪಾರದರ್ಶಕ ಕೈಯಿ ಅವರದಾಗಿತ್ತು.

ನಾನು ಚಿಕ್ಕವನಿರುವಾಗ ಪ್ರತಿದಿನ ರಾತ್ರಿಯ ಬೀಡುವಿನ ವೇಳೆಯಲ್ಲಿ ತಮ್ಮ ಜೀವನದಲ್ಲಿ ನೆಡೆದ ಅನೇಕಾನೇಕ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಅಪ್ಪಾಜಿಯವರು ಹೇಳುತ್ತಾ ಇದ್ದರು. ಅವರು ಹೇಳಿದ ಹಲವಾರು ಘಟನೆಗಳಲ್ಲಿ ನನ್ನ ನೆನಪಿನಂಗಳದಲ್ಲಿ ಮಾಸದಂತೆ ಇರುವ ಕೆಲವನ್ನು ಇಲ್ಲಿ ಬರೆದಿರುವೆನು. ಓದುತ್ತಾ ಸಾಗಿರಿ...
*************************
1977 ರಲ್ಲಿ ನಡೆಯಲ್ಪಟ್ಟ ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿಯವರು ಚಿಕ್ಕಮಗಳೂರು ಕ್ಷೇತ್ರದಿಂದ ಸ್ಫರ್ಧಿಸಿದ್ದರು. ಎಲ್ಲ ಪಕ್ಷದವರಿಂದ ಅಬ್ಬರದ ಚುನಾವಣಾ ಪ್ರಚಾರ ನಡೆಯುತ್ತಿತ್ತಂತೆ. ಇಂತಹ ಸನ್ನಿವೇಶದಲ್ಲಿ ಚುನಾವಣಾ ಪ್ರಚಾರಕ್ಕೆಂದು ಖುದ್ದಾಗಿ ಇಂದಿರಾಗಾಂಧಿ ನಮ್ಮೂರಿಗೆ ಬಂದಾಗ ನಮ್ಮೂರಿನ ಹೊರಭಾಗದಲ್ಲಿರುವ ಬಸ್ಸ್‌ಸ್ಟ್ಯಾಂಡಿನ ಸುತ್ತಲೂ ಬಹಳ ಜನ ಸೇರಿದ್ದರಂತೆ. ಆ ಸಂದರ್ಭದಲ್ಲಿ ಇಂದಿರಾಗಾಂಧಿಯವರು ತಾವು ಹಾಕಿಕೊಂಡಿದ್ದ ಹೂವಿನ ಹಾರವನ್ನು ಮಹಾ ಜನತೆಯತ್ತಾ ಎಸೆದಾಗ, ಇದ್ದ ಭಾರಿ ನೂಕುನುಗ್ಗಲಲ್ಲೂ ಇಂದಿರಾಗಾಂಧಿಯವರು ಎಸೆದ ಹಾರವನ್ನು ಅಪ್ಪಾಜಿಯವರು ಹಿಡಿದು, ಮನೆಯಲ್ಲಿ ತುಂಬಾ ದಿನಗಳವರೆಗೆ ಇಟ್ಟುಕೊಂಡಿದ್ದರಂತೆ.
*************************
ಅಪ್ಪಾಜಿಯವರು ಚಿಕ್ಕವರಿದ್ದಾಗ ಅವರ ಮೂರನೇ ಅಣ್ಣನ (ಅಂದರೆ ನನ್ನ ಮೂರನೇ ದೊಡ್ಡಪ್ಪ) ಜೊತೆ ದಿನಾಲೂ ತೋಟಕ್ಕೆ ಹೋಗಿ ಬರುತ್ತಿದ್ದರಂತೆ. ಆಗಿನ ಸಮಯದಲ್ಲಿ ಹಳ್ಳಿಗಾಡುಗಳ ಕಡೆ ಬೋರ್‌ವೇಲ್ ವ್ಯವಸ್ಥೆ ಇರಲಿಲ್ಲವಾದ್ದರಿಂದ ಕೆರೆ ನೀರನ್ನು ಹೊತ್ತು ತಂದು, ತೆಂಗಿನ ಸಸಿಗಳಿಗೆ ಹಾಯಿಸಿ ಅವುಗಳನ್ನು ಬೆಳೆಸುತ್ತಿದ್ದರು. ರಸ್ತೆಯ ಪಕ್ಕದಲ್ಲಿ ತೋಟವಿದ್ದರಿಂದ ಆಗಾಗ ಓಡಾಡುವ ವಾಹನಗಳಿಗೆಲ್ಲ ತೆಂಗಿನ ಗರಿಗಳು ಬಡಿಯುತ್ತಿದ್ದವಂತೆ. ತೆಂಗಿನ ಗರಿಗಳಿಗೆ ಆಗುತ್ತಿದ್ದ ನೋವನ್ನು ಸಹಿಸಲಾಗದೆ, ನಮ್ಮ ದೊಡ್ಡಪ್ಪ ಕೋಪಗೊಂಡು ತೆಂಗಿನ ಗರಿಯೊಂದಕ್ಕೆ ಕಲ್ಲು ಕಟ್ಟಿದ್ದರಂತೆ. ಪಂಚನಹಳ್ಳಿಯ ಕಡೆಯಿಂದ ಬಂದ ಗಜಾನನ ಎನ್ನುವ ಬಸ್ಸಿನ ಮುಂಭಾಗದ ಗ್ಲಾಸಿಗೆ ಕಲ್ಲು ಬಡಿದು ಗ್ಲಾಸು ಕ್ಷಣಾರ್ಧದಲ್ಲಿ ಪುಡಿಪುಡಿಯಾಯಿತಂತೆ. ನಮ್ಮ ದೊಡ್ಡಪ್ಪ ಅಲ್ಲಿಂದ ಮಿಂಚಿನ ವೇಗದಲ್ಲಿ ಪರಾರಿಯಾಗಿ ಹೋದರಂತೆ. ಆದರೆ ಅಪ್ಪಾಜಿಯವರು ಬಸ್ಸಿನವರ ಕೈಗೆ ಸಿಕ್ಕು ಅವರಿಂದ ಒಂದೆರಡು ಒದೆಯನ್ನು ತಿಂದಿದ್ದರಂತೆ. ಅದೂ ಅಲ್ಲದೇ ಬಸ್ಸಿನವರು ಅಪ್ಪಾಜಿಯವರನ್ನು ಬಸ್ಸಿನಲ್ಲಿ ಕೂರಿಸಿಕೊಂಡು ಹೋಗಿ ನಮ್ಮೂರಿನಿಂದ ನಾಲ್ಕು ಕೀಲೋಮೀಟರು ದೂರದಲ್ಲಿರುವ ಬಿದರೆ ಗುಡ್ಡದ ಹತ್ತಿರ ಬಿಟ್ಟು ಹೋಗಿದ್ದರಂತೆ!
*************************
ನಾನು ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ಓದುತ್ತಾ ಇದ್ದೆ. ಮನೆಯ ಖರ್ಚು, ನನ್ನ ಓದಿನ ಖರ್ಚು ಹಾಗೂ ಇನ್ನಿತರೆ ಖರ್ಚುಗಳು ಅಪ್ಪಾಜಿಯವರಿಗೆ ಸ್ಪಲ್ಪ ಹೊರೆಯಾಗಿದ್ದವು. ಅಲ್ಲದೆ ಅವರಿಗೆ ಪಿತ್ರಾರ್ಜಿತವಾಗಿ ಬಂದದ್ದು ಕಣ್ಣ ಅಳತೆಯಲ್ಲೇ ಅಳೆಯ ಬಹುದಾದಷ್ಟು ಆಸ್ತಿ. ಆದರೆ ಇದರ ಬಗ್ಗೆ ಅರೆಕ್ಷಣ ಯೋಚಿಸುತ್ತಾ ಕುಳಿತವರಲ್ಲ. ಅವರಲ್ಲಿದ್ದ ಮುಗ್ಧ ಉತ್ಸಾಹ ಹಾಗೂ ಗಾಢ ಅಲೋಚನಾ ಲಹರಿಯ ಪರಿಣಾಮವಾಗಿ ಎಲ್ಲವನ್ನೂ ಬಹಳ ಚಾಕಚಕ್ಯತೆಯಿಂದ ನಿಭಾಯಿಸುತ್ತಿದ್ದರು. ಅದೇ ಸಮಯದಲ್ಲಿ ಅಪ್ಪಾಜಿಯವರು ನಮ್ಮ ಜಮೀನಿನ ಪಕ್ಕದಲ್ಲಿ ಒಂದಿಷ್ಟು ಹೊಸ ಜಮೀನನ್ನು ಖರೀದಿಸಿದರು. ಆಳುಗಳ ಸಹಾಯದಿಂದ ಅದರ ಸುತ್ತಲೂ ತಂತಿ ಕಂಬ ಹಾಕಿಸಿ, ತೆಂಗಿನಸಸಿಗಳನ್ನು ನೆಡಿಸಿದರು. ಅಮ್ಮನಿಗೆ ಇದು ಎಳ್ಳಷ್ಟೂ ಇಷ್ಟವಾಗದೇ ಅಪ್ಪಾಜಿಯವರ ಜೊತೆ ಜಗಳ ಮಾಡಿಕೊಂಡಿದ್ದರು. ಎಷ್ಟೋ ಸಾರಿ ಆಳುಗಳು ಕೆಲಸಕ್ಕೆ ಬರುತ್ತೇವೆ ಎಂದು ಹೇಳಿ ಕೈಕೊಡುತ್ತಿದ್ದಂತಹ ಸಮಯದಲ್ಲಿ ಅಮ್ಮ,, ಅಪ್ಪಾಜಿ ಇಬ್ಬರೂ ಸೇರಿ ಕೆರೆಯಿಂದ ನೀರನ್ನು ಹೊತ್ತುತಂದು ತೆಂಗಿನ ಸಸಿಗಳಿಗೆ ಹಾಕುತ್ತಿದ್ದರು. ಅವರ ಒಂದು ಅವಿರತ ಪರಿಶ್ರಮದ ಫಲವಾಗಿ ಐದಾರು ವರುಷಗಳಲ್ಲಿ ತೆಂಗಿನ ಸಸಿಗಳು ಫಲಕೊಡಲು ಆರಂಭಿಸಿದವು.

*************************
ಮದುವೆ ಇಲ್ಲವೇ ಇನ್ನಿತರ ಶುಭ ಸಮಾರಂಭಗಳಿಗೆ ಆಹ್ವಾನ ಬಂದಾಗಲೆಲ್ಲ ಅಪ್ಪಾಜಿಯವರು ಹೋಗುತ್ತಿದ್ದದ್ದು ತೀರ ಕಡಿಮೆ. ಆದರೆ ಅಮ್ಮ ಯಾವ ಸಮಾರಂಭಗಳಿಗೆ ತಪ್ಪಿಸದೆ ಹೋಗುತ್ತಿದ್ದರು. ಅಮ್ಮ ಮನೆಯಲ್ಲಿ ಇರದ ಸಂದರ್ಭದಲ್ಲಿ ಅಡುಗೆ ಮನೆಯ ಉಸ್ತುವಾರಿಯನ್ನು ಅನ್ಯಮಾರ್ಗವಿಲ್ಲದೇ ಅಪ್ಪಾಜಿಯವರೇ ವಹಿಸಿಕೊಳ್ಳಬೇಕಾಗಿತ್ತು.ಅಪ್ಪಾಜಿಯವರಿಗೆ ಮಾಡಲು ಬರುತ್ತಿದ್ದ ಅಡುಗೆ ಒಂದೇ ಒಂದು ಅದು ಉಪ್ಪಿಟ್ಟು! ಬೆಳಗಿನ ತಿಂಡಿಗೆಂದು ಮಾಡಿದ ಉಪ್ಪಿಟ್ಟುನ್ನು ಮಧ್ಯಾಹ್ನದ ಊಟಕ್ಕೂ ಅದನ್ನೇ ತಿನ್ನಬೇಕಾಗಿತ್ತು.ರಾತ್ರಿ ಊಟಕ್ಕೆ ಅನ್ನ ಮಾಡುತ್ತಿದ್ದರು ಅವರಿಗೆ ಸಂಬಾರು ಮಾಡಲು ಬರುತ್ತಿರಲ್ಲಿಲ್ಲವಾದ್ದರಿಂದ ಅನ್ನಕ್ಕೆ ಕಲಸಿಕೊಳ್ಳಲು ಮೊಸರೇ ಗತಿಯಾಗಿರುತ್ತಿತ್ತು, ಅದರ ಜೊತೆಗೆ ಉಪ್ಪಿನಕಾಯಿ ನೆಂಚಿಕೆಗೆ ಇರುತ್ತಿತ್ತು. ಅಮ್ಮ ಏನಾದರೂ ದೀರ್ಘ ದಿನಗಳ ಕಾಲ ನೆಂಟರ ಊರುಗಳಿಗೆ ಪ್ರವಾಸ ಹೋದರೆ ಅಪ್ಪಾಜಿಯವರು ತಮ್ಮ ಅಡುಗೆ ಮಾಡುವ ಕೆಲಸಕ್ಕೆ ತೀಲಾಂಜಲಿಯನ್ನು ಇಟ್ಟು. ಬೆಳಗಿನ ತಿಂಡಿಗೆಂದು ನಮ್ಮೂರ ಪಕ್ಕದ ಬಿದರೆಯ ನಟರಾಜ್ ಅಣ್ಣನ ಹೋಟೆಲಿನಿಂದ ಬಿಸಿ ಬಿಸಿ ಇಡ್ಲಿ ತರುತ್ತಿದ್ದರು. ಆ ದಿನಗಳಲ್ಲಿ ಹತ್ತು ರೂಪಾಯಿಗಳಲ್ಲಿ ಅಪ್ಪಾಜಿ, ನಾನು ಹಾಗೂ ಶೀಲಾ ಮೂವರು ತಿಂದರೂ ಇನ್ನೂ ಮಿಗುವಷ್ಟು ಇಡ್ಲಿ ಬರುತ್ತಿದ್ದವು. ಒಮ್ಮೊಮ್ಮೆ ರಾತ್ರಿಯ ವೇಳೆಯ ಊಟಕ್ಕೆ ಮೊದಲನೇ ದೊಡ್ಡಪ್ಪನವರ ಮನೆಗೆ ಹೋಗುತ್ತಿದ್ವಿ. ನಮ್ಮ ದೊಡ್ಡಮ್ಮನ ಕೈಯಿಯ ಬಹಳ ಖಾರವಾದ ಸಂಬಾರಿನ ಸವಿಯನ್ನು ಸವಿದು ಬರುತ್ತಿದ್ದೇವು/ (ಮುಂದುವರೆಯುವುದು.....).

-ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಸೋಮವಾರ, ಜನವರಿ 5, 2009

ಈ ಹೊಸದಾದ ವರುಷ│ ಪ್ರತಿ ಕ್ಷಣ ಪ್ರತಿ ನಿಮಿಷ│

ನಮ್ಮ ಕಂಪನಿಯಲ್ಲಿ 15 ದಿನಗಳ ಕಾಲ ರಜೆ ಇದ್ದರಿಂದ ನನ್ನೂರಿಗೆ ಹೋಗಿದ್ದ ಕಾರಣ ನಿಮಗೆ ಹೊಸ ವರುಷದ ಶುಭಾಶಯ ತಿಳಿಸಲು ಆಗಿರಲಿಲ್ಲ. ನಿಮ್ಮೆಲ್ಲರಿಗೂ ಹೊಸ ವರುಷದ ಶುಭಾಶಯ ತಿಳಿಸುವ ಸಲುವಾಗಿ ಒಂದೆರಡು ಕವನ ಬರೆದಿರುವೆನು. ಒಮ್ಮೆ ಓದಿರಿ.
ಹೊಸ ವರುಷಕ್ಕೆರಡು ಕವನಗಳು, ಕವನ ೧


ಈ ಹೊಸದಾದ ವರುಷ│ ಪ್ರತಿ ಕ್ಷಣ ಪ್ರತಿ ನಿಮಿಷ│
ಎಲ್ಲರ ಬಾಳಲಿ ತರಲಿ ತುಂಬು ಹರುಷ│

ಈ ದಿನದಿಂದ│ ಈ ಕ್ಷಣದಿಂದ│
ಮುಖದಲಿ ಸದಾ ಬೀರುತಾ ಸಂತಸ│
ಬದುಕಲಿ ಸದಾ ತೋರುತಾ ಸೊಗಸ│

ಇರುವೆಡೆಯೆಲ್ಲ ನಾವ್ ಹಂಚುತಾ ಉಲ್ಲಾಸ│
ಧರೆಯ ಆಗಿಸೋಣ ನವಿರು ಕಳೆಯ ನಿವಾಸ│
ಅದ ನೋಡಿ ಬೆಕ್ಕಸ ಬೆರಗು ಆಗಲಿ ಆ ಕೈಲಾಸ!

ಹೀಗೆ ಮೂಡಿಬಂದ ಮುಗುಳ್ನಗೆ│
ನಾಂದಿಯಾಗಲಿ ಹೊಸ ಬಗೆಯ ಗೆಲುವಿಗೆ│
ಔಷದವಾಗಲಿ ಒಳಮನದ ನೋವಿಗೆ│
ಅರಳಿಸಲಿ ಹೊಸಬಯಕೆಗಳ ಮಲ್ಲಿಗೆ│

-ನಿಮ್ಮ ಸುನಿಲ್ ಮಲ್ಲೇನಹಳ್ಳಿ
(ಚಿತ್ರಕೃಪೆ http://www.shubhashaya.com)

ಬನ್ನಿ ಗೆಳೆಯರೇ ಬನ್ನಿ

ಬನ್ನಿ ಗೆಳೆಯರೇ ಬನ್ನಿ
ಎಲ್ಲರೂ ಒಂದುಗೂಡಿ ಬನ್ನಿ│
ನಾವು ನೀವೆಲ್ಲರೂ ಸೇರಿ
ನಮ್ಮೊಳಗಿನ ಚೈತನ್ಯ ಚಿಲುಮೆ ಹರಿಸಿ│
ಆಚರಿಸುವ ಹೊಸ ವರುಷವ│
ಸಂಭ್ರಮಿಸಿ ಸವಿಯುವ ನವ ಹರುಷವ│

ಹಿಂದಣದ ಕಹಿಯನು
ಮರೆವಿನ ಹಾದಿಯಲ್ಲೇ ಮರೆತು│
ಮುಂದಣದ ಏಳಿಗೆಯ ಹಾದಿಯನು
ಮರೆಯದ ಮನದಿಂದ ನೆನೆದು│
ಒಬ್ಬರನೊಬ್ಬರು ಅಂತರಾಳದಿಂದ ಅರಿತು│
ಸಂತಸದ ಸವಿ ಸೊದೆಯಲಿ ಬೆರೆತು│

ನಮ್ಮೆಲ್ಲರ ಭವಿಷ್ಯದ ಹಾಡಿಗೆ ಬೆಳಕಾಗುವ ರಸ ಕವಿತೆಯೊಂದು
ರಚಿಸುತಾ ಕಣಿದು ಕುಣಿದು ಹಾಡುವ ಬನ್ನಿ!
- ನಿಮ್ಮ ಸುನಿಲ್ ಮಲ್ಲೇನಹಳ್ಳಿ