ಮಂಗಳವಾರ, ಮಾರ್ಚ್ 10, 2009

ನಮ್ಮ ಅಂತರಂಗ, ನಮ್ಮ ಬಹಿರಂಗ ಆಗಿರಲಿ ನಮ್ಮ ಕನ್ನಡ ಚಲನಚಿತ್ರರಂಗ!


ಎಲ್ಲರಿಗೂ ನಮಸ್ಕಾರ, ಮೊನ್ನೆ ತಾನೇ ನಮ್ಮ ಕನ್ನಡ ಚಲಚಿತ್ರರಂಗದ ಅಮೃತ ಮಹೋತ್ಸವದ ಆಚರಣೆ ಸಂಭ್ರಮ, ಸಡಗರ ಹಾಗೂ ವೈಭವತೆಯಿಂದ ನೆರೆವೆರಿದ್ದು, ಕನ್ನಡಿಗರಿಗೆಲ್ಲ ಒಂದು ಬಗೆಯ ಸಂತಸವನ್ನು ತಂದಿದೆ. ಆ ಮಹೋತ್ಸವದ ಸುಂದರ ಚಿತ್ರಣ ನಮ್ಮ ಕಣ್ಣಲ್ಲಿ ಇನ್ನೂ ಮಾಸದೇ ಇರುವಾಗ. ಕನ್ನಡ ಚಿತ್ರರಂಗವು ಸಾಗಿ ಬಂದ ದಾರಿಯನ್ನು ತಿಳಿಸುವ ಸಲುವಾಗಿ ಒಂದು ಸಂಕ್ಷಿಪ್ತ ಲೇಖನವನ್ನು ಬರೆದಿರುವೆನು. ಬಿಡುವಿನ ವೇಳೆಯಲ್ಲಿ ಓದಿರಿ.

ನಮ್ಮ ಕನ್ನಡ ಚಲನಚಿತ್ರರಂಗದ ಅಮೃತ ಮಹೋತ್ಸವನ್ನು (ಎಪ್ಪತ್ತೈದನೇಯ ವರುಷದ) ಬಹಳ ಸಂಭ್ರಮ, ಸಡಗರ ಹಾಗೂ ವಿಜೃಂಭಣೆಯಿಂದ ಕನ್ನಡ ಚಲನಚಿತ್ರರಂಗದ ಕುಟುಂಬ ವರ್ಗದವರು ಆಚರಣೆ ಮಾಡಿದ್ದನ್ನು ನಾವುಗಳು ಪೇಪರಗಳಲ್ಲಿ, ಟಿವಿಗಳಲ್ಲಿ ನೋಡಿದ್ದೇವೆ (ಕೆಲವರು ಕಣ್ಣಾರೆ!). ಈವೊಂದು ಅಮೃತ ಮಹೋತ್ಸವನ್ನು ಆಚರಣೆ ಮಾಡುವರೆಗೂ ನಮ್ಮ ಕನ್ನಡ ಚಿತ್ರರಂಗ ಬೆಳೆದದ್ದು ಕನ್ನಡಿಗರಾದ ನಮಗೆಲ್ಲ ನಿಜಕ್ಕೂ ಬಹಳ ಸಂತೋಷ ಮತ್ತು ಹೆಮ್ಮೆಯ ಪಡುವಂಥ ಸಂಗತಿ . ಯಾಕೆಂದರೆ ನಾವುಗಳು ಕಂಡಹಾಗೆಯೇ ನಮ್ಮ ಕನ್ನಡ ಚಿತ್ರರಂಗವು ಎದುರಿಸಿದ ಸಂಕಷ್ಟಗಳು, ಎಳು ಬೀಳುಗಳು ಒಂದಾ? ಎರಡಾ? ಬಹಳಷ್ಟು. ನೆರೆಹೊರೆ ಭಾಷೆಯ ಚಲನಚಿತ್ರ ಉದ್ಯಮೆಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದದ್ದು, ಒಮ್ಮೊಮ್ಮೆ ಸಾಲು ಸಾಲು ಕಳಪೆ ಚಿತ್ರಗಳನ್ನು ಕೊಟ್ಟಿದ್ದು, ಉತ್ತಮ ಚಿತ್ರಗಳನ್ನು ಕೊಡಲು ಸಾಕಷ್ಟು ಸಲ ವಿಫಲರಾಗುತ್ತಿದ್ದದ್ದು, ಬಂಡವಾಳದ ಅಭಾವ. ಇವುಗಳೆಲ್ಲವುಗಳ ನಡುವೆಯೂ "ಸತಿಸುಲೋಚನದಿಂದ ಪ್ರಾರಂಭವಾದ ಕನ್ನಡ ಚಲನಚಿತ್ರರಂಗದ ಓಟವು ನಾನಾ ವಿಧದ ತೊಂದರೆ, ತೊಡಕುಗಳನ್ನುಎದುರಿಸುತ್ತಾ, ಎಳುತ್ತಾ-ಬೀಳುತ್ತಾ ಎಪ್ಪತ್ತೈದನೇಯ ವರುಷದ ಮೈಲುಗಲ್ಲನ್ನು ತಲುಪಿದೆ. ನಮಗೆ ತಿಳಿದಿರೋ ಹಾಗೆಯೇ ಇಂದು ಬೃಹದಾಕಾರವಾಗಿ ಬೆಳೆದಿರೋ ಈ ನಮ್ಮ ಕನ್ನಡ ಚಿತ್ರರಂಗದ ಉದ್ಯಮದ ಏಳಿಗೆಗೆ ಶ್ರಮಿಸಿರುವರು ನೂರಾರು ಮಂದಿ. ಆ ಮಹನೀಯರುಗಳ ಕನ್ನಡ ತಾಯಿಯ ಬಗೆಗಿನ ಅಪಾರ ಅಭಿಮಾನ, ನಿಸ್ವಾರ್ಥ ಕಲಾಸೇವೆ ಕನ್ನಡ ಚಿತ್ರರಂಗವನ್ನು ಇಂದು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಕನ್ನಡ ಚಲನಚಿತ್ರರಂಗಕ್ಕೆ ನಾಟಕ ಮಂಡಳಿಗಳು ಹಾಗೂ ರಂಗಭೂಮಿಗಳ ಕೊಡುಗೆಯನ್ನು ಸಹ ಎಂದೂ ಮರೆಯುವಾಗಿಲ್ಲ".

೧೯೫೪ರಲ್ಲಿ ಕನ್ನಡ ಚಿತ್ರರಂಗವು ೨೦ರ ಹರೆಯದ ಹೊಸ್ತಿಲಲ್ಲಿದ್ದಾಗ ಡಾ ರಾಜ್ ಕುಮಾರ್ ಅವರು ಬೇಡರ ಕಣ್ಣಪ್ಪ ಚಲನಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಲನಚಿತ್ರರಂಗಕ್ಕೆ ಕಾಲಿರಿಸಿದರು. ಅವರು ಕಾಲಿರಿಸಿದ ಸಮಯದ ಅಸುಪಾಸಿನ ಸಮಯದಲ್ಲಿ ಬಹು ಅಭಿರುಚಿಯುಳ್ಳ ನಿರ್ದೇಶಕರು, ಗೀತೆರಚನೆಕಾರರು, ಸಂಗೀತ ನಿರ್ದೇಶಕರು, ಚಿತ್ರಕಥೆಕಾರರು ಕನ್ನಡ ಚಲನಚಿತ್ರರಂಗಕ್ಕೆ ಬಂದರು. ಅವರೆಲ್ಲ ಕಾಲಿರಿಸಿದ ಗಳಿಗೆಯಲ್ಲಿ ನೋಡು, ನೋಡುತ್ತಿರುವಂತೆ ಕನ್ನಡ ಚಿತ್ರರಂಗದ ಸ್ವರೂಪವೇ ಬದಲಾಗಿ ಹೋಗಿತು. ರಾಜ್ ಅವರ ನಟನೆಯ ಜೊತೆಗೆ, ನಿರ್ದೇಶಕರುಗಳ, ಗೀತೆರಚನೆಕಾರರ, ಸಂಗೀತ ನಿರ್ದೇಶಕರುಗಳ ಕ್ರಿಯಾಶೀಲತೆ ಎಲ್ಲವೂ ಸರಿಯಾದ ರೀತಿಯಲ್ಲಿ ಬೆರೆತು ಉತ್ತಮೋತ್ತಮ ಗುಣಮಟ್ಟದ ಚಲನಚಿತ್ರಗಳು ತೆರೆಯ ಮೇಲೇರಿ ಬಂದವು.
೧೯೬೫ರಲ್ಲಿ ತೆರೆ ಕಂಡ ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ, ಕೆ ಸಿ ಏನ್ ನಿರ್ಮಾಣದ, ರಾಜ್ ಅಭಿನಯದ ಸತ್ಯ ಹರಿಶ್ಚಂದ್ರ , ಎಪ್ಪತ್ತರ ದಶಕದಲ್ಲಿ ತೆರೆಕಂಡ ಸಿದ್ದಲಿಂಗಯ್ಯನವರ ಬಂಗಾರದ ಮನುಷ್ಯ, ನಂತರದಲ್ಲಿ ಬಂದ ಕಸ್ತೂರಿ ನಿವಾಸ, ಎಮ್.ಪಿ ಶಂಕರ್ ಅವರ ಗಂಧದ ಗುಡಿ, ಭೂತಯ್ಯನ ಮಗ ಅಯ್ಯು, ರಾಮ ಲಕ್ಷ್ಮಣ. ತರಾಸು ಅವರ ಕಾದಂಬರಿಯಾದರಿತ, ಪುಟ್ಟಣ್ಣ ಕಣಗಾಲ್ ನಿರ್ದೇಶನದ , ವಿಷ್ಣುವರ್ದನ್ ಅಭಿನಯದ ನಾಗರ ಹಾವು, ನಾಗ್ ಸಹೋದರರು ಅಭಿನಯಿಸಿದ ನೋಡಿ ಸ್ವಾಮಿ ನಾವಿರೋದು ಹೀಗೆ ಇನ್ನೂ ಹತ್ತು ಹಲವಾರು ಸಿನಿಮಾಗಳು ಇಂದಿಗೂ ಸಹ ಕನ್ನಡ ಚಿತ್ರರಸಿಕರ ಮನದಾಳದಲ್ಲಿ ಹಸಿರು ನೆನಪಾಗಿ ಉಳಿದಿವೆ.ಈ ರೀತಿಯ ಚಲನಚಿತ್ರಗಳನ್ನು ಮತ್ತೆ ಮತ್ತೆ ನೋಡುವ ಆಸೆ ನಮ್ಮಗಳ ಮನದಲ್ಲಿ ತುಂಬಿಕೊಡಿರುವುದಂತು ಬಹಳ ಸಹಜದ ಸಂಗತಿ. ಪುಟ್ಟಣ್ಣ ಕಣಗಾಲ್, ಎಂ.ಪಿ. ಶಂಕರ್, ಶಂಕರ್ ನಾಗ್ ಅಂಥವರು ನಿರ್ದೇಶಕರಾಗಿ ಕನ್ನಡ ಚಲನಚಿತ್ರರಂಗದ ಏಳಿಗೆಗೆ ತಮ್ಮನ್ನು ತಾವು ಪರಿಪೂರ್ಣವಾಗಿ ಅರ್ಪಿಸಿಕೊಂಡಿದ್ದರು.

ಕನ್ನಡ ಚಲನಚಿತ್ರರಂಗದಲ್ಲಿ ನಟರುಗಳ ನಟನೆಗೆ ಸಮವಾಗಿ ಮೂಡಿ ಬಂದಂತಹ ಚಲನಚಿತ್ರ ಸಾಹಿತಿಗಳ ಮಧುರ, ಭಾವನಾತ್ಮಕ ಪದಗಳಿಂದ ಕೂಡಿದ ಅರ್ಥಪೂರ್ಣ ಸಾಹಿತ್ಯ ರಚನೆಯ ಕೊಡುಗೆಯನ್ನು ಯಾವ ಸನ್ನಿವೇಶದಲ್ಲೂ ಮರೆಯುವಾಗಿಲ್ಲ. ಉದಯಶಂಕರ್, ಆರ್ ಎನ್ ಜಯಗೋಪಾಲ್, ವಿಜಯ ನಾರಸಿಂಹ ಹಾಗೂ ಈಚಿನ ದಿನಗಳಲ್ಲಿ ಜಯಂತ್ ಕಾಯ್ಕಿಣಿ, ಕವಿರಾಜ್ ಮುಂತಾದ ಸಾಹಿತಿಗಳು ಅತ್ಯದ್ಭುತವಾದ ಗೀತೆ ರಚನೆ ಮಾಡಿರುವರು.. ಮಾಡುತ್ತಲೂ ಇರುವರು. ಅಲ್ಲದೇ ಪಿಬಿ ಶ್ರೀನಿವಾಸ್, ಎಸ್.ಪಿ.ಬಿ ಯವರು, ಎಸ್ ಜಾನಕಿ ಕನ್ನಡಿಗರಲ್ಲದಿದ್ದರು ಕನ್ನಡದ ಬಹುಪಾಲು ಚಲನಚಿತ್ರಗಳಲ್ಲಿ ಹಿನ್ನಲೆ ಗಾಯಕರಾಗಿ ಗೀತೆಗಳನ್ನು ತಮ್ಮ ತಮ್ಮ ಮಧುರ ಕಂಠದಿಂದ ಹಾಡಿ ಕನ್ನಡ ಚಿತ್ರಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಹಂಸಲೇಖ ಅವರು ಗೀತೆರಚನೆಕಾರರಾಗಿ, ಸಂಗೀತ ನಿರ್ದೇಶಕರಾಗಿ ಹೊಸ ಹೊಸ ಪ್ರಯೊಗ ಮಾಡಿ ಎಂಬತ್ತು, ತೊಂಬತ್ತರ ದಶಕದಲ್ಲಿ ಕನ್ನಡ ಚಲನಚಿತ್ರರಂಗದಲಿ ಹೊಸ ಅಲೆಯನ್ನೇ ಎಬ್ಬಿಸಿದ್ದರು.
ಇವರೆಲ್ಲರ ನೆನಪಿನ ಜೊತೆಗೆ ಕನ್ನಡದ ಚಾರ್ಲಿ ಚಾಪ್ಲಿನ್ ನರಸಿಂಹರಾಜು ಅವರನ್ನು ನೆನಪಿಸಿಕೊಳ್ಳದಿದ್ದರೆ ಯಾವ ನ್ಯಾಯಕ್ಕೆ ಸಾಕಾದೀತು! ಕನ್ನಡ ಚಿತ್ರರಂಗ ಕಂಡ ಅಪರೂಪದ ಹಾಸ್ಯ ಕಲಾವಿದ ಅವರು. ರಾಜ್ ಅವರ ಚಿತ್ರಗಳಲ್ಲಿ ನರಸಿಂಹರಾಜು ಅವರು ಇದ್ದರೇನೇ ಆ ಚಿತ್ರ ಹೆಚ್ಚು ತೂಕಯುತವಾಗಿರುತ್ತಿತ್ತು. ಎಷ್ಟೋ ಜನ ಪರಭಾಷಾ ಕಲಾವಿದರು ಕನ್ನಡದಲ್ಲಿ ತಮ್ಮ ವೃತ್ತಿ ಜೀವನದ ಮೊದಲ ಚಿತ್ರಗಳನ್ನು ಕನ್ನಡದಲ್ಲಿ ಮಾಡಿ ನಂತರ ಬಾಲಿವುಡ್ ನಲ್ಲೋ, ಕೊಲಿವುಡ್ ನಲ್ಲೋ ಮಿಂಚಿರುವರು..ಮಿಂಚುತ್ತಲೂ ಇರುವರು.

ನಮ್ಮ ಕನ್ನಡ ಸಿನಿಮಾ ಮಾಡುವವರಿಗೆ ಒಂದಷ್ಟು ಕಿವಿ ಮಾತುಗಳನ್ನು ಹೇಳಬೇಕಾದ ಪರಿಸ್ಥಿತಿ ಕನ್ನಡಿಗರದ್ದಾಗಿದೆ.
“ನಿರ್ದೇಶಕರೇ, ನಿರ್ಮಾಪಕರೇ ಈ ಬಣ್ಣದ ಲೋಕದ ಆಟದಲಿ
ಎಳು ಬೀಳು ಎಲ್ಲ ಮಾಮೂಲಿ ಆಗದಿರಲಿ ನಿಮ್ಮ ಸ್ವಂತಿಕೆಯು ಖಾಲಿ!
ಇನ್ನಾದರೂ, ಹೇಗದರೂ ಬಿಟ್ಟುಬಿಡಿ ರಿಮೇಕ್ ಗಳನ್ನು ಮಾಡುವ ಚಾಳಿ!
ಇಂದಾದರೂ ಎಲೆಲ್ಲೂ ಬೀಸುವನ್ತಾಗಲಿ ಕನ್ನಡ ತನದ ಸುಮಧುರ ಗಾಳಿ”
ಇಂದು ನಮ್ಮ ಕನ್ನಡ ಚಿತ್ರರಂಗ ಸಾವಿರಾರು ಜನ ಕಲಾವಿದರ ಬದುಕಿಗೆ ಆಸರೆಯಾಗಿದೆ. ಈ ಬಣ್ಣದಲೋಕ ಕೆಲವರ ಪಾಲಿಗೆ ವರದಾನವಾಗಿರುವುದುಂಟು, ಅವರು ಮಾಡಿದ್ದು, ಆಡಿದ್ದು, ಹಾಡಿದ್ದು ಎಲ್ಲವೂ ಚಿನ್ನವಾಗಿರುವುದುಂಟು.

ಇನ್ನ ಹಲವರ ಪಾಲಿಗೆ ಈ ಬಣ್ಣದಲೋಕವು ಸಂಕಷ್ಟಗಳ ಸರಮಾಲೆಯನ್ನೇ ತಂದಿರುವುದುಂಟು. ಹಲವಾರು ದಿನಗಳಿಂದ ನನಗೇಕೋ http://mleelavathi.com/ ಈ ಲಿಂಕ್ನಲ್ಲಿ ಇರುವವರ ಬಗ್ಗೆ ಏನದರೂ ಬರೆಯಬೇಕೆಂದು ಆಸೆಯಿತ್ತು. ಅಂದಹಾಗೆ ಅದರಲ್ಲಿರುವ ಭಾವಚಿತ್ರಗಳು ಯಾವ ಖ್ಯಾತನಟಿಯದು ಎಂದು ಈ ವೇಳೆಗಾಗಲೇ ನೀವು ಗುರುತ್ತಿಸಿರುತ್ತಿರಿ.

ಇವರ ಬಗ್ಗೆ ಬರೆಯಲು ಸಮಯ ಒದಗಿಬಂದದ್ದು ಮೊನ್ನೆ. ಎಂದಿನಂತೆ ಆ ದಿನದ ದಿನಪತ್ರಿಕೆಯ ಒಳಪುಟಗಳನ್ನು ತಿರುವಿ ಹಾಕುತ್ತಿರುವಾಗ. ಈ ನಮ್ಮ ಕನ್ನಡ ಚಿತ್ರರಂಗದ ಮಾಜಿ ಖ್ಯಾತನಟಿ ಚೆನ್ನೈನಲ್ಲಿದ್ದ ತಮ್ಮ ಆಸ್ತಿಯನ್ನು ಮಾರಿ ನೆಲಮಂಗಲದ ಸಮೀಪದಲ್ಲಿರುವ ಸೋಲ್ದೇವನಹಳ್ಳಿಯ ಬಳಿ ಬಡವರಿಗಾಗಿ ಆಸ್ಪತ್ರೆಯೊಂದನ್ನು ಕಟ್ಟಿರುವ ವಿಷಯವನ್ನು ಓದಿದೆ. ನಿಜಕ್ಕೂ ಬಹಳ ಖುಷಿಯಾಯಿತು. ಈ ಸೌಂದರ್ಯ ದೇವತೆ ೬೦-೭೦ರ ದಶಕದಲ್ಲಿ ಬಣ್ಣದ ಲೋಕದಿಂದ ಕನ್ನಡ ಚಿತ್ರರಸಿಕರ ಮನವನ್ನು ಗೆದ್ದಿದೇನೋ ನಿಜ. ಆದರೆ ಅವರ ನಿಜ ಜೀವನವೆಲ್ಲ ಎಷ್ಟು ಯಾತನಾಮಯವಾಗಿ ಸಾಗುತ್ತಿದೆಯೆಂಬುದು ನಮಗೆಲ್ಲ ತಿಳಿದಿದೆ. ಬದುಕಿನ ಉದಕ್ಕೂ ಬರಿ ಕಷ್ಟವನ್ನೇ ಅನುಭವಿಸುತ್ತಾ ಬಂದಿರುವ ಜೀವವದು. ಕೆಲದಿನಗಳ ಹಿಂದೆ ಕನ್ನಡದ ಮಾಸಿಕ ಪತ್ರಿಕೆ ಮಯೂರದಲ್ಲಿ ಲೀಲಾವತಿಯವರೊಂದಿಗೆ ನಡೆಸಿದ ಸಂದರ್ಶನದ ಭಾಗವನ್ನು ಓದಿದಾಗ ನನ್ನ ಮನ ಕಲಕಿತು. ಅವರ ಜೀವನದಲ್ಲಿ ಎದುರಿಸಿದ ಸಂಕಷ್ಟಗಳು, ನೂರೆಂಟು ಅಡಚಣೆಗಳು, ಚಲನಚಿತ್ರ ನಿರ್ಮಾಪಕರಿಂದ ಎಷ್ಟೋ ಸಲ ಸರಿಯಾದ ಸಂಭಾವನೆ ಸಿಗದೆ ಹೋಗಿ ಮೋಸವಾದುದ್ದು. ಇಷ್ಟೆಲ್ಲ ಆದರೂ ಈ ಮಹಾತಾಯಿ ಯಾವಾಗಲೂ ತಮ್ಮ ಕೈಯಲ್ಲಿ ಆಗುವ ಸಮಾಜ ಸೇವೆ ಹಾಗೂ ತಮ್ಮ ಕೈಯಲ್ಲಿ ಆಗುವ ಕನ್ನಡ ಚಲನಚಿತ್ರಗಳನ್ನು ನಿರ್ಮಿಸುತ್ತಾ, ಮಾಡುತ್ತಾ ಬಂದಿದ್ದಾರೆ. ಕಣ್ಣಿಲ್ಲದ ನಮ್ಮ ಸರಕಾರಕ್ಕೆ ಇವರೆಗೂ ಅವರ ಸಾಧನೆಯನ್ನು ಸರಿಯಾಗಿ ಗುರುತಿಸಲಾಗಿಲ್ಲ. ಅಂದಹಾಗೆ ಲಿಲಾವತಿಯವರು ಕನ್ನಡ ಚಲಚಿತ್ರದ ಅಮೃತ ಮಹೋತ್ಸವಕ್ಕೆ ಬಂದಿದ್ದನ್ನು ನಾನು ಕಾಣಲಿಲ್ಲ ನೀವೇನಾದರೂ ಕಂಡಿರಾ? ಮೇಲೆ ನಾನು ಹೇಳಿದ ಲೀಲಾವತಿಯವರ ವಿಚಾರ ಒಂದು ಉದಾಹರಣೆ ಇವರ ರೀತಿ ಸರಕಾರದಿಂದ, ಜನತೆಯಿಂದ ನಿರ್ಲಕ್ಶಕ್ಕೊಳಗಾದ ತೇರೆ ಮೇಲೆಯೇ ತೇಲಿವೊದ “ಕಲಾಜೀವಗಳು” ಬಹಳಷ್ಟು.
ಕನ್ನಡದ ಚಿತ್ರಗಳಲ್ಲಿ ಪೋಷಕ ನಟ ಪಾತ್ರ ಮಾಡುತ್ತಿದ್ದ ರಾಜಾನಂದ ನಿಮಗೆ ನೆನಪಿರಬೇಕಲ್ಲವೇ?? ಆ ಅವರು ತೀರ ಹೋದ ಮೇಲಂತು ಅವರ ಕುಟುಂಬ ತುಂಬಾ ದಯಾನೀಯ ಸ್ಥಿತಿಯಲ್ಲಿದೆ ಎನ್ನುವ ವಿಷಯ ನಿಮಗೆ ತಿಳಿದಿರುತ್ತದೇ ಅಲ್ಲವೇ??
ಕನ್ನಡಕ್ಕಾಗಿ, ಕನ್ನಡ ಚಿತ್ರರಂಗಕ್ಕಾಗಿ ದುಡಿದು, ಮಡಿದ ಜೀವಗಳ ಬಗ್ಗೆ ಸ್ವಲ್ಪವಾದರೂ ಬೆಲೆ, ಗೌರವ, ಅಭಿಮಾನ ಇಟ್ಟುಕೊಳ್ಳೋಣ.

ಕೊನೆಯದಾಗಿ.............
ಕನ್ನಡ ಜನತೆಯಲ್ಲಿ ನನ್ನದೊಂದು ವಿನಮ್ರ ವಿನಂತಿ..ಈಚಿನ ದಿನಗಳಲ್ಲಿ ಕನ್ನಡದಲ್ಲಿಯೂ ಸಹ ಒಳ್ಳೊಳ್ಳೆ ಸಾಹಿತ್ಯ, ಕಥೆ ಹಾಗು ದೃಶ್ಯಾವಳಿಗಳುಳ್ಳ ಚಲನಚಿತ್ರಗಳು ತೆರೆ ಕಾಣುತ್ತಿವೆ. ದಯಮಾಡಿ ತಾವುಗಳು ಹಿಂದಿ, ತೆಲುಗು, ತಮಿಳು ಸಿನಿಮಾಗಳನ್ನು ನೋಡುವುದನ್ನು ಕಡಿಮೆ ಮಾಡಿ ಕನ್ನಡ ಚಲಚಿತ್ರಗಳ ಬಗ್ಗೆ ಆದಷ್ಟೂ ಗಮನ ಹರಿಸಿ. ಯಾಕೆಂದರೆ ನಮ್ಮ ಕನ್ನಡ ಸಿನಿಮಾಗಳನ್ನು ನಾವು ನೋಡದೆ ಪರಭಾಷೆಯವರು ನೋಡುತ್ತಾರೆಯೇ??ತಮಿಳು ಫಿಲ್ಮ್ ನಲ್ಲಿ ಬರುವ Creativity ಈಗ ಕನ್ನಡದಲ್ಲೂ ಬರುತ್ತಿದೆ, ತೆಲುಗು ಫಿಲ್ಮ್ ನಲ್ಲಿ ಬರುವ Love Story ಯಂಥ ಸಿನಿಮಾಗಳು ಈಗ ಕನ್ನಡದಲ್ಲೂ ಬರುತ್ತಿವೆ..ನಾವುಗಳು ನೋಡುವ ಪ್ರಯತ್ನ ಮಾಡಬೇಕಷ್ಟೆ. ಇದಕ್ಕೆ ನಿಮ್ಮ ಸಮ್ಮತಿ ಇದೆ ಅಲ್ಲವೇ?
- ನಿಮ್ಮ ಸುನಿಲ್ ಮಲ್ಲೇನಹಳ್ಳಿ

11 ಕಾಮೆಂಟ್‌ಗಳು:

manjunath Shanubhoganahalli ಹೇಳಿದರು...

Sir Nice article about our kannda Industry , yes If the filem like "Mungaru Male" ,"Duniya" etc comes definitely pople would watch even tend to make other to watch. I wish you Kannda industry would emerg good way at 100 th year !!

Manjunath S J

ಬಾಲು ಹೇಳಿದರು...

ಕನ್ನಡ ದಲ್ಲಿ ಮೊದಲು ಪೌರಾಣಿಕ ಚಿತ್ರ ಗಳು ಬರುತ್ತಾ ಇದ್ದವು, ನ೦ತರ ಕಾದ೦ಬರಿ ಆಧಾರಿತ ಸಾಮಾಜಿಕ ಚಿತ್ರಗಳು, ಕನ್ನಡದಲ್ಲು ಫ್ಯಾ೦ಟಸಿ, ಮಕ್ಕಳ ಚಿತ್ರ ಬ೦ದವು. ಆದರೆ ಈಗ ಕತ್ತಿ ಮಚ್ಚು ಚಿತ್ರ ಗಳೆ ಕಾಣುತ್ತಿವೆ. ಎ೦ದಿಗೆ ಇ ಟ್ರೆ೦ಡ್ ಮುಗಿಯುವುದೊ....

ಆಮೃತ ಮಹೋತ್ಸವ ಸ೦ದರ್ಬ ದಲ್ಲಿ ಒಳ್ಳೆಯ ಲೇಖನ.

ತೇಜಸ್ವಿನಿ ಹೆಗಡೆ ಹೇಳಿದರು...

ಸುನಿಲ್ ಅವರೆ,

ಕನ್ನಡ ಚಿತ್ರರಂಗದ ಪ್ರತಿ ಹಾಗೂ ಕಲಾಕಾರರ ಪ್ರತಿ ನಿಮಗಿರುವ ಕಳಕಳಿ, ಕಾಳಜಿ ಮೆಚ್ಚುವಂತದ್ದು. ಗುಣಮಟ್ಟದ ನಿಟ್ಟಿನಲ್ಲಿ ಹೇಳಬೇಕೆಂದರೆ ಹಿಂದಿನ ಕನ್ನಡ ಚಿತ್ರಗಳೇ ಈಗಲೂ ಶ್ರೇಷ್ಠವೆನಿಸುತ್ತವೆ. ಈಗಿನ ಹಲವಷ್ಟು ಚಿತ್ರಗಳು ಕಳಪೆಯಾಗಿಯೇ ಇರುತ್ತವೆ. ಇನ್ನು ಹಾಡುಗಳ ಸಾಹಿತ್ಯವೋ ದೇವರಿಗೆ ಪ್ರೀತಿ. ಆ ನಿಟ್ಟಿನಲ್ಲಿ ಕಾಯ್ಕಿಣಿಯವರ ಪ್ರವೇಶದಿಂದ ಸಾಹಿತ್ಯ ತುಸು ಸುಧಾರಿಸಿದೆ. ಅವರಿಂದಾಗಿಯೇ ಕನ್ನಡ ಗೀತೆಗಳನ್ನೂ(ಈಗಿನ) ಕೇಳುವಂತಾಗಿವೆ. ಸುಮಧುರವಾಗಿದೆ. ಆದರೂ ಕನ್ನಡ ಚಿತ್ರಗಳು ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಮತ್ತಷ್ಟು ಗಮನದಲ್ಲಿರಿಸಿಕೊಂಡರೆ ಮಾತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಸೆಳೆಯಬಲ್ಲವು.

ವಿನುತ ಹೇಳಿದರು...

ಥಳುಕಿನ ಬದುಕಿನ ಹಿಂದಿನ ನೋವಿನ ಬದುಕನ್ನೂ ಚೆನ್ನಾಗಿ ತೆರೆದಿಟ್ಟೀದ್ದೀರಿ. ಸಕಾಲಿಕ, ಸಮಯೋಚಿತ ಚಂದದ ಬರಹಕ್ಕಾಗಿ ಅಭಿನಂದನೆಗಳು.

shivu.k ಹೇಳಿದರು...

ಸುನಿಲ್,

ಕನ್ನಡ ಸಿನಿಮಾದ ಅಮೃತ ಮಹೋತ್ಸವ ಸಮಯದಲ್ಲಿ ಒಳ್ಳೇ ಲೇಖನವನ್ನು ಕೆಲವು ದಾಖಲೆಗಳ ಸಮೇತ ವಿವರಿಸಿದ್ದೀರಿ....ಅದರಲ್ಲೂ...ರಾಜಕುಮಾರ್, ವಿಷ್ಣುವರ್ಧನ್, ಪುಟ್ಟಣ ರಿಂದ ಇಂದಿನ ಪೀಳಿಗೆಯವರೆಗೆ ಮತ್ತು ಲೀಲಾವತಿಯವ ಬಗ್ಗೆ, ರಾಜಾನಂದ್ ಬಗ್ಗೆ ಬರೆದಿದ್ದೀರಿ....

ಅಬಿನಂದನೆಗಳು....

Ittigecement ಹೇಳಿದರು...

ಸುನಿಲ್...

ಸಮಯೋಚಿತ ಲೇಖನ..

ಈಗಿನ ಕೆಲವು ಸಿನೇಮಾಗಳು ತಾಂತ್ರಿಕವಾಗಿ ಉತ್ತಮವಾಗಿ ಬಂದಿವೆ..

ಯಾವುದಾದರೂ ಒಂದು ಸಿನೇಮಾ ಗೆದ್ದರೆ..
ಅದೇ ಸೂತ್ರವನ್ನು ಹಿಡಿದು ..
ಸಿನೇಮಾ ತೆಗೆಯುವ ಚಟ ಬಿಡಬೇಕು...

ಚಂದದ ಲೇಖನಕ್ಕೆ ..

ನಿಮ್ಮ ಕಾಳಜಿಗೆ..

ಧನ್ಯವಾದಗಳು..

heggere ಹೇಳಿದರು...

ಚಿತ್ರರಂಗದ ಬಗ್ಗೆ ನಿಮ್ಮ ಕಾಳಜಿ ಮೆಚ್ಚಬೇಕು ಸುನೀಲ್.
ಗೆದ್ದತ್ತಿನ ಬಾಲ ಹಿಡಿಯುವುದನ್ನು ಕನ್ನಡ ಚಿತ್ರರಂಗದವರು ಬಿಡಬೇಕು. ಎಲ್ಲದಕ್ಕಿಂತ ಕನ್ನಡದಲ್ಲಿ ಹೊಸತನವಿದೆ ಎಂಬುದನ್ನು ಒಂದಿಷ್ಟು ಹೊಸಬರನ್ನು ನಂಬುವುದನ್ನು ಕಲಿಯಲಿ ಎಂಬುದು ಅಮೃತ ಮಹೋತ್ಸವದ ಸಂದರ್ಭದಲ್ಲಿಯಾದರೂ ಆಶಿಸೋಣ.

ದೀಪಸ್ಮಿತಾ ಹೇಳಿದರು...

ಕನ್ನಡ ಚಲನಚಿತ್ರಗಳ ಬಗ್ಗೆ ತುಂಬ ಒಳ್ಳೆಯ ಲೇಖನ. ನಿಮ್ಮ ಕಳಕಳಿ, ನಮ್ಮೆಲ್ಲರ ಕಳಕಳಿಯೂ. ಚಿತ್ರರಂಗದ ದೊಡ್ಡವರೆಲ್ಲ ಆತ್ಮಾವಲೋಕನ ಮಾಡಿ ಕನ್ನಡ ಚಿತ್ರರಂಗವನ್ನು ಉಳಿಸಬೇಕು

ಅನಿಕೇತನ ಸುನಿಲ್ ಹೇಳಿದರು...

Hi sunil,
yaavaga geleya blog updation?
Sunil.

ಸಾಗರದಾಚೆಯ ಇಂಚರ ಹೇಳಿದರು...

ಸುನಿಲ್ ಸರ್,
ಲೇಖನ ತುಂಬಾ ಚೆನ್ನಾಗಿದೆ

ಗೌತಮ್ ಹೆಗಡೆ ಹೇಳಿದರು...

ನಾವು ಯಾರಿಗೂ ಕಡಿಮೆ ಇಲ್ಲ ಸರ್.ನಮ್ಮಲ್ಲಿ ಕೆಲವರು ಹಾಗೆ.ಒಳ್ಳೊಳ್ಳೆ ಪ್ರಯತ್ನಗಳು ಕನ್ನಡದಲ್ಲಿ ಆದಾಗ ಸರಿಯಾಗಿ ಗುರುತಿಸುವ ಕೆಲಸ ಮಾಡಲ್ಲ. ಬೇರೆ ಭಾಷೆಯ ಫಿಲಂಸ್ ಹೇಗೆ ಇದ್ರೂ ಅವರಿಗೆ ಓ.ಕೆ, ಕನ್ನಡ ಅಂದ್ರೆ ತಾತ್ಸಾರ ..