ಗುರುವಾರ, ಆಗಸ್ಟ್ 28, 2014

ಗೌರಿ-ಗಣೇಶ ಹಬ್ಬದಾಚರಣೆಯ ನೆನಪು

ನೆನಪಿನ ಅಂಗಳದಲ್ಲಿ ಹಾಗೆ ಹತ್ತಾರು ಮೆಟ್ಟಿಲು ಕೆಳಗಿಳಿದು ಬಾಲ್ಯದ ಘಟನಾವಳಿಯ ಕೋಣೆಯನು ಹೊಕ್ಕು ಅಲ್ಲಿ ನಮ್ಮೂರ ಜನರು ಪ್ರತಿವರ್ಷವು ಅಪರಿಮಿತ ಉತ್ಸಾಹ, ಅನನ್ಯ ಭಕ್ತಿ, ಶ್ರದ್ಧೆಗಳಿಂದ ಆಚರಿಸುತ್ತಿದ್ದ ಗೌರಿ-ಗಣೇಶ ಹಬ್ಬದ ಆಚರಣೆಯ ದೃಶ್ಯಾವಳಿಯ ಏಳೆಯನ್ನು ಹಾಗೆಯೇ ಬಿಚ್ಚುತ್ತಾಹೋದರೆ ಹಿರಿಮೆವುಳ್ಳ ಚಿತ್ರಣಗಳ ಸರಮಾಲೆ ನನ್ನ ಕಣ್ಮುಂದೆ ಬರುತ್ತದೆ. ಅಂದಿನ ದಿನಗಳಲ್ಲಿ ನಮ್ಮೂರ ಜನರು ಗಣೇಶ ಚತುರ್ಥಿಯ ಆಗಮನಕ್ಕೂ ಮುನ್ನಾ ಒಂದು ಸಮಿತಿಯನ್ನು ರಚಿಸಿ, ಆ ಸಮಿತಿಯ ಮೂಲಕ ಆಚರಣೆಯ ನಿಮಿತ್ತವಾಗಿ ಬೇಕಾದ ತಕ್ಕ ಕಾರ್ಯ-ಯೋಜನೆಗಳನ್ನು ಕೈಗೆತ್ತಿಕೊಂಡು ಅದರಂತೆ ಸಮಿತಿಯ ಕೆಲ ಸದಸ್ಯರುಗಳು ಮಂಟಪ, ಚಪ್ಪರ ಕಟ್ಟುವುದರಲ್ಲಿ, ಕೆಲವರು ನಾಟಕ, ಸಾಂಸ್ಕೃತಿಕ ಅಭ್ಯಾಸದಲ್ಲಿ, ಮತ್ತೆ ಕೆಲವರು ಇನ್ನುಳಿದ ಕೆಲಸಗಳ ಜವಾಬ್ದಾರಿಯನ್ನು ವಹಿಸಿಕೊಂಡು ಮುತುವರ್ಜಿ ಮಾಡಿಬಿಡುತ್ತಿದ್ದರು.

ಚಿಕ್ಕವರಾದ್ದರಿಂದ ಆಚರಣೆಗೆ ಸಂಬಂಧಿಸಿದ ಯಾವುದೇ ಜವಾಬ್ದಾರಿಯಿಲ್ಲದೆ ಮುಕ್ತರಾಗಿ ಇರುತ್ತಿದ್ದ ನಾನು ಮತ್ತು ನನ್ನ ಸಂಗಡಿಗರೆಲ್ಲ ಮಂಟಪ-ಚಪ್ಪರ ಕಟ್ಟುವುದನ್ನು, ನಾಟಕ ಅಭ್ಯಾಸ ಮಾಡುವುದನ್ನು ಮತ್ತು ಮಾಡುವವರನ್ನು ನೆಟ್ಟ ಮನಸ್ಸಿನಿಂದ ನೋಡುತ್ತಾ ನಿಲ್ಲುವುದೇ ನಮ್ಮ ಕಾಯಕವಾಗಿ ಬಿಟ್ಟಿತ್ತು. ಕೆಲವೊಮ್ಮೆ ನಿಯೋಜಿತ ಸದಸ್ಯರುಗಳು ಕೊಡುತ್ತಿದ್ದ ಚಿಕ್ಕಪುಟ್ಟ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲು ಸಾಧ್ಯವಾದಷ್ಟೂ ಪ್ರಯತ್ನಿಸಿ, ಕೊನೆಯಲ್ಲಿ ಅವರು ಸಂದಾಯ ಮಾಡುತ್ತಿದ್ದ ಹೊಗಳಿಕೆ, ತೆಗಳಿಕೆ ಎಲ್ಲವನ್ನು ಯಾವುದೇ ಪ್ರತ್ಯುತ್ತರ ನೀಡದೆ ಸ್ವೀಕರಿಸುತ್ತಿದ್ದೆವು. ಏಕೆಂದರೆ ಮನದೊಳಗೆ ಪಸರಿಸಿದ ಹಬ್ಬದ ವಾತಾವರಣ ತಂದುಕೊಡುತ್ತಿದ್ದ ಸಂಭ್ರಮ-ಸಡಗರದ ಮುಂದೆ ಇನ್ಯಾವ ವಿಚಾರವೂ ನಮ್ಮ ಪರಿಗಣನೆಗೆ ಎಳ್ಳಷ್ಟು ಬರುತ್ತಿರಲಿಲ್ಲ! ಪ್ರತಿವರ್ಷವೂ ಮಂಟಪ ಹಾಗೂ ಚಪ್ಪರವನ್ನು ಭಿನ್ನ-ವಿಭಿನ್ನ ರೀತಿಯಲ್ಲಿ ಸಿದ್ದಪಡಿಸುತ್ತಿದ್ದ ನಿಯೋಜಿತ ಸದಸ್ಯರು ಮತ್ತು ಅವರಲ್ಲಿ ಒಬ್ಬೊಬ್ಬರಲ್ಲೂ ಇದ್ದ ಒಂದೊಂದು ವಿಶಿಷ್ಟತೆ, ಚಾಣಕ್ಷತೆ ಮತ್ತು ಕೈಚಳಕ ಇವೆಲ್ಲವೂ ಸಮಪ್ರಮಾಣದಲ್ಲಿ ಕೂಡಿ ಒಂದು ಸುಂದರ ಮಂಟಪವಾಗಿ ಸೃಷ್ಟಿ ಪಡೆದು ಗಣೇಶನ ಪೀಠರೋಹಣಕ್ಕೆ ಕಾಯುತ್ತಾ ಇರುತ್ತಿತ್ತು.

ಗಣೇಶ ಹಬ್ಬಕ್ಕೆ ಒಂದೆರಡು ತಿಂಗಳುಗಳ ಮುಂಚಿತವಾಗಿಯೇ ನಮ್ಮೂರ ಶಾಲಾವರಣದಲ್ಲಿ ಪ್ರತಿದಿನ ಸಂಜೆಯಿಂದ ರಾತ್ರಿಯವರೆಗೂ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಭ್ಯಾಸ ಜರಗುತ್ತಾ ಇರುತ್ತಿತ್ತು. ಅಲ್ಲಿ ಸಹಜವಾಗಿ ನಾನು ಮತ್ತು ನನ್ನ ಸಂಗಡಿಗರು ಇಂದೆಂದು ನೋಡಿರದ ಹಾವಭಾವ ತೋರಿಸುವ ಅಭ್ಯಾಸಿಗರು, ಅರ್ಥ-ದ್ವಂದ್ವರ್ಥಗಳಿಂದಾಗಿ ಒಮ್ಮೊಮ್ಮೆ ಒಡೆದು ಮೂಡುತ್ತಿದ್ದ ನಗೆ ಚಟಾಕಿ, ನಾಟಕದ ಮಾಸ್ತರರು ಹೋರ್ಮೊನಿಯಂ ನುಡಿಸುವುದು, ಅಭ್ಯಾಸಿಗರಿಗೆ ಹಾಡನ್ನು ಹೇಳಿಕೊಡುವುದು, ವೀರಗಾಸೆ ಅಭ್ಯಾಸಿಗರ ರಣಘರ್ಜನೆ ಒಟ್ಟಾರೆ ಎಲ್ಲವೂ ಒಂದು ರೀತಿಯ ಹಾಸ್ಯ, ವಿನೋದ, ಮನೋರಂಜನೆಯನ್ನು ನಮಗೆ ತಂದುಕೊಡುತ್ತಿತ್ತು. ಒಂದೊಂದು ದಿನ ಕಾರ್ಯಕ್ರಮಗಳ ಅಭ್ಯಾಸವನ್ನು ನೋಡುತ್ತಾ, ಅಲ್ಲೇ ಮಲಗಿ ಬಿಡುತ್ತಿದ್ದೆವು. ಕೊನೆಯಲ್ಲಿ ಅಭ್ಯಾಸಿಗರು ನಮ್ಮನ್ನು ಎದ್ದೇಳಿಸಿ, ನಮ್ಮ, ನಮ್ಮ ಮನೆಯವರೆಗೂ ಬಂದು ನಮ್ಮನ್ನು ಬಿಟ್ಟುಹೋಗುತ್ತಿದ್ದರು

ಗಣೇಶಮೂರ್ತಿಯ ಪೀಠರೋಹಣ ದಿನದಿಂದ ಆರಂಭಿಸಿ ಗಣೇಶ ಮೂರ್ತಿಯನ್ನು ವಿಸರ್ಜಿಸುವ ದಿನದವರೆಗೂ ಅಂದರೆ ಸುಮಾರು ಹದಿನೈದು ದಿನಗಳ ಕಾಲ ಮಿತಿಯಿಲ್ಲದ ಪುಳಕ, ನಿತ್ಯ ನವನವೀನ ಉತ್ಸಾಹ ನಮ್ಮ ಪಾಲಿಗೆ ಜಮಾವಾಗುತ್ತಿತ್ತು . ಊರಲ್ಲಿ ದೊಡ್ಡ ಗಣೇಶನನ್ನು ಕೂರಿಸುವುದರ ಜೊತೆಗೆ ನಾನು, ನನ್ನ ಸಹಪಾಠಿಗಳು ಸೇರಿದಂತೆ ಬಹುತೇಕ ಹುಡುಗರು ತಮ್ಮ,ತಮ್ಮ ಮನೆಗಳಲ್ಲಿ ಚಿಕ್ಕದಾದ ಮಂಟಪವನ್ನು ಕಟ್ಟಿ, ಚಿಕ್ಕ ಗಣೇಶಮೂರ್ತಿಯನ್ನು ಕೂರಿಸುತ್ತಿದ್ದೆವು. ಒಂದುಸಾರಿ ಗಣೇಶಮೂರ್ತಿ ಅಕ್ಕಪಕ್ಕದ ಊರಲ್ಲಿ ಎಲ್ಲೂ ಸಿಗದೇ, ನಮ್ಮೂರಿಂದ ೧೨ ಕಿಲೋಮೀಟರ್ ದೂರದಲ್ಲಿರುವ ಊರಿಗೆ ಸೈಕಲ್ಲಿನಲ್ಲಿ ಪ್ರಯಾಣಿಸಿ ಗಣೇಶಮೂರ್ತಿಯನ್ನು ಖರೀದಿಸಿ ಬಂದದ್ದುಂಟು!

ಪ್ರತಿದಿನ ಬೆಳಗ್ಗೆ ಎದ್ದು ಮನೆಯಲ್ಲಿನ ಚಿಕ್ಕ ಗಣೇಶನಿಗೆ ಪೂಜೆ, ಪುನಸ್ಕಾರ ಅರ್ಪಿಸಿ, ಶಾಲೆಗೆ ಹೋಗುವ ವೇಳೆಯವರೆಗೂ ದೊಡ್ಡ ಗಣಪತಿಯ ಪೆಂಡಾಲ್ ನಲ್ಲೇ ಕಾಲ ಕಳೆಯುತ್ತಿದ್ದೆವು. ಪುನಃ ಸಂಜೆ ಶಾಲೆಯನ್ನು ಮುಗಿಸಿಕೊಂಡು ಬಂದ ನಂತರವೂ ಓಡೋಡಿ ಹೋಗಿ ಪೆಂಡಾಲ್ ಅನ್ನು ಸೇರಿ ಅಲ್ಲಿ ಆಟವಾಡುತ್ತಿದ್ದೆವು, ಕುಣಿಯುತ್ತಿದೆವು, ಪೂಜೆಯ ವೇಳೆಯಲ್ಲಿ ಕೈಮುಗಿದು ನಿಲ್ಲುತ್ತಿದ್ದೆವು ಮತ್ತು ಸಂಜೆ ಮಹಮಂಗಳಾರತಿಯ ನಂತರ ಕೊಡುವ ಫಲಾಹಾರಕ್ಕೆ ಮುಗಿಬೀಳುತ್ತಿದ್ದೆವು. ಇಷ್ಟೇ ಅಲ್ಲದೇ ಬೆಳಗ್ಗೆ ಹಾಗೂ ಸಂಜೆ ಊರಿನ ಎಲ್ಲ ಮನೆಗಳಿಗೆ ಕೇಳುಸುವಂತೆ ಧ್ವನಿ ವರ್ಧಕದಿಂದ ಮೂಡಿಬರುತ್ತಿದ್ದ ಭಕ್ತಿಗೀತೆಗಳನ್ನೂ ದಿನ-ದಿನ ಆಲಿಸುತ್ತಾ ಇದ್ದೆವು, ಕಾಲಕ್ರಮೇಣ ಕೆಲವು ಭಕ್ತಿಗೀತೆಗಳು ನಮಗೆ ಕಂಠಪಾಠವಾಗಿದ್ದವು. [ಉದಾಹರಣೆಗೆ :೧) ಗಜಮುಖನೇ ಗಣಪತಿಯ ನಿನಗೆ ವಂದನೆ|, ನಂಬಿದವರ ಬಾಳಿನ ಕಲ್ಪತರು ನೀನೇ|, ೨) ಅಷ್ಟ ಗಣಪತಿಯ ಆರಾಧನೆ,ವಿಶಿಷ್ಟ ರೀತಿಯಲ್ಲಿ ಔಪಾಸನೆ|, ೩)ಶರಣು ಶರಣಯ್ಯಾ, ಶರಣು ಬೆನಕ|, ನೀಡಯ್ಯಾ ಬಾಳೆಲ್ಲ ಬೆಳಗುವ ಬೆಳಕ! ೪)ಮೂಷಿಕ ವಾಹನ ಮೋದಕ ಹಸ್ತ, ವಾಮನ ರೂಪ ಮಹೇಶ್ವರ ಪುತ್ರ| ಹೀಗೆ ಇತ್ಯಾದಿ ಭಕ್ತಿ ಗೀತೆಗಳು ನಮ್ಮನ್ನು ಬಹಳವಾಗಿ ಆವರಿಸಿಕೊಂಡಿದ್ದವು ಈಗಲೂ ಅಷ್ಟೇ, ಈ ಮೇಲೆ ಹೆಸರಿಸಿದ ಭಕ್ತಿಗೀತೆಗಳ ಸಾಲು ಶ್ರವಣದ ಅಂಚನ್ನು ತಾಗಿದ ಕ್ಷಣದಲ್ಲಿ ಮೈ-ಮನದಲ್ಲಿ ನವಿರು ಸ್ಪಂದನವಾಗುವುದು], ಎಲ್ಲಿ ಗಣೇಶನಿರುವನೋ ಅಲ್ಲಿ ತಾಯಿ ಗೌರಮ್ಮ ಇರಲೇ ಬೇಕಲ್ಲವೇ? ಹಾಗಾಗಿ ದೊಡ್ಡ ಗಾತ್ರದ ಗಣೇಶಮೂರ್ತಿಯ ಪಕ್ಕದಲ್ಲಿ ಅಂಗೈ ಉದ್ದದ ಗೌರಮ್ಮನ ಮೂರ್ತಿಯುನ್ನು ಸಹ ಕೂರಿಸುತ್ತಿದ್ದರು.

ದಿನಂಪ್ರತಿ ಏನಾದರೂ ಒಂದು ಮನೋರಂಜನೀಯ ಕಾರ್ಯಕ್ರಮವಿರುತ್ತಿತ್ತು ಚಿಕ್ಕ-ಪುಟ್ಟ ನಾಟಕ, ಭಕ್ತಿ ಪ್ರಧಾನ ಚಲನಚಿತ್ರಗಳನ್ನು ಹಾಕುವುದು, ಹೀಗೆ ಇತ್ಯಾದಿ ಕಾರ್ಯಕ್ರಮಗಳು ಇರುತ್ತಿದ್ದವು. ಆದರೆ ಒಂದು ಸ್ವಲ್ಪವೂ ಹೇಳದೇ-ಕೇಳದೆ ಬರುತ್ತಿದ್ದ ಮಳೆ. ಮಳೆಯನ್ನು ಕಂಡು ಯಾರಿವನೆಂದು? ಅದೇಕೋ? ಮೂನಿಸಿಕೊಂಡು ಎರಡು-ಮೂರು ದಿನಗಳಾದರೂ ಬಾರದೆ ಇರುತ್ತಿದ್ದ ವಿದ್ಯುತ್, ಇವೆರಡು ಆ ಸಮಯದಲ್ಲಿ ನಮ್ಮ ದೊಡ್ಡ ಶತ್ರುಗಳಂತೆ ತೋರುತಿದ್ದವು.

ಹೀಗೆ ವಿಜ್ರುಂಬಣೆಯಿಂದ ನಡೆಯುತ್ತಿತ್ತು ಹಬ್ಬದ ಆಚರಣೆ ನಮ್ಮ ಊರಿನಲ್ಲಿ ಎಂದು ಹೇಳಲು ಕುಶಿಯಾಗುತ್ತದೆ. ಆ ಸಡಗರ ಈಗ ನೆನೆಸಿಕಂಡರೂ ಮನಸ್ಸಿಗೆ ಮುದನೀಡುತ್ತದೆ. ಹಬ್ಬದ ಈ ಸಂಬ್ರಮ-ಸಡಗರ ನಾಡಿನಲ್ಲಿ ಯಾವಾಗಲೂ ಹೀಗೆ ಇರಲಿ. ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಸಿಹಿ ಹಾರೈಕೆಗಳು!

ದಿನಾಂಕ ೨೬-ಆಗಸ್ಟು-೨೦೧೪ - ಸುನಿಲ್ ಮಲ್ಲೇನಹಳ್ಳಿ
ಸ್ಥಳ: ಸಂತ ಕ್ಲಾರ

(ಚಿತ್ರಕೃಪೆ: http://www.polyvore.com)

ಕಾಮೆಂಟ್‌ಗಳಿಲ್ಲ: