ಬುಧವಾರ, ಡಿಸೆಂಬರ್ 17, 2008

ಓ ಮೌನವೇ ನೀ ಮಾತಾಡು│


ಓ ಮೌನವೇ ನೀ ಮಾತಾಡು│
ಓ ಮೌನವೇ ನೀ ಮಾತಾಡು│
ಹೊಳಪು ತುಂಬಿದ ಕಣ್ಣಲೇ
ನೀ ನನ್ನ ಕೊಲ್ಲುವುದ ಸಾಕು ಮಾಡು│
ಓ ಮೌನವೇ ನೀ ಮಾತಾಡು│

ತೆರೆದು ನಿನ್ನ ತುಟಿಯಂಚು│
ಮಾತಾಗಲಿ ನಿನ್ನ ಮೌನ│ಹಾಡಾಗಲಿ ನಿನ್ನ ಮಾತು│
ಆ ಹಾಡಲಿ ನನ್ನೆಡೆಗೆ ಒಲವಿನ ಭಾವ ಇರಲಿ│
ಪ್ರೀತಿ ಪ್ರಣಯದ ರಾಗವಿರಲಿ│
ಎಲ್ಲರೆದುರು ಆ ಹಾಡ ಗೆಳತಿ ಮನಬಿಚ್ಚಿ ನೀ ಹಾಡು│
ಕೇಳಿ ಆ ನಿನ್ನ ಹಾಡು ಮೆಚ್ಚಲಿ ನಾಡು│
ನನ್ನೆದೆಯ ಮರುಭೂಮಿಯಾಗಲಿ ಹಸಿರು ಕಾಡು│

ಓ ಗೆಳತಿ ಹೇಳು.. ಗುಟ್ಟಾಗಿ ನನಗೆ ಹೇಳು
ಎಂದು ತೊರೆಯುವೆ ಆ ನಿನ್ನ ಮೌನ?
ಎಂದು ಹಾಡಾಗುವುದು ಆ ನಿನ್ನ ಮಾತು?
ಇದನು ನೀ ಹೇಳುವವರೆಗೂ ನೆಮ್ಮದಿಯಾಗಿ
ನಿದ್ರಿಸೆನು ನಾನಂತು!
(ಚಿತ್ರಕೃಪೆ www.canvaspaintingindia.com)

ಬುಧವಾರ, ಡಿಸೆಂಬರ್ 10, 2008

ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ)


(ಮುಂಬಯಿ ನಗರಿಯಲ್ಲಿ ನವೆಂಬರ್ 26, 2008 ರಂದು ಉಗ್ರಗಾಮಿಗಳಿಂದ ನೆಡೆದ ದುಷ್ಕೃತ್ಯದಲ್ಲಿ ಅಸುನೀಗಿದ ನಮ್ಮ ವೀರಯೋಧರಿಗೆ, ಅಮಾಯಕ ನಾಗರೀಕರಿಗೆ ನಾ ಬರೆದ ಈ ಲೇಖನ ಹಾಗೂ ಕವನ ಹೃದಯಪೂರ್ವಕವಾಗಿ ಅರ್ಪಣೆ -ನಿಮ್ಮ ಸುನಿಲ್ ಮಲ್ಲೇನಹಳ್ಳಿ). ಒಮ್ಮೆ ಓದಲು ಮರೆಯದಿರಿ.
ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ)

ಓ ಭಯೋತ್ಪಾದಕನೇ..
ನಿಲ್ಲು ನಿಲ್ಲು ನನ್ನ ಕಂಡು
ಏಕೆ ನೀ ಕಂಗೆಟ್ಟು ಓಡುತ್ತಿರುವೇ? ನಿಲ್ಲು

ಓ ಭಯೋತ್ಪಾದಕ ನಾನಲ್ಲ ನಿನ್ನ ಪಾಲಿನ ಅಂತಕ
ನಾ ಭಾರತ ಮಾತೆಯ ಮಡಿಲ ಎಳೆಯ ಬಾಲಕ
ಅವಳ ಸೇವೆಯೇ ನನ್ನ ಪಾಲಿಗೆ ಒಲಿದಿರುವ ಕಾಯಕ

ನಾ ನಿನ್ನಲಿಗೆ ಬಂದಿರುವೆ ಕೇಳಲೆಂದು ನಿನಗೆ ಹಲವು ಪ್ರಶ್ನೆ
ಮಾಡದೆ ನನಗೆ ಹಿಂಸೆ ಬಗೆ ಹರಿಸುವೆಯಾ ನನ್ನಯ ಪ್ರಶ್ನೆ?

ಓ ಭಯೋತ್ಪಾದಕನೇ..
ಜಗದಲಿ ಅಮಾಯಕ ಜನರ ನೀ ಏಕೆ ಕೊಲ್ಲುವೇ?
ಇದಕ್ಕೆಲ್ಲ ನಿನಗೆ ಯಾರು ಅಂತಹ ಪ್ರೇರಣೆ?
ಪ್ರೇರಣೆ ಯಾರಾದರೇನು? ಜಗದಲಿ ನೆಡೆವ
ವಿದ್ವಂಸಕ ಕೃತ್ಯಗಳಿಗೆಲ್ಲ ನೀನ್ ತಾನೆ ನೇರ ಹೊಣೆ?


ಓ ಭಯೋತ್ಪಾದಕನೇ..
ಬುದ್ದಿ ಮಾತೊಂದು ನಾ ಹೇಳುವೆ ನೀ ಕೇಳು ಸುಮ್ಮನೆ
ಮನುಜನೇ ನೀ ಆದರೆ ಒಮ್ಮೆ ಮಾಡಿ ಸರಿ ಯೋಚನೆ
ಈ ಭಯೋತ್ಪಾದನೆಯ ಇಂದಿಗೆ ನೀ ಮಾಡು ಕೊನೆ
ಧರೆಯನು ಆಗಲು ಬಿಡು ಶಾಂತಿ ತುಂಬಿದ ಮನೆ

ಓ ಭಯೋತ್ಪಾದಕನೇ..
ನೀ ಕೇಳದೆ ಹೋದರೆ ನನ್ನ ಮಾತು..
ನಾ ಆದ ಮೇಲೆ ಯುವಕ ತೊಟ್ಟು ಶಾಂತಿ ದ್ಯೋತಕ
ಆಗಲಿರುವೆನು ಮಾನವೀಯತೆಯ ಪೊರೆವ ಸೇವಕ
ಕಣ್ಣಾರೆ ಕಂಡು ನೀ ಮಾಡುತ್ತಿರುವ ಹೀನ ಕಾಯಕ
ಆಗಲಿರುವೆನು ನಿನಗೆ ನೀತಿಪಾಠವ ಕಲಿಸುವ ಸೈನಿಕ
ಭೂವಿಯಲಿ ಎಲ್ಲೆಡೆ ಮಾಡಿ ಅಹಿಂಸೆಯ ಸಂಗ್ರಾಮ
ಭಯೋತ್ಪಾದನೆಗೆ ನಾ ಇರಿಸುವೆನು ಪೂರ್ಣವಿರಾಮ!

- ಸುನಿಲ್ ಮಲ್ಲೇನಹಳ್ಳಿ

ಅಬ್ಬಾ! ಭಾರತದಲ್ಲಿ ಜನ ಅದು ಹೇಗೆ ವಾಸ ಮಾಡುತ್ತಾರೆ?


ಅಬ್ಬಾ! ಭಾರತದಲ್ಲಿ ಜನ ಅದು ಹೇಗೆ ವಾಸ ಮಾಡುತ್ತಾರೆ?

(ಮುಂಬಯಿ ನಗರಿಯಲ್ಲಿ ನವೆಂಬರ್ 26, 2008 ರಂದು ಉಗ್ರಗಾಮಿಗಳಿಂದ ನೆಡೆದ ದುಷ್ಕೃತ್ಯದಲ್ಲಿ ಅಸುನೀಗಿದ ನಮ್ಮ ವೀರಯೋಧರಿಗೆ, ಅಮಾಯಕ ನಾಗರೀಕರಿಗೆ ನಾ ಬರೆದ ಈ ಲೇಖನ ಹಾಗೂ ಕವನ ಹೃದಯಪೂರ್ವಕವಾಗಿ ಅರ್ಪಣೆ -ನಿಮ್ಮ ಸುನಿಲ್ ಮಲ್ಲೇನಹಳ್ಳಿ). ಒಮ್ಮೆ ಓದಲು ಮರೆಯದಿರಿ.

ನಾನು ನಾಲ್ಕನೇ ತರಗತಿ ಓದುತ್ತಿರುವಾಗಿನಿಂದಲೇ ನಮ್ಮೂರಲ್ಲಿ ತರಿಸುತ್ತಿದ್ದ ಪ್ರಜಾವಾಣಿ ದಿನಪತ್ರಿಕೆಯನ್ನು ಪ್ರತಿನಿತ್ಯ ತಪ್ಪಿಸದೆ ಓದುತ್ತಿದೆ. ಆಗ ಪತ್ರಿಕೆಯ ಮುಖಪುಟದಲ್ಲಿ ಬರುತ್ತಿದ್ದ ಪ್ರಮುಖ ವಿಷಯಗಳಾದ, ಶ್ರೀಲಂಕಾದಲ್ಲಿ ಎಲ್.ಟಿ.ಟಿ.ಇ ಹಾಗೂ ಸೇನೆ ನಡುವೆ ಭೀಕರ ಕದನ ಇನ್ನೂರಕ್ಕು ಹೆಚ್ಚು ಸಾವು, ಪಾಕಿಸ್ತಾನದಲ್ಲಿ ಭೀಕರ ಬಾಂಬ್ ಸ್ಫೋಟ ನೂರ ಜನರ ಸಾವು ಈ ರೀತಿಯ ಇನ್ನೂ ಹತ್ತು ಹಲವಾರು ವಿಷಯಗಳನ್ನು ಓದಿದ ಆ ಕ್ಷಣದಲ್ಲಿ “ಅಬ್ಬಾ! ಆ ದೇಶಗಳಲ್ಲಿ ಜನ ಅದು ಹೇಗೆ ವಾಸ ಮಾಡುತ್ತಾರೆ?” ಎನ್ನುವ ಭಯ ಆವರಿಸಿದ ಚಿಂತನೆಯಲ್ಲಿ ನಾನು ಮುಳುಗಿಬಿಡುತ್ತಿದ್ದೆ.

ಆದರೆ ಮೊನ್ನೆ ಅಂದರೆ ನವೆಂಬರ್-26 ರಂದು ಮುಂಬಯಿ ಮಹಾನಗರಿಯಲ್ಲಿ ಉಗ್ರರಿಂದ ನೆಡೆಯಲ್ಪಟ್ಟ ರಕ್ತಸಿಕ್ತ ಕೃತ್ಯಕ್ಕೆ ಬರಿ ಭಾರತ ದೇಶವಲ್ಲದೆ ಇಡಿ ಮನುಕುಲ ಜಗತ್ತೆ ಮಮ್ಮಲು ಮರುಗಿತು. ಈವರೆಗೆ ವಿಶ್ವದಲ್ಲಿ ನೆಡೆದು ಹೋಗಿರುವ ಸಾವಿರಾರು ಮಾನವೀಯತೆಗೆ ಕಳಂಕ ತಂದಿರುವ ಘಟನೆಗಳ ಸಾಲಿಗೆ ನವೆಂಬರ್ 26ರ ಘಟನೆಯೂ ಸೇರಿ ಹೋಯಿತು.

ಈವೊಂದು ಸಂದರ್ಭದಲ್ಲಿ ವಿಶ್ವದ ಇನ್ನಿತರ ದೇಶಗಳ ಜನರುಗಳು, “ಅಬ್ಬಾ ಭಾರತದಲ್ಲಿ ಜನ ಅದು ಹೇಗೆ ವಾಸ ಮಾಡುತ್ತಾರೆ?” ಎಂದು ನಾನು ಚಿಕ್ಕಂದಿನಲ್ಲಿ ಶ್ರೀಲಂಕಾ, ಪಾಕಿಸ್ತಾನಗಳ ಜನರ ಬಗ್ಗೆ ಯೋಚಿಸಿದ ರೀತಿ ಈಗ ಅವರುಗಳು ನಮ್ಮ ಭಾರತದ ಜನರ ಕುರಿತು ಯೋಚಿಸುತ್ತಿರುತ್ತಾರೆ.

ನಮ್ಮ ದೇಶ 1947ರಲ್ಲಿ ಸ್ವಾತಂತ್ರಗಳಿಸಿಕೊಂಡ ನಂತರದಿಂದ ಕಾಶ್ಮೀರದಲ್ಲಿ ಆಗಾಗ ಉಗ್ರರಿಂದ ನೆಡೆಯುತ್ತಿರುವ ಮರಣಹೋಮದ ಘಟನೆಗಳನ್ನು ಬಿಟ್ಟು ಮಿಕ್ಕೆಲ್ಲ ರಾಜ್ಯಗಳಲ್ಲಿ ಉಗ್ರರಿಂದ ಅಂತಹ ಅಘಾತಕಾರಿ ಸನ್ನಿವೇಶಗಳು ನೆಡೆದದ್ದು ಬಲುವಿರಳ. ಆದರೆ 1993ರಲ್ಲಿ ಮುಂಬಯಿಯಲ್ಲಿ ಆದ ಸರಣಿ ಬಾಂಬ್ ಸ್ಫೋಟದ ನಂತರ ದಿನಗಳಲ್ಲಿ ಭಾರತದ ಬಹುತೇಕ ನಗರ ಪ್ರದೇಶಗಳು ಬದುಕಲು ಒಂದು ನೆಮ್ಮದಿಯ ತಾಣವಾಗಿ ಉಳಿದಿವೆಯೇ? ಎನ್ನುವ ಪ್ರಶ್ನೆಗೆ, ಇಲ್ಲ ಎನ್ನುವುದೊಂದೆ ಇರುವ ಪ್ರಮಾಣಿಕ ಉತ್ತರ. ಕನಿಷ್ಟ ಪಕ್ಷ ವರುಷಕ್ಕೆ ಮೂರು-ನಾಲ್ಕು ಹೃದಯ ವಿದ್ರಾವಕ ಘಟನೆಗಳು ಉಗ್ರರಿಂದ ಮುಂಬಯಿ, ದೆಹಲಿ, ಬೆಂಗಳೂರು ಅಹಮದಬಾದ್‌ಗಳಂತಹ ನಗರಗಳಲ್ಲಿ ನೆಡೆಯುತ್ತಲೇ ಇರುತ್ತವೆ.

ಇದಕ್ಕೆ ಪೂರಕವಾಗಿ 2007-2008ರಲ್ಲಿ ಭಾರತದಲ್ಲಿ ನೆಡೆದಿರುವ ಮಾರಕ ಘಟನೆಗಳು ಒಂದಾ-ಎರಡಾ? ದೆಹಲಿಯಲ್ಲಿ ಬಾಂಬ್ ಸ್ಪೋಟ ಐವತ್ತಕ್ಕೂ ಹೆಚ್ಚು ಸಾವು, ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಮೇಲೆ ದಾಳಿ, ಮತ್ತೆ ಅದೇ ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಪೋಟ, ಅಹಮದಬಾದ್‌ನಲ್ಲಿ ಬಾಂಬ್ ಸ್ಪೋಟ, ಮತಾಂತರದ ಗಲಭೆ, ನಕ್ಸಲರ ಗಲಭೆ, ಕಾಶ್ಮೀರದಲ್ಲಂತೂ ನಮಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ಅಮಾಯಕ ಜನರ ಮರಣಹೋಮ ನೆಡೆಯುತ್ತಲೇ ಇರುತ್ತದೆ.. ಈಗ ಮುಂಬಯಿಯಲ್ಲಿ 2೦೦ಕ್ಕೂ ಹೆಚ್ಚು ಅಮಾಯಕ ಜನರ ರಕ್ತದೊಕುಳಿ ಹರಿಸಿದ್ದಾರೆ ಉಗ್ರರು..ಹೀಗೆ ಹೇಳುತ್ತಾ ಹೋದರೆ ಇನ್ನೂ ಬಹಳಷ್ಟಿವೆ.

ನಮ್ಮ ಬಡಭಾರತವು ಮೊದಲೇ ಒಂದು ಅಭಿವೃದ್ಧಿಶೀಲ ರಾಷ್ಟ್ರ, ಉಗ್ರಗಾಮಿಗಳು ಹೀಗೆ ಸಾಲು ಸಾಲು ಹೀನಕೃತ್ಯಗಳನ್ನು ನೆಡೆಸುತ್ತಾ ಹೋದರೆ, ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಯಾವ ಅಂತಕ್ಕೆ ಬರಬಹುದು? ನೀವೇ ಯೋಚಿಸಿ? ಮೊನ್ನೆಯ ಘಟನೆಯಲ್ಲಿ ಬರಿ ಹತ್ತು ಜನ ಉಗ್ರರಿಂದ ಉಂಟಾದ ಜೀವ ನಷ್ಟ ಹತ್ತಿರ ಹತ್ತಿರ ಇನ್ನೂರು, ಉಂಟಾದ ಆರ್ಥಿಕ ನಷ್ಟ ಸುಮಾರು ನಾಲ್ಕು ಸಾವಿರ ಕೋಟಿಗಳು. ಅಂದರೆ ಕೇವಲ ಮೂರು ದಿನಗಳಲ್ಲಿ ಆದ ನಷ್ಟ ನಮ್ಮ ದೇಶದ ರಕ್ಷಣಾ ವೆಚ್ಚದ ಹತ್ತನೇಯ ಒಂದು ಪಾಲು (1/1೦).

ನಮ್ಮ ಕೇಂದ್ರ ಹಾಗೂ ನಮ್ಮ ನಮ್ಮ ರಾಜ್ಯ ಸರಕಾರಗಳ ಅಸಡ್ಡೆತನವನ್ನು ಕಂಡು ನಗಬೇಕೋ? ಇಲ್ಲವೇ ಅಳಬೇಕೋ? ಒಂದು ತಿಳಿಯದು. ಇಂತಹ ಈ ಹೇಯ ಘಟನೆಗಳು ನೆಡೆದ ಮುರುಕ್ಷಣದಲ್ಲೇ ಉಗ್ರಗಾಮಿಗಳಿಗೆ ಹಾಗೆ ಮಾಡುತ್ತೇವೆ..ಹೀಗೆ ಮಾಡುತ್ತೇವೆ ಎನ್ನುವ ಪೊಳ್ಳು ಅಶ್ವಾಸನೆಯನ್ನು ನಮ್ಮ ಸರಕಾರ ಕೊಡುವುದು ಸರ್ವೇಸಾಮಾನ್ಯ. ಆದರೆ ಕಾಲಕ್ರಮೇಣ ಇದೇ ಸರಕಾರ ಎಲ್ಲವನ್ನು ಮರೆತು ಸುಮ್ಮನಾಗಿ ಬಿಡುತ್ತದೆ. ಮತ್ತೊಂದು ಇಂತಹ ಅಹಿತಕರ ಘಟನೆ ನೆಡೆದಾಗ ಮತ್ತೆ ಅದೇ ಲೋಕ ಮೆಚ್ಚುವ ಹೇಳಿಕೆಗಳನ್ನು ಕೊಡುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಉಗ್ರಗಾಮಿಗಳು ನೆಡೆಸುವ ಇಂತಹ ಹೀನ ಕೃತ್ಯಗಳಿಗೆ ನೂರಾರು ಅಮಾಯಕರು ಹಾಗೂ ನಮ್ಮ ಯೋಧರು ಬಲಿಯಾಗುವುದಂತು ಸತ್ಯ. ಮಿಕ್ಕೆಲ್ಲ ವಿಚಾರಗಳು ಮಿಥ್ಯ ಅಂದರೆ ಉಗ್ರರನ್ನು ಮಟ್ಟ ಹಾಕುವ, ರಕ್ಷಣಾ ವ್ಯವಸ್ಥೆಯನ್ನು ಬಿಗಿಗೊಳಿಸುವ, ನಮ್ಮ ದೇಶವನ್ನು ಶಾಂತಿನಾಡಾಗಿಸುವ ವಿಚಾರ.. ಇನ್ನೂ ಮುಂತಾದವು.

"ಇದನ್ನೆಲ್ಲ ಗಮನಿಸುತ್ತಾ ಹೋದರೆ ಸರಕಾರ ಭಯೋತ್ಪಾದನೆಯನ್ನು ನಿಯಂತ್ರಸುತ್ತದೇಯೋ? ಇಲ್ಲ ಭಯೋತ್ಪಾದನೆಯೇ ಸರಕಾರವನ್ನು ನಿಯಂತ್ರಸುತ್ತಿದೇಯೋ?" ಎನ್ನುವ ಅನುಮಾನ ನಮ್ಮನ್ನು ಕಾಡುವುದು ಸಹಜ. “ನಮ್ಮ ಸರಕಾರ ಎಚ್ಚೆತ್ತು ಕೊಳ್ಳುವುದಾದರೂ ಎಂದು? ನಮ್ಮ ರಕ್ಷಣಾ ವ್ಯವಸ್ಥೆ ಇಡಿ ವಿಶ್ವದಲೇ ಅಷ್ಟನೇ ಸ್ಥಾನದಲ್ಲಿ ಇದೇ, ಇಷ್ಟನೇ ಸ್ಥಾನದಲ್ಲಿ ಇದೇ ಎಂದು ಬಡಾಯಿ ಕೊಚ್ಚಿಕೊಳ್ಳುವ ಪ್ರವೃತ್ತಿಯನ್ನು ಬಿಟ್ಟು ಉಗ್ರರನ್ನು ತ್ವರಿತವಾಗಿ ಹೇಗೆ ಮಟ್ಟ ಹಾಕಬೇಕು” ಎನ್ನುವ ವಿಚಾರದ ಬಗ್ಗೆ ಸರಕಾರ ಗಮನ ಹರಿಸಬೇಕಾಗಿದೆ.

ಪ್ರತಿವರುಷವೂ ಬಜೆಟ್‌ನಲ್ಲಿ ಕೇಂದ್ರ ಸರಕಾರ ನಮ್ಮ ದೇಶದ ರಕ್ಷಣಾ ವ್ಯವಸ್ಥೆಗೆಂದೆ ಸುಮಾರು 40 ಸಾವಿರದಿಂದ 45 ಸಾವಿರ ಕೋಟಿಗಳವರೆಗೂ ಮೀಸಲು ಇಡುತ್ತದೆ. ಆದರೆ ರಕ್ಷಣಾ ಇಲಾಖೆಯಲ್ಲಿರುವ ಬಹುತೇಕ ಪೋಲಿಸ್‌ರ ಬಳಿಯಾಗಲಿ ಇಲ್ಲವೇ ಯೋಧರ ಬಳಿಯಾಗಲಿ ಇರುವುದು 303 ರೈಫಲ್‌ಗಳಂತೆ (ಸುಮಾರು ನಲವತ್ತು ವರುಷಗಳಿಂದ ನಮ್ಮೂರ ನಂಜುಂಡಜ್ಜನ ಬಳಿಯಲ್ಲೂ ಇರೊದು ಅದೇ ಮಾಡೆಲ್‌ನ ರೈಫಲ್!), ಗುಂಡು ನಿರೋಧಕ ಕವಚಗಳು ನೂರಕ್ಕೆ ಹತ್ತು ಇಲ್ಲವೇ ಇಪ್ಪತ್ತು ಜನರ ಇವೆಯಂತೆ. ಇದು ಎಂತಹ ವಿಪರ್ಯಾಸ ನೋಡಿ. ಅಲ್ಲದೇ ಕಠಿಣ ತರಬೇತಿ ಪಡೆದ ಬಹುತೇಕ ಕುಶಲಯೋಧರು (ಊದಾ: NSG Commands). ನಮ್ಮ ದೇಶದ ರಕ್ಷಣೆಯಲ್ಲಿ ಕಾರ್ಯನಿರ್ವಹಿಸದೆ ನಮ್ಮ ರಾಜಕಾರಣಿಗಳ ಕಾವಲುಗಾರನಾಗಿ ಕೆಲಸ ಮಾಡಬೇಕು. “ಮಳ್ಳರೂಪದ ಕಳ್ಳರ ರಕ್ಷಣೆಗೆ ಕಾವಲುಗಾರರಾಗಿ ನಮ್ಮ ಯೋಧರುಗಳು ಇರಬೇಕೇ??”

ಇಷ್ಟೆಲ್ಲಾ ಉಪಯೋಗ ಪಡೆದುಕೊಳ್ಳುವ ರಾಜಕಾರಣಿಗಳು ಬೊಕ್ಕಸದಿಂದ ಹಣವನ್ನು ನೆರವಿನ ರೂಪದಲ್ಲಿ ಕೊಡುವ ಬದಲು ತಮ್ಮ ಒಂದು ತಿಂಗಳ ವೇತನವನ್ನು (ಸಂಸತ್ ಸದಸ್ಯರು, ರಾಜ್ಯಗಳ ವಿಧಾನ ಸಭೆಯ ಸದಸ್ಯರುಗಳು) ನೆರವಿನ ರೂಪದಲ್ಲಿ ಕೊಡಲಿ. ಆಗ ಅದು ನಿಜವಾದ ನೆರವಿನ ಧನವೆಂದು ಅನಿಸಿಕೊಳ್ಳತ್ತದೆ.

ಇನ್ನೂ ಇಡಿ ದೇಶವೇ ಶೋಕಸಾಗರದಲ್ಲಿ ಮುಳುಗಿದ್ದ ಆ ದಿನದಂದು ನಮ್ಮ ದೇಶದ ಭಾವಿ ಪ್ರಧಾನಿಯೆಂದು ಬಿಂಬತವಾಗಿರುವ ರಾಹುಲ್‌ಗಾಂಧೀ ಗೆಳೆಯನ ಮದುವೆ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದನಂತೆ. ನೋಡಿ ದೇಶವನ್ನು ಆಳುವುದಕ್ಕೆ ಇಂತಹವರುಗಳನ್ನು ನಾವುಗಳು ಆಯ್ಕೆಮಾಡಿ ಕಳಿಸುತ್ತೇವೆ. ಇಷ್ಟೆಲ್ಲಾ ಮಾಡುವ ಅವರಿಗೆ, ನಮ್ಮ ಕೇಂದ್ರ ಸರಕಾರಕ್ಕೆ ಉಗ್ರರನ್ನು ಹತ್ತಿಕ್ಕಲು ಹೋರಾಡಿ ಪ್ರಾಣತೆತ್ತ ಯೋಧರ ಗೌರವರ್ಥವಾಗಿ ಒಂದು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಬೇಕೆಂಬ ಒಂದು ಸಾಮಾನ್ಯ ಪರಿಜ್ಞಾನ ಇದ್ದಂತಿಲ್ಲ!

ಒಂದೆಡೆ ಉಗ್ರರು ನಮ್ಮ ದೇಶದ ಮಾನವನ್ನು, ಅಮಾಯಕ ಜನರ ಪ್ರಾಣವನ್ನು ಬಹಿರಂಗವಾಗಿ ಹರಾಜು ಹಾಕುತ್ತಿದ್ದರೆ, ಇನ್ನೊಂದೆಡೆ ಈ ನಮ್ಮ ರಾಜಕಾರಣಿಗಳು ಹಾಗೂ ಭ್ರಷ್ಟಸರಕಾರಿ ಅಧಿಕಾರಿಗಳು ಅಂತರಿಕವಾಗಿ ನಮ್ಮ ದೇಶವನ್ನು ಸುಲಿಗೆ ಮಾಡುತ್ತಿದ್ದಾರೆ.

“ಇಂತಹ ಒಂದು ದೇಶವನ್ನು ರಾಮರಾಜ್ಯವಾಗಿಸುವ ಕನಸನ್ನು ನಾನು ಕಂಡಿದ್ದೆನಾ?” ಎಂದು ಪರಲೋಕದಲ್ಲಿರುವ ಮಹಾತ್ಮ ಗಾಂಧೀಜಿಯವರ ಆತ್ಮ ಅಂದುಕೊಂಡೀತು ಜೋಕೆ!

ಕೊನೆಯದಾಗಿ.. ಭಾರತ ದೇಶದ ಪ್ರಜೆಗಳಾದ ನಾವುಗಳು ಸಹ ಕಲಿಯಬೇಕಿರುವುದು ಬಹಳಷ್ಟಿದೆ.
“ಕ್ರಿಕೆಟ್” ಎನ್ನುವ ಆಟಕ್ಕೆ ಕೊಡುವ ಮಹತ್ವವನ್ನು ನಾವುಗಳು ದೇಶವು ಶೋಚನೀಯ ಪರಿಸ್ಥಿತಿಯಲ್ಲಿರುವಾಗಲೂ ಕೊಡುವುದಿಲ್ಲ. ಅವರುಗಳು ಆಟದಲ್ಲಿ ಗೆಲ್ಲಲಿ ಎಂದು ಹೋಮ, ಪೂಜೆ, ಪುನಸ್ಕಾರ ಎಲ್ಲ ಮಾಡುತ್ತೇವೆ. ಕ್ರಿಕೆಟ್ ಆಟಗಾರರಿಂದ ದೇಶಕ್ಕೆ ಆಗಿರುವ, ಇಲ್ಲವೇ ನಮಗೆ ಆಗಿರುವ ಅನುಕೂಲಗಳೇನು? ಎಂದು ನಾವು ಯಾವತ್ತಾದರೂ ಯೋಚಿಸಿದ್ದೇವೆಯೇ? ಇದು ಒಂದು ಉದಾಹರಣೆಯಷ್ಟೇ, ಇಂತಹ ನೂರೆಂಟು ಉದಾಹರಣೆಗಳಿವೆ. ಹಾಗಂತ ಕ್ರಿಕೆಟ್ ಆಟಗಾರರನ್ನು ದೂಶಣೆ ಮಾಡುವ ಪ್ರಯತ್ನ ನಾ ಮಾಡುತ್ತಿಲ್ಲ. ಆದರೆ ನಮ್ಮ ಭಾರತದಲ್ಲಿ ಇರುವ ಪ್ರಸ್ತುತ ಚಿತ್ರಣವನ್ನು ಹೇಳಿರುವೆನು. ಅದನ್ನೆಲ್ಲಾ ಬಿಡಿಸಿ ಹೇಳುವ ಅಗತ್ಯವಿಲ್ಲ ಎಂದುಕೊಂಡಿರುತ್ತೇನೆ......

ನನ್ನ ಈ ಲೇಖನವೂ ಸಮಯೋಚಿತವಾಗಿಯೂ ಹಾಗೂ ತರ್ಕಬದ್ಧವಾಗಿಯೂ ಇರುವುದೆನ್ನುವ ಆಶಯದೊಂದಿಗೆ ಈ ಲೇಖನವನ್ನು ಮುಕ್ತಾಯಗೊಳಿಸುತ್ತಿದ್ದೇನೆ. .
ಜೈ ಭಾರತ ಮಾತೆ..
-ನಿಮ್ಮ ಸುನಿಲ್ ಮಲ್ಲೇನಹಳ್ಳಿ